ಭಾನುವಾರ, ಮಾರ್ಚ್ 24, 2019

ಆಫೀಸ್ ಟ್ರಿಪ್ ಎಂಬ ಸುಂದರ ಅನುಭೂತಿ...

                                'ಆಫೀಸ್ ಟ್ರಿಪ್' ಇದು ಬರೀ ಶಬ್ದವಷ್ಟೇ ಅಲ್ಲ,  ಸಾವಿರಾರು ಸುಂದರ ನೆನಪುಗಳ, ನೂರಾರು ಸಿಹಿ ಭಾವಗಳ, ಹಲವು ಸಂಭ್ರಮದ ಘಳಿಗೆಗಳ, ಕೆಲವು ಹೊಸತನದ ಕ್ಷಣಗಳ ಒಟ್ಟೂ ಮೊತ್ತವೇನೋ!... 'ಕೆಲವೊಮ್ಮೆ ತಲುಪುವ ಗಮ್ಯಕ್ಕಿಂತ ಅದರೆಡೆಗಿನ ಪಯಣವೇ ಹೆಚ್ಚು ಮುಖ್ಯವೆನಿಸುತ್ತದೆ' ಈ ಮಾತಿಗೆ ಆಫೀಸ್ ಟ್ರಿಪ್ ಒಂದು ಒಳ್ಳೆಯ ದೃಷ್ಟಾಂತ! ಈ ಪ್ರವಾಸದಲ್ಲಿ ಹೊಸ ಜಾಗವೊಂದನ್ನು 'ಎಕ್ಸ್ಪೋರ್' ಮಾಡ್ತೀವಿ ಅಂತ ಅಂದ್ಕೊಂಡ್ರೆ ಮಾತ್ರ ನಮ್ಮಷ್ಟು ಮೂರ್ಖರು ಯಾರೂ ಇರಲ್ಲ ಬಿಡಿ...ನಾವು ಅಂದ್ಕೊಳ್ಳೋದೇ ಒಂದು, ಟ್ರಿಪ್ಪಲ್ಲಿ ಆಗೋದೇ ಇನ್ನೊಂದು... ಆದ್ರೆ ಖುಷಿ ಪಡೋದಕ್ಕೆ, ಸಹೋದ್ಯೋಗಿಗಳ ಜೊತೆ ಮನರಂಜನೆ ಪಡೆಯೋದಕ್ಕಂತೂ ಯಾವುದೇ ಲಿಮಿಟ್ಸ್ ಇಲ್ಲ ಬಿಡಿ !! ...

                                  ತಿಂಗಳಾನುಗಟ್ಲೆ ಕೂತು ಪ್ಲ್ಯಾನ್ ಮಾಡಿ ಹೊರಡುವ  ಕಛೇರಿ ಪ್ರವಾಸಕ್ಕಿಂತ ಧಿಡೀರ್ ಅಂತ ತೀರ್ಮಾನವಾಗೋ 'ಆಫೀಸ್ ಟ್ರಿಪ್'ಗಳೇ ಬಹಳ ಖುಷಿ ಕೊಡೋದು... 'ನಾಡಿದ್ದು ಟ್ರಿಪ್' ಎಂದು ಥಟ್ಟನೆ ಹೇಳಿದಾಗ ಆಗೋ ಖುಷಿ, ಇದು 100% ಪಕ್ಕಾನಾ? ಎಂಬ ಸಣ್ಣದೊಂದು ಗುಮಾನಿ, ಛೇ, ಹೊಸಬಟ್ಟೆ ತಗೊಳ್ಳೋದ್ಯಾವಾಗ? ಎಂಬ ಚಿಂತೆ(ಹುಡುಗಿಯರಿಗೆ ಮಾತ್ರ) - ಇವೆಲ್ಲ ಒಟ್ಟೊಟ್ಟಿಗೇ ಮನಸ್ಸಲ್ಲಿ ದಾಂಧಲೆ ಎಬ್ಬಿಸುವಾಗಿನ ಆ ಸ್ಥಿತಿ... ಅನುಭವಿಸಿದವರಿಗೇ ಗೊತ್ತು! ಇರೋ ಕೆಲ್ಸಾನೆಲ್ಲ ಹೆಂಗೆಂಗೋ ಮುಗ್ಸಿ, ಟ್ರಿಪ್ ದಿನ ಇಷ್ಟ ಇಲ್ಲ ಅಂದ್ರೂ ಕಷ್ಟಪಟ್ಟು ಐದು ಗಂಟೆಗೆ ಅಲಾರಾಂ ಇಟ್ಟು, ಆರು ಗಂಟೆಗೆ ಎದ್ದು ಬೇಗನೆ ರೆಡಿಯಾಗಿ, ಕೈಗೆ ಸಿಕ್ಕಿದ್ದನ್ನೆಲ್ಲ ಬ್ಯಾಗಿಗೆ ತುರುಕಿ ಓಡೋವಾಗ ತಲೆಯೆಲ್ಲಾ ಖಾಲಿ ಖಾಲಿ - ಮುಂದಿನ ಸವಿ ಕ್ಷಣಗಳ ದಾಖಲೀಕರಣಕ್ಕೆ !! ಎಲ್ಲರೂ ಬೇಗನೇ ಹೊರಟಿದ್ರೂ ಕೊನೆಗೆ ಬಸ್ಸೇ ಲೇಟಾಗಿಯೋ ಅಥವಾ ಅದ್ಯಾವುದೋ ಮಹಾಶಯ/ಯಿ ಬರೋದು ತಡ ಆಗಿಯೋ ಇಲ್ಲಾ ಇನ್ನೊಂದೇನೋ ಆಗಿಯೋ, ಒಟ್ನಲ್ಲಿ ಹೊರಡೋದು ಲೇಟಾಗಿಲ್ಲ ಅಂದ್ರೆ ಆ ಟ್ರಿಪ್ಪಿಗೆ ಮಜಾ ಬರೋದಿಲ್ವೇನೋ... ಅಂತೂ ಕೊನೆಗೂ ಬಸ್ಸು ಹೊರಡತ್ತೆ. ಟ್ರಿಪ್ ಅನ್ನೋ ಕನಸು ನನಸಾಗುವ ಸಮಯ ಬರತ್ತೆ....

                           ಮನೆಯಲ್ಲಿ ತುಂಬಾ ಗಲಾಟೆ ಮಾಡೋ ಮಗು ಹೊರಗೆ ಬಂದಾಗ "ಸ್ವಲ್ಪ" ಹೊತ್ತು ತುಟಿಪಿಟಿಕ್ಕೆನ್ನದೇ ಕೂತಿರುತ್ತೆ. ಆಮೇಲೆ ಒಮ್ಮೆ ರಗಳೆ ಶುರು ಮಾಡಿದ್ರೆ ಮುಗೀತು!! ಸುಮ್ಮನಿರಿಸಲು ಅಮ್ಮ ಬಹಳ ಕಷ್ಟ ಪಡಬೇಕು. ಹಾಗೇ ಟ್ರಿಪ್ಪಲ್ಲೂ ಅಷ್ಟೇ... ಬಸ್ಸು ಹತ್ತಿದ ಒಂದು ಗಂಟೆ ಹೇಗೋ ಎಲ್ಲರೂ ಮಾತಿನಲ್ಲೇ ಕಾಲ ಕಳೆಯುತ್ತಾರೆ. ಆಮೇಲೆ ಶುರುವಾಗತ್ತೆ ಆಫೀಸ್ ಟ್ರಿಪ್ಪಿನ ನಿಜವಾದ ಗಮ್ಮತ್ತು!! ಕೂತಲ್ಲೇ ಅಂತ್ಯಾಕ್ಷರಿ, ಮಧ್ಯ ಮಧ್ಯೆ ಟೀಂಗಳ ನಡುವೆ ಸುಮ್ಮ ಸುಮ್ಮನೆ ಹುಸಿ ಜಗಳ, ಯಾರೋ ಒಬ್ಬರ ಕಾಲೆಳೆದು ಎಲ್ರೂ ಮಜಾ ತಗೊಳ್ಳೋದು, ಇರೋ ಬರೋ ಹಾಡಿನ ಧಾಟಿಯೆಲ್ಲಾ ಕೆಡಿಸಿ, ಜೋರಾಗಿ ಕಿರುಚೋದು, ದಮ್ ಶರದ್ ನಲ್ಲಿ ಒಬ್ಬೊಬ್ಬರ ಅಭಿನಯ ನೋಡಿ ನಗೋದು, ಇವೆಲ್ಲ ಮುಗಿದು ಒಂದು ಸಲ ಸಾಂಗ್ ಹಾಕಿ ಕುಣಿಯಲು ಶುರು ಮಾಡಿದ್ರೆ ಸಾಕು, ಇಳಿಯೋ ಜಾಗ ಬಂದಾಗಲೇ ಎಲ್ಲ ವಾಪಸ್ಸು ಈ ಲೋಕಕ್ಕೆ ಬರೋದು....

                              ಟ್ರಿಪ್ಪಿನ ಎರಡು ಮೂರು ದಿನದ ಸಣ್ಣ ಅವಧಿಯಲ್ಲೇ ನಾವು ಎಲ್ಲರೊಂದಿಗೆ ಬೆರೆಯೋದು, ಸಹೋದ್ಯೋಗಿಗಳು ಇನ್ನಷ್ಟು ಮನಸ್ಸಿಗೆ ಹತ್ತಿರವಾಗೋದು. ಕಂಪ್ಯೂಟರಿನ ಪರದೆ ನೋಡಿ ಕೀಬೋರ್ಡ್ ಕುಟ್ಟುವುದನ್ನು ಬಿಟ್ಟು, ಆಫೀಸಿನ ನಾಲ್ಕು ಗೋಡೆಗಳಾಚೆಗೆ ಒಬ್ಬರು ಹೇಗಿರುತ್ತಾರೆ, ಅವರ ಪ್ರತಿಭೆ, ಅಭಿರುಚಿ, ಆಸಕ್ತಿಗಳೇನು ಎಂದು ಅರ್ಥವಾಗೋದು... ಆಫೀಸಲ್ಲಿ ಜನ ಹೆಚ್ಚಾದಂತೆ ವಿಭಿನ್ನತೆಗಳು ಕೂಡಾ ಜಾಸ್ತಿಯಾಗುತ್ತವೆ. ನಮ್ಮಲ್ಲೇ ಒಬ್ಬರು ತುಂಬಾ ಚೆನ್ನಾಗಿ ಹಾಡಬಹುದು, ಒಳ್ಳೆಯ ಡ್ಯಾನ್ಸರ್ ಆಗಿರಬಹುದು, ಯಾರೋ ಅತ್ಯುತ್ತಮ ಫೋಟೋ ಕ್ಲಿಕ್ಕಿಸಬಹುದು, ಒಳ್ಳೆಯ ಹಾಸ್ಯ ಮಾಡಬಹುದು, ಇನ್ಯಾರೋ ಗೂಗಲ್ ಮ್ಯಾಪ್ ನೋಡಿ ಡ್ರೈವರ್ ಗೆ ದಾರಿ ಹೇಳಬಹುದು, ಒಬ್ಬರು ಎಲ್ಲರ, ಎಲ್ಲ ಕಾರ್ಯಕ್ರಮಗಳ ಸಮರ್ಪಕ ಮೇಲ್ವಿಚಾರಣೆ ಮಾಡಬಹುದು, ಮತ್ಯಾರೋ ಸುಮ್ಮನೆ ಕಿಟಕಿಯಾಚೆ ನೋಡುತ್ತಾ ಸದ್ದಿಲ್ಲದೆ ಅವರದೇ ಕಲ್ಪನಾಲೋಕದಲ್ಲಿ ವಿಹರಿಸಬಹುದು....

                           ಕೊನೆಗೂ ನೋಡಲು ಕಾತರಿಸಿದ್ದ ಆ "ಸ್ಥಳ" ಬಂದೇ ಬಿಡುತ್ತದೆ. ಕನಸಿನ ಹಕ್ಕಿಗೆ ರೆಕ್ಕೆ ಬಲಿಯುತ್ತದೆ, ಮನ ಮರ್ಕಟವು ಕುಣಿಯಲಾರಂಭಿಸುತ್ತದೆ... ಹಲವು ಚಿಂತೆ, ಮನಸ್ತಾಪಗಳ ಬದಿಗೊತ್ತಿ ಪ್ರಕೃತಿಯ ಮಡಿಲಲ್ಲಿ ಮಗುವಾಗುವ ಸಮಯವದು - ವಿವರಿಸಲು ಕಷ್ಟ... ಇನ್ನು ಹೋದಲ್ಲಿ, ಬಂದಲ್ಲಿ, ಕುಂತಲ್ಲಿ, ನಿಂತಲ್ಲಿ, ತಿನ್ನುವಾಗ, ಮಲಗುವಾಗ ಎಲ್ಲೆಂದರಲ್ಲಿ ನಮ್ಮ ಗ್ರೂಪ್ ಸೆಲ್ಫಿಗಳ ಹಾವಳಿ ಇದ್ದಿದ್ದೇ !! ಫೋಟೋಗೆ ಪೋಸ್ ಕೊಡಲು ಹುಚ್ಚರಂತಾಡುವ ನನ್ನಂಥ ಹುಡುಗಿ, ಹುಡುಗರ ದರ್ಶನವಾಗೋದು ಈ ಟ್ರಿಪ್ಪಿನ ಸಮಯದಲ್ಲೇ... ಹಾಗೇ ಪ್ರಕೃತಿಮಾತೆಯ ಸೊಬಗನ್ನು ಕ್ಯಾಮೆರಾ ಕಣ್ಣಲ್ಲಿ ಚಂದದ ಫ್ರೇಮಿನಲ್ಲಿ ಕಾಪಿಡುವ ಛಾಯಾಗ್ರಾಹಕರ "ಕ್ರಿಯೇಟಿವಿಟಿ"ಯ ಆಳ ತಿಳಿಯುವುದೂ ಅವಾಗಲೇ !!

                              ಹಗಲು ಹಾಡಾದರೆ ರಾತ್ರಿ ಕವಿತೆ. ಬೇಕಂತಲೇ ದೆವ್ವದ ಕತೆ ಹೇಳಿ ಹೆದರುವವರನ್ನು ಹೆದರಿಸುವ, ಹೆದರದವರನ್ನು ಎಬ್ಬಿಸಿ ಎಬ್ಬಿಸಿ ನಿದ್ರಿಸಲು ಬಿಡದ ಹುಡುಗಿಯರು ಒಂದು ಕಡೆಯಾದರೆ ಹುಡುಗರದು ಬೇರೆಯೇ ಕತೆ... ರಾತ್ರಿ ಹಚ್ಚಿದ ಕ್ಯಾಂಪ್ ಫೈರಿನ ಬೆಂಕಿ ಆರಿ, ಬೋದಿ ತಂಪಾದರೂ ಅವರ ಲವ್ ಟ್ರ್ಯಾಜೆಡಿಗಳು, ಬೈಕು, ಕಾರು, ಟ್ರೆಕ್ಕಿಂಗ್ ಕತೆಗಳು ಮುಗಿಯುವ ಸುಳಿವೇ ಇಲ್ಲ !!

                                 ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಟ್ರಿಪ್ ಮುಗಿದು ವಾಪಸ್ಸು ಹೊರಡುವ ಸಮಯವಾಗಿರುತ್ತದೆ. ಖುಷಿ, ಬೇಜಾರು ಎರಡೂ ಬೆರೆತ ಸಮ್ಮಿಶ್ರ ಭಾವದಲ್ಲಿ ಪಯಣ ಸಾಗುತ್ತದೆ. ಕಳೆದ ಸವಿ ಕ್ಷಣಗಳು, ಆ ಸುತ್ತಾಟ, ಕುಣಿದಾಟ, ಮಂಗನಾಟಗಳೆಲ್ಲವೂ ಈಗ ನೆನಪ ಬುಟ್ಟಿ ಸೇರಿದ ಕುಸುಮಗಳು !! ಕೊನೆಗೂ ಊರು ಸೇರಿ ಎಲ್ಲರಿಗೂ ವಿದಾಯ ಹೇಳುವ ಘಳಿಗೆಯಲ್ಲಿ ಕಣ್ಣಲ್ಲಿ ತಳಮಳ, ಅದೇನೋ ಕಳೆದುಕೊಂಡಂತಹ ಭಾವ. ನಾಳೆಯಿಂದ ಮತ್ತದೇ ಆಫೀಸ್ ಕೆಲಸ ಎಂಬ ತುಸು ಬೇಸರ.... ಮರುದಿನದಿಂದ ಹಿಡಿದು ಇಡೀ ವಾರ ಆಫೀಸಲ್ಲಿ ಟ್ರಿಪ್ಪಿನಲ್ಲಾದ ಕತೆಗಳ ಮರು ಕ್ರೋಢೀಕರಣ, ಫೋಟೋಗಳ ಹಂಚಿಕೆ, ಜೊತೆಗೆ "ನೆಕ್ಸ್ಟ್ ಟ್ರಿಪ್ ಯಾವಾಗ?" ಎಂಬ ಆಲೋಚನೆಯ ಆರಂಭ !!

- R.R.B.

ಭಾನುವಾರ, ಮಾರ್ಚ್ 3, 2019

ಬದುಕು ಚಿಕ್ಕದು, ಬದುಕಿಬಿಡಿ ಸಾಯುವ ಮುನ್ನ !!

                                ಜೀವನ ಅನ್ನೋದು ಚ್ಯೂಯಿಂಗ್ ಗಮ್ ನ ಗುಳ್ಳೆಯ ಥರಾ. ಅವಧಿ ಕಡಿಮೆ. ಇವತ್ತು ಆರಾಮಾಗಿರೋ ನಾನು ಅರ್ಧ ರಾತ್ರಿಯಲ್ಲಿ ಹೃದಯಾಘಾತವಾಗಿ ಸಾಯಬಹುದು, ದಿನಾಲೂ ಓಡಾಡುವ ಅದೇ ರಸ್ತೆಯಲ್ಲಿ ನಾಳೆ ಅಪಘಾತವಾಗಬಹುದು, ಇದ್ದಕ್ಕಿದ್ದಂತೆ ಬಿ.ಪಿ. ಕಮ್ಮಿಯಾಗಿ ಉಸಿರು ನಿಲ್ಲಬಹುದು... ಅಂತ್ಯ ಯಾರಿಗೂ ತಿಳಿದಿಲ್ಲ, ಆದ್ರೆ ಒಂದು ಒಳ್ಳೆಯ ಆರಂಭಕ್ಕೆ ಯಾವತ್ತೂ ತಡವಾಗಿಲ್ಲ. "It's never too late to start something new..."

                     "ಈಗ ನಾವು ಬದುಕುತ್ತಿಲ್ಲವಾ?" ಎಂಬುದು ಕಾಡುವ ಪ್ರಶ್ನೆ. ಉಸಿರಾಡುತ್ತಿದ್ದೇವೆ ಅಂದ್ರೆ ಜೀವ ಇದೆ ಅಂತ ಅರ್ಥ. ಆದ್ರೆ ನಮಗಿಷ್ಟವಾಗುವ, ನಮ್ಮ ಆಯ್ಕೆಯ ಬದುಕು ನಮ್ಮದಾ? ಒಮ್ಮೆ ಆಲೋಚಿಸಿ ಸಂಪೂರ್ಣ ಯಾಂತ್ರಿಕರಾಗುವ ಮುನ್ನ !! "ನಂಗೆ ಹಾಡೋದು(ಸಾಹಿತ್ಯ, ನೃತ್ಯ, ನಾಟಕ, ಯೋಗ, ಭಾಷಣ ಏನಾದ್ರೂ ಅಂದ್ಕೊಳ್ಳಿ) ಅಂದ್ರೆ ಇಷ್ಟ. ಆದ್ರೆ ಅದನ್ನೇ ನೆಚ್ಕೊಂಡಿದ್ರೆ ಹೊಟ್ಟೆಗೆ ಏನ್ ಗತಿ?" ಅನ್ನೋ ಪ್ರಶ್ನೆಗೆ ಉತ್ತರ ನಾವೇ ಹುಡುಕಬೇಕು. ಬೆಳಿಗ್ಗೆಯಿಂದ ಸಂಜೆತನಕ ಬ್ಯಾಂಕಲ್ಲೋ, ಆಫೀಸಲ್ಲೋ ದುಡಿದು ಸಂಜೆ ಸಂಗೀತ, ನಾಟಕ, ಭರತನಾಟ್ಯ, ಯಕ್ಷಗಾನ ಕಲಿಯುವ, ಕಲಿಸುವ ಜನರು ನಮ್ಮ ನಡುವೆಯೇ ಎಷ್ಟಿಲ್ಲ? ಎಲ್ಲವೂ ಸಾಧ್ಯ - ಕಠಿಣ ಪರಿಶ್ರಮ ಮತ್ತು ಗಟ್ಟಿ ಮನಸ್ಸಿದ್ದಲ್ಲಿ... ವೃತ್ತಿ - ಪ್ರವೃತ್ತಿ ಬೇರೆಯಾದರೂ ಸಾಧಿಸುವ ಛಲವೊಂದಿದ್ದರೆ ಸಾಕು ಅದ್ಭುತಗಳ ಸೃಷ್ಟಿಗೆ, ನವ ಜೀವನದ ಪುಷ್ಟಿಗೆ !! ಏನು ಇಷ್ಟವೋ (ಒಳ್ಳೆಯ ಕೆಲಸ, ಹವ್ಯಾಸ) ಅದನ್ನೇ ಮಾಡಿದರೆ "ಬದುಕು" ಬದುಕಾಗುವುದು, ಕನಸು ನನಸಾಗುವುದು, ಸಂತಸದ ಹೊಳೆ ಹರಿಯುವುದು...

                       ಎಲ್ರೂ ಬಿ.ಕಾಂ ಮಾಡ್ತಾರೆ ಅಂತ ನಾವೂ ಅದನ್ನೇ ಮಾಡಿದ್ರೆ, ಯಾರೋ ಇಂಗ್ಲೀಷ್ ಸಾಂಗ್ ಕೇಳ್ತಾರೆ ಅಂತ ನಾವೂ ಕಷ್ಟಪಟ್ಟು ಅದನ್ನೇ ಕೇಳಿದ್ರೆ, ಜೊತೆಗೆ ಯಾರೂ ಇಲ್ಲ ಅಂತ ನಿಮಗಿಷ್ಟವಾದ ಸಿನಿಮಾಗೋ, ನೆಮ್ಮದಿ ತರೋ ಪಾರ್ಕಿಗೋ, ಹೊಸ ಜಾಗಕ್ಕೋ ಹೋಗದೇ ಇದ್ರೆ ಬದುಕು ಬೇಸರದ ಗೂಡಾಗತ್ತೆ. ಹೊರಗೆ ನಗ್ತಾ ಇದ್ರೂ ಮನಸ್ಸಾಕ್ಷಿ ಅನ್ನೋದು ಸೂಜಿ ಥರಾ ಚುಚ್ತಾ ಇರತ್ತೆ. ಎಲ್ಲೋ ಒಂದು ಕಡೆ "ನಾನು ಅವರಂತಿಲ್ಲ.." ಅನ್ನೋ ಕೀಳರಿಮೆ ಶುರುವಾಗತ್ತೆ... ಒಪ್ಪಿಕೊಳ್ಳಿ - ನಾನು ಅವರಂತಿಲ್ಲ, ನಾನು ನಾನೇ ಎಂಬ ಸತ್ಯವನ್ನು.. ಆದ್ರೆ ನೆನಪಿಡಿ, ಜಗತ್ತಿನ ಏಳುನೂರಾ ಎಪ್ಪತ್ತು ಕೋಟಿ ಜನರಲ್ಲಿ ನೀವೂ ಒಬ್ಬರು. ಆದ್ರೆ ನಿಮ್ಮಂಥದ್ದೇ ಇನ್ನೊಂದು ಜೀವ ಇಲ್ಲ!!

                              ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಸಿ.ಎ. ಹತ್ರ ಹೋಗಿ 'ಎಪಿಜೆನೆಟಿಕ್ಸ್ ಬಗ್ಗೆ ಹೇಳಿ' ಅನ್ನೋದು, ಪ್ರೈಮರಿ ಟೀಚರ್ ಹತ್ರ ಹೋಗಿ 'ಡಿ.ಟಿ.ಎ.ಎ. ಬಗ್ಗೆ ವಿವರವಾಗಿ ಹೇಳಿ' ಅನ್ನೋದು ಎರಡೂ ಒಂದೇ.. ಫಲಿತಾಂಶ ಒಂದೇ... ಅದರ ಅರ್ಥ ಅವರಲ್ಲಿ ಜ್ಞಾನ, ಪ್ರತಿಭೆ ಇಲ್ಲಾ ಅಂತ ಅಲ್ಲ, ಅದರ ವ್ಯಾಪ್ತಿ ಬೇರೆ ಬೇರೆ ಅಷ್ಟೇ !! ಹೀಗಾಗಿ ನಮ್ಮಲ್ಲಿರೋ, ನಮಗಿಷ್ಟವಾಗಿರೋ ಕೆಲಸ, ಹವ್ಯಾಸಗಳನ್ನ ಮುಂದುವರಿಸಿಕೊಂಡು ಹೋದ್ರೆ ಸಾಕು. ಖುಷಿ ತಾನಾಗೇ ನಮ್ಮನ್ನು ಹುಡುಕಿಕೊಂಡು ಬರುತ್ತೆ. ಸಂತಸ ಮನದಲ್ಲಿ ಮನೆ ಮಾಡುತ್ತೆ. ನೆಮ್ಮದಿಯ ಗುಬ್ಬಚ್ಚಿ ಮನೆಯೊಳಗೆ ಗೂಡು ಕಟ್ಟುತ್ತೆ... ಬದುಕೊಂದು ಖಾಲಿ ಹಾಳೆ. ಕುಂಚ, ಬಣ್ಣ ಎರಡೂ ನಮ್ಮ ಕೈಯಲ್ಲೇ ಇದೆ. ಚೆಂದದ ಚಿತ್ರವಾಗಿಸುವ ಸಂಕಲ್ಪ ನಮ್ಮಲ್ಲಿರಬೇಕಷ್ಟೇ... ಅಮ್ಮ ಹಚ್ಚಿದ ಹಣತೆ ಆರಿಹೋಗುವ ಮುನ್ನ ನೋಡಿಬಿಡಿ ಬೆಳಕನ್ನು. ಬದುಕು ಚಿಕ್ಕದು, ಬದುಕಿಬಿಡಿ ಸಾಯುವ ಮುನ್ನ !!

- R. R. B.

ಭಾನುವಾರ, ನವೆಂಬರ್ 11, 2018

ನಿವೃತ್ತಿ

                       ಏಪ್ರಿಲ್ 1, 2017. ಶನಿವಾರ. ಕೃಷ್ಣರಾಯರು ಎಂದಿಗಿಂತ ಅರ್ಧ ಗಂಟೆ ಮುಂಚೆಯೇ ಎದ್ದು ಕುಳಿತರು. ಎದೆಯಲ್ಲಿ ಏನೋ ಕಸಿವಿಸಿ, ಹೇಳಿಕೊಳ್ಳಲಾಗದ ತಳಮಳ. ಅಂದು ರಾಯರ ನಿವೃತ್ತಿಯ ದಿನ. ಮೂವತ್ನಾಲ್ಕು ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಮುಕ್ತಾಯ ಹಾಡುವ ಸಮಯ. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣಗೊಳ್ಳುವ ದಿನ.... ಎದ್ದು ಕುಳಿತ ರಾಯರು ಒಮ್ಮೆ ನಿಟ್ಟುಸಿರು ಬಿಟ್ಟು ದೈನಂದಿನ ಕಾರ್ಯಗಳಲ್ಲಿ ತೊಡಗಿದರು. ಆದರೆ ಸ್ನಾನ ಮಾಡುವಾಗ ಮನಸ್ಸಲ್ಲಿ ವಿಚಿತ್ರ ಭಾವನೆಗಳು, ತಿಂಡಿ ತಿನ್ನುವಾಗಲೂ ಅದೇ ಅನ್ಯಮನಸ್ಕತೆ. ಅದನ್ನು ಗಮನಿಸಿದ ಪತ್ನಿ ಸುಶೀಲೆ ಏನೂ ಮಾತನಾಡದೇ ಸುಮ್ಮನಾದಳು. ರಾಯರು ಗಡಿಬಿಡಿಯಲ್ಲಿ ತಿಂಡಿ ತಿಂದು ಬ್ಯಾಂಕಿಗೆ ಹೊರಡಲು ಅನುವಾದರು. ಇಸ್ತ್ರಿಯಾದ ಗರಿಗರಿ ಶರ್ಟು, ಪ್ಯಾಂಟು,ಕೈಗೆ ಚಂದದ ಸೊನಾಟಾ ವಾಚು, ಗಾಂಭೀರ್ಯ ಹೆಚ್ಚಿಸುವ ಆ ಬೆಲ್ಟು, ಹೀಗೆ ಶಿಸ್ತಾಗಿ ಬ್ಯಾಂಕಿಗೆ ಹೊರಡುವ ಗಂಡನನ್ನು ಕಂಡರೆ ಐವತ್ತರ ಆಸುಪಾಸಿನ ಸುಶೀಲೆಗೆ ಏನೋ ಹೆಮ್ಮೆ, ಅಭಿವ್ಯಕ್ತಿಗೆ ಬಾರದ ಖುಷಿ.. ಪ್ರತಿದಿನ ಗೇಟಿಗೆ ತಾಗಿ ನಿಂತು ಅವರನ್ನು ಕಳುಹಿಸಿದ ಮೇಲೆಯೇ ಅವಳ ಮುಂದಿನ ಕೆಲಸ ಶುರು. ಆದರೆ ಇವತ್ತೇಕೋ ಅವಳ ಮುಖದಲ್ಲೂ ಬೇಸರದ ಛಾಯೆ.... ನಾಳೆ ಹೇಗಿರುತ್ತದೋ ಎಂಬ ಗೊಂದಲದ ನೆರಳು… 


                  ಬಿರಬಿರನೆ ಬ್ಯಾಂಕಿಗೆ ಹೊರಟ ರಾಯರ ಮನಸಲ್ಲಿ ಏನೋ ಕಳೆದುಕೊಂಡಂಥ ಅನುಭವ. ಎದೆಯಲ್ಲಿ ಖಾಲಿ ಖಾಲಿ ಭಾವ!... ಮುದ್ದಿನ ಮಗಳ ಮದುವೆಯ ದಿನವೂ ಇಷ್ಟು ಭಾವುಕನಾಗಿರಲಿಲ್ಲವೇನೋ ಎನ್ನಿಸುವಷ್ಟು! ಅಂದು ಬ್ಯಾಂಕು ಮಾತ್ರ ಥೇಟ್ ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿತ್ತು ! ಚೊಕ್ಕವಾಗಿ ಗುಡಿಸಿದ ಅಂಗಳ, ಗೇಟಿಗೆ ಮಾವಿನ ಎಲೆಯ ತೋರಣ, ಬಾಗಿಲಿಗೆ ಚಂದದ ಹೂವಿನ ಹಾರ, ಹಾಲಿನಲ್ಲಿ ನೀಟಾಗಿ ಜೋಡಿಸಿಟ್ಟ ಕುರ್ಚಿಯ ಸಾಲು, ಹೂದಾನಿಗೆ ಜೀವತುಂಬಿದ ಬಣ್ಣದ ಹೂವು, ಚೊಕ್ಕಟವಾದ ಕೆಲಸದ ಮೇಜು, ಅಲ್ಲಲ್ಲಿ ಜರಿ ಹೂಗಳ ಮಾಲೆ, ಮತ್ತು ಹಳೆಯದ್ದನ್ನು ಅಳಿಸದೇ ಅದರ ಮೇಲೇ ಹೊಸದಾಗಿ ಹಾಕಿದ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ಬೋರ್ಡು !…. ಒಳಹೊಕ್ಕ ರಾಯರಿಗೆ ಎಲ್ಲರೂ ಎಂದಿನಂತೆ ನಾರ್ಮಲ್ ಆಗಿ ಇರುವುದನ್ನು ಕಂಡು " ಛೇ...ನಾನೇ ಓವರ್ ಆಗಿ ಥಿಂಕ್ ಮಾಡ್ತಿದೀನಾ?..." ಎಂಬ ಪ್ರಶ್ನೆ. ಆದರೆ ನಿರೀಕ್ಷಿತ ಅತಿಥಿ ಆಡಿಟರ್ ಗಳಿಂದ ಅವರ ಯೋಚನಾಲಹರಿಗೊಂದು ಬ್ರೇಕ್ ಬಿತ್ತು. ಸ್ಟ್ಯಾಚುಟರಿ ಆಡಿಟ್ ಆದ ಕಾರಣ ಎಲ್ಲರಿಗೂ ಕೆಲಸ ತುಸು ಹೆಚ್ಚಾಗಿಯೇ ಇತ್ತು. ಫಿಸಿಕಲ್ ಕ್ಯಾಷ್ ವೇರಿಫಿಕೇಷನ್, ಲೋಕರ್ ರೆಂಟ್ ವೇರಿಫಿಕೇಷನ್, ಅದು ಇದು ಅಂತ ಆಡಿಟರುಗಳು ಗಡಿಬಿಡಿಯಲ್ಲಿ ಓಡಾಡುತ್ತ ಬ್ಯಾಂಕಿನ ಸಿಬ್ಬಂದಿಗಳಲ್ಲೂ ಗಂಭೀರತೆ ಮೂಡಿಸಿದ್ದರು. ಸಮಯ ಸರಿದದ್ದೇ ತಿಳಿಯಲಿಲ್ಲ. 


                    ಮಧ್ಯಾಹ್ನ ಹನ್ನೆರಡು ಗಂಟೆ. ಬ್ಯಾಂಕಿನವರೆಲ್ಲ ಒಬ್ಬೊಬ್ಬರಾಗಿ ಎದ್ದು, ಬೀಳ್ಕೊಡುಗೆ ಸಮಾರಂಭಕ್ಕೆಂದು ಜೋಡಿಸಿಟ್ಟ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತಿದ್ದರೆ ರಾಯರಲ್ಲಿ ಹೇಳಿಕೊಳ್ಳಲಾಗದ ಚಡಪಡಿಕೆ. ಸ್ವಲ್ಪ ಹೊತ್ತಲ್ಲೇ ಕಾರ್ಯಕ್ರಮ ಆರಂಭವಾಯಿತು. ಒಬ್ಬೊಬ್ಬರೇ ಸ್ಟೇಜಿಗೆ ಬಂದು ಕೃಷ್ಣರಾಯರ ಬಗ್ಗೆ ತಮಗಿರುವ ಪ್ರೀತಿ, ಗೌರವ, ಸದ್ದಿಲ್ಲದೇ ಬೆಳೆದ ಬಾಂಧವ್ಯದ ಕುರಿತು ಹೇಳುವಾಗ ರಾಯರ ಕಣ್ಣಂಚಲ್ಲಿ ನೀರು… “ಹೌದಲ್ಲವಾ, ಈ ಬ್ಯಾಂಕೇ ನನಗೆ ಎಲ್ಲವೂ ಆಗಿತ್ತು… ತಿನ್ನಲು ಅನ್ನ ಕೊಟ್ಟ, ಬದುಕಿಗೆ ಬಣ್ಣ ಕೊಟ್ಟ, ವ್ಯಕ್ತಿತ್ವಕ್ಕೊಂದು ಅಸ್ತಿತ್ವ ಕೊಟ್ಟ, ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ಪ್ರೀತಿಸುವ ಸಹೋದ್ಯೋಗಿಗಳ ಸಾಂಗತ್ಯ ಕೊಟ್ಟ ಸ್ಥಳವಿದು. ಮನೆಗಿಂತ ಹೆಚ್ಚು ಆಪ್ತವಾಗಿದ್ದ ಜಾಗ… ಆದರೆ ನಾಳೆಯಿಂದ ಇದಕ್ಕೂ ನನಗೂ ಸಂಬಂಧವಿಲ್ಲ…” ಎಂಬುದು ನೆನಪಾಗಿ ನಿಟ್ಟುಸಿರು. ಕೊನೆಯಲ್ಲಿ “ಕೃಷ್ಣರಾಯರು ತಮ್ಮ ಅನುಭವ ಹಂಚಿಕೊಳ್ಳಬೇಕು” ಎಂದಾಗ ನಡುಗುವ ದನಿಯಲ್ಲೇ ತಮ್ಮ ಮಾತು ಮುಗಿಸಿದ್ದರು. ಉಕ್ಕಿ ಬರುತ್ತಿದ್ದ ನೋವನ್ನು ತಡೆಯಲು ಕಣ್ಣುಗಳು ಅಸಮರ್ಥವಾಗಿದ್ದವು. ನೆನಪಿನ ಕಾಣಿಕೆ ಸ್ವೀಕರಿಸುವಾಗ ಕಣ್ಣಂಚಲ್ಲಿದ್ದ ನೀರು ಕೆನ್ನೆ ತಲುಪಿತ್ತು. ಅಳುತ್ತಿರುವುದು ಯಾರಿಗೂ ತಿಳಿಯದ ಹಾಗೆ ಸಂಭಾಳಿಸುವಷ್ಟರಲ್ಲಿ ರಾಯರಿಗೆ ಸಾಕು ಸಾಕಾಗಿತ್ತು. ಎಲ್ಲರಿಗೂ ವಿದಾಯ ಹೇಳಿ ಮನೆಯತ್ತ ಹೊರಟವರಿಗೆ ಮನಸ್ಸು ಸ್ಥಿಮಿತದಲ್ಲಿಲ್ಲವೆನಿಸಿ ಪಾರ್ಕಿಗೆ ಹೋಗಿ ಕುಳಿತರು. ನೆನಪಿನ ಗುಚ್ಛ ನಿಧಾನವಾಗಿ ತೆರೆದುಕೊಳ್ಳತೊಡಗಿತು……


                    ಅಪ್ಪನನ್ನೇ ಕಾಣದ ರಾಯರಿಗೆ‌ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೇಗೋ ಕಷ್ಟಪಟ್ಟು ಮಗನನ್ನು ಓದಿಸಿದ ಅಮ್ಮ. ವಯಸ್ಸಿಗೆ ಮೀರಿದ ಜಾಣ್ಮೆ, ತಾಳ್ಮೆ ಹೊಂದಿದ್ದ ಕೃಷ್ಣ ಮೊದಲ ಬಾರಿಗೇ ಬ್ಯಾಂಕಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕೆಲಸ ಗಿಟ್ಟಿಸಿಕೊಂಡಿದ್ದ. ಅಚ್ಚುಕಟ್ಟಾಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಲ್ಲದೇ ಪ್ರಮೋಷನ್ ಕೂಡ ಪಡೆದಿದ್ದ. ನಂತರ ಸುಶೀಲೆಯೊಂದಿಗೆ ಮದುವೆ, ಮಕ್ಕಳು ಎಲ್ಲಾ…. ರಾಯರ ಬದುಕಿನ‌ ಬಹುಪಾಲು ಕಳೆದದ್ದು ಅದೇ ಜಯನಗರದ ಬ್ಯಾಂಕಿನಲ್ಲಿ. ಮೂವತ್ತೈದು ವರ್ಷಗಳ ಸರ್ವಿಸ್ ನಲ್ಲಿ ಒಮ್ಮೆಯೂ ರಾಯರು ಕೋಪಗೊಂಡ ದಾಖಲೆಯೇ ಇಲ್ಲ. ಬದುಕನ್ನು ಪ್ರೀತಿಸುವ ಬಗೆ ಬಹುಶಃ ಎಲ್ಲರಿಗೂ ತಿಳಿದಿರುವುದಿಲ್ಲ. ಆದರೆ ರಾಯರು ತಾವಿದ್ದ ಬ್ಯಾಂಕಿನ ವಾಚ್ ಮೆನ್ ನಿಂದ ಹಿಡಿದು ಬರೆಯುವ ಪೆನ್ನನ್ನೂ, ಟೇಬಲ್ ಮೇಲಿರುವ ಪೇಪರ್ ವೇಟನ್ನೂ ಒಂದೇ ಸಮನಾಗಿ ಪ್ರೀತಿಯಿಂದ ಕಂಡವರು. ಅಲ್ಲಿನ ಇಂಚಿಂಚೂ ಅವರಿಗೆ ಆಪ್ತ… ಕುಳಿತುಕೊಳ್ಳುವ ಕುರ್ಚಿ, ಟೇಬಲ್ಲಿನಿಂದ ಹಿಡಿದು ಬ್ಯಾಂಕಿನ ಕಿಟಕಿ, ಬಾಗಿಲುಗಳ ಮೇಲೂ ಅದೇನೋ ಅಕ್ಕರೆ ಅವರಿಗೆ… ಎಲ್ಲರಿಗೂ ‘ಗುಡ್ ಮಾರ್ನಿಂಗ್’ ಹೇಳಿಯೇ ಕೆಲಸ ಆರಂಭಿಸುವ ಅಭ್ಯಾಸ.. ಅದೊಂಥರಾ ಹೇಳಲಾಗದ ಬಾಂಧವ್ಯ ರಾಯರಿಗೆ ಬ್ಯಾಂಕಿನ ಮೇಲೆ ಬೆಳೆದುಬಿಟ್ಟಿತ್ತು. ಈಗ ಒಮ್ಮೆಲೇ ನಾಳೆಯಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ರಾಯರಿಗೆ ಕಷ್ಟವಾಗಿತ್ತು… ಹೃದಯ ಗೊಂದಲದ ಅಲೆಗಳಿಂದ ಹೊಯ್ದಾಡತೊಡಗಿತ್ತು… ಇನ್ನು ಮೇಲೆಯೂ ಕನಿಷ್ಟ ಪಕ್ಷ ಗ್ರಾಹಕನಾಗಿಯಾದರೂ ಈ ಬ್ಯಾಂಕಿಗೆ ಬರುತ್ತೇನೆ, ಇಲ್ಲವಾದರೆ ಹುಚ್ಚು ಹಿಡಿಯಬಹುದೇನೋ ಎನಿಸುತ್ತಿತ್ತು… “ಇಪ್ಪತ್ತೈದು ವರ್ಷ ಪ್ರೀತಿಯಿಂದ ಬೆಳೆಸಿದ ಸ್ವಂತ ಮಗಳೇ ಈಗ ಅಪರಿಚಿತಳಂತೆ ವರ್ತಿಸುತ್ತಾಳೆ. ಇನ್ನು ಇಷ್ಟು ದೊಡ್ಡ ಬ್ಯಾಂಕಿಗೆ ನನ್ನಂಥ ಕೆಲಸಗಾರರು ಲಕ್ಷಾಂತರ ಮಂದಿ ಇರುತ್ತಾರೆ. ನಾನು ನಿವೃತ್ತಿಯಾದೆ ಅಂತ ಯಾರು ಕೊರಗ್ತಾರೆ? ನಿವೃತ್ತಿ ಎಲ್ಲರಿಗೂ ಅನಿವಾರ್ಯ… ಅಗತ್ಯ ಕೂಡ !! 


                ಇನ್ನು ಮೇಲೆಯಾದರೂ ಅತಿಯಾಗಿ ಭಾವುಕನಾಗುವುದನ್ನು ಬಿಟ್ಟು ನನ್ನ, ಸುಶೀಲೆಯ ಆರೋಗ್ಯ ನೋಡಿಕೊಳ್ಳಬೇಕು. ಇಳಿಸಂಜೆಯಲ್ಲಿ ಅವಳೊಂದಿಗೆ ವಾಕಿಂಗ್ ಹೋಗಬೇಕು. ಇಷ್ಟು ದಿನವಂತೂ ಬ್ಯಾಂಕಿನ ವ್ಯವಹಾರಗಳಲ್ಲಿ ಮುಳುಗಿ, ಅವಳಿಗೆ ಸರಿಯಾಗಿ ಸಮಯವೇ ಕೊಟ್ಟಿಲ್ಲ. ಇನ್ನಾದರೂ ಸುಶೀಲೆಯ ಪಕ್ಕ ಕುಳಿತು ಗಂಟೆಗಟ್ಟಲೆ ಹರಟಬೇಕು. ಅವಳು ಮಾಡಿದ ಅಡುಗೆಗೆ ಪದೇ ಪದೇ ಹೊಗಳಬೇಕು. ಮಗಳ ನೆನಪಾಗಿ ಆಕೆ ನಿಟ್ಟುಸಿರು ಬಿಡುವಾಗ ಪ್ರೀತಿಯಿಂದ ಅವಳನ್ನು ಎದೆಗಪ್ಪಿಕೊಳ್ಳಬೇಕು……..” ಎಂದುಕೊಂಡ ರಾಯರು ಮನೆ ಕಡೆ ಹೊರಟರು. ಸುಶೀಲೆಯ ಬಳಿ ಚೆನ್ನಾಗಿ ಮಾತನಾಡಿದರು. ಆದರೆ ರಾತ್ರಿ ಮಾತ್ರ ರಾಯರಿಗೆ ನಿದ್ದೆ ಸುಳಿಯಲೇ ಇಲ್ಲ. ನಾಳೆ ಏನು ಮಾಡಬೇಕೆಂಬ ಗೊಂದಲ… ಬ್ಯಾಂಕಿನ ನೆನಪುಗಳು ಮತ್ತೆ ಮರುಕಳಿಸಲಾರಂಭಿಸಿತ್ತು. ಮತ್ತೆ ಬ್ಯಾಂಕಿಗೆ ಹೋಗಬೇಕೆನಿಸತೊಡಗಿತ್ತು. ಮರುದಿನ ಎಂದಿನಂತೆ ಎದ್ದು ನೀಟಾಗಿ ರೆಡಿಯಾದ ಗಂಡನನ್ನು ಕಂಡು ಸುಶೀಲೆಗೆ ಆಶ್ಚರ್ಯ !! “ಎಲ್ಲಿಗೆ ಹೋಗ್ತಿದೀರಾ?” ಎಂಬ ಪ್ರಶ್ನೆಗೆ ಗಡಿಬಿಡಿಯಲ್ಲಿ ಮನೆಯ ಹೊಸಿಲು ದಾಟುತ್ತಿದ್ದ ರಾಯರಿಂದ ಬಂದ ಒಂದೇ ಉತ್ತರ ಬ್ಯಾಂಕಿಗೆ!!


- R. R. B.

ಭಾನುವಾರ, ಸೆಪ್ಟೆಂಬರ್ 16, 2018

ಸಾಯುತ್ತಿರುತ್ತೇನೆ ನಾನು...

                       ಸಾಯುತ್ತಿರುತ್ತೇನೆ ನಾನು - ಮನಸ್ಸಿಲ್ಲದ ಮನಸ್ಸಲ್ಲಿ ಅದ್ಯಾರದೋ ಧೂಳುಹಿಡಿದ ಫೈಲುಗಳ ತಲೆಬಿಸಿ ಹಚ್ಚಿಕೊಳ್ಳುವಾಗ, ಕೆಲಸಕ್ಕೆ ಬಾರದ ಅದ್ಯಾವುದೋ ಯೋಚನೆಯಲ್ಲಿ ಮುಳುಗುವಾಗ, ತಟ್ಟೆಯ ಬದಲು ಮೊಬೈಲ್ ನೋಡುತ್ತಾ ಊಟದ ಶಾಸ್ತ್ರ ಮಾಡುವಾಗ, ನಿಂತಲ್ಲೇ ಗಾಢ ಆಲೋಚನೆಯಲ್ಲಿ ಮುಳುಗಿ ಪಕ್ಕದವರ ಮಾತು ಕೇಳಿಸದೇ ಇದ್ದಾಗ....


                      ನಾನು ಮತ್ತೆ ಮತ್ತೆ ಸಾಯುತ್ತಿರುತ್ತೇನೆ - ಗೊಂದಲಗಳ ಬಲೆಯಲ್ಲಿ ಸಿಕ್ಕ ಜೇಡವಾಗಿ ಚೆಂದದ ಕ್ಷಣಗಳ ಅನುಭವಿಸಲಾರದಾಗ, ಆಫೀಸಿನ ಕೆಲಸದ ಗಡಿಬಿಡಿಯಲ್ಲಿ ಪದೇ ಪದೇ ಬಂದ ಅಮ್ಮನ ಕರೆಯನ್ನು ನೋಡಿಯೂ ನೋಡದಂತಾಗುವಾಗ, ಬದುಕಿನ ಓಟದಲ್ಲಿ ತುಂಬಾ ಪ್ರೀತಿಸುವ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನೇ ಮರೆತಾಗ, ಕೊನೆಗೆ ನನ್ನ ಸಣ್ಣ ಸಣ್ಣ ಖುಷಿಗಳನ್ನೆಲ್ಲವನ್ನೂ ಮರೆತು ನಾನೇ ಕಳೆದುಹೋದಾಗ.....
               

              ನಾನು ಸಾಯುತ್ತಲೇ ಇರುತ್ತೇನೆ ಪ್ರತಿದಿನವೂ... ಜೀವವಿದ್ದೂ ಜೀವವಿಲ್ಲದಂತಾಗುತ್ತೇನೆ, ಇನ್ನೇನು ನಾನು ಪೂರ್ತಿಯಾಗಿ ಸಾಯುತ್ತಿದ್ದೇನೆ ಎನ್ನುವಾಗ ಅದು ಹೇಗೋ ಬದುಕಿಬಿಡುತ್ತೇನೆ.... 

                ಬದುಕಿಬಿಡುತ್ತೇನೆ ನಾನು - ಪುಟ್ಟ ಕಂದಮ್ಮನ ಮುಗ್ಧ ನಗುವನ್ನು ಕಂಡಾಗ, ಜೀವನದ ಸಣ್ಣ ಪುಟ್ಟ ಆಸೆಗಳು ನೆರವೇರಿದಾಗ, ಪ್ರೀತಿ ಪಾತ್ರರೊಂದಿಗೆ ಸಮಯ ವಿನಿಯೋಗಿಸುವಾಗ, ಬೇರೆಯವರ ದುಃಖಕ್ಕೆ ಸ್ಪಂದಿಸಿದಾಗ... ಬದುಕಿಬಿಡುತ್ತೇನೆ ನಾನು - ಪುಟಾಣಿಗಳ ಮುದ್ದು ನೃತ್ಯ ನೋಡುವಾಗ, ಒಂದೊಳ್ಳೆ ನಾಟಕ ನೋಡುವಾಗ, ಆಪ್ತ ಗೆಳತಿಯೊಡನೆ ಮನ ಬಿಚ್ಚಿ ಮಾತನಾಡುವಾಗ, ಬೇರೆಯವರ ಪರಿವಿಲ್ಲದೇ ಖುಷಿಯಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವಾಗ, ನನಗೆ ಇಷ್ಟವಾದ ಪುಸ್ತಕ ಓದುವಾಗ..... ಹೀಗೆಯೇ... ಹೇಗೋ ಬದುಕಿಬಿಡುತ್ತೇನೆ ಪೂರ್ತಿ ಸಾಯುವ ಮುನ್ನ. ಹುಡುಕಲು ಶುರುವಿಡುತ್ತೇನೆ ಕಳೆದು ಹೋದ ನನ್ನ...  


- R. R. B.

ಶುಕ್ರವಾರ, ಜುಲೈ 20, 2018

A Goodbye !

                            A sunny morning. I woke up with a smile, thinking that it will be a memorable day in my life. I started dreaming about the beautiful future… “Caring parents, lovely husband, passion as a profession, well settled family...What else I need to be HAPPY? Probably a child in next 2-3 years.. hahaha…” I laughed loudly. 


                Suddenly mom entered to the room and put a break to my thinking process. She was in a rush and very tensed mood. “Elisha, get ready and come down quickly” she told and immediately went out with eyes full of tears. I was shocked. Brain stopped working for a minute. I wore a dress and rushed to hall. Dad and Mom were sitting on floor and crying. Slowly I walked towards them and Mom noticed it. She gave a signal to her husband. Dad stopped crying and told me to sit down. I sat next to him. He hold my hand gently and said “Elisha, Life is not so sweet all the time. Make your heart strong. I have a bad news for you dear. But we are with you. Don't think that it's the end…” I stopped him in between and asked anxiously, “What happened Dad? Tell me directly.” He said in a low voice “Your Daniel is no more…” I was about to become unconscious and asked “How? Are you telling the truth?” Dad explained in a serious tone. Daniel met with an accident and he became spot out on the road. It was a terrible truth. I was unable to digest it. All my dreams shattered. All the sweet memories with my Daniel were coming in front of eyes…
             

               Those days were really awesome.. He was a good friend, a kind teacher, a well wisher, a naughty boyfriend, a caring soul, and an inspiration to my life… He was going to become my life partner in two days… Did I lost my Husband? a good friend? an inspiration? a bunch of dreams? or a part of my life?..... Various thoughts were going in my mind. But outside I was so normal. I didn't even cry. I sat silently for sometime and stood up by saying “Dad, Get up. It’s getting late. Let's go to Daniel’s burial…”

- R.R.B.

ಭಾನುವಾರ, ಏಪ್ರಿಲ್ 8, 2018

ಸಿಂಪಲ್ಲಾಗೊಂದ್ ಪ್ರೇಮಪತ್ರ

                  ಪ್ರೀತಿಯ ಗೆಳೆಯನಿಗೆ, ನಿನ್ನ ನೋಡದೇ ತುಂಬಾ ದಿನ ಆಯ್ತು. ಹೇಗಿದೀಯಾ? ಯಾವಾಗ ಸಿಗ್ತೀಯಾ?... ನೀನಿಲ್ಲದ ಬದುಕು ಒಂಥರಾ ಬೋರಿಂಗ್ ಕಣೋ - ಇಂಟರ್ನೆಟ್ ಇಲ್ಲದ ಮೊಬೈಲ್ ಹಾಗೆ. ಯಾವಾಗ ನಿನ್ನ ನೋಡ್ತೀನೋ, ಪಟಪಟ ಅಂತ ಮಾತಾಡ್ತೀನೋ ಅಂತನಿಸ್ತಿದೆ. ಜೀವನ ಪೂರ್ತಿ ನಿನ್ನ ಜೊತೆನೇ ಇದ್ದರೂ ಸಾಕಾಗಲ್ಲ ನಂಗೆ. ಉರುಳೋ ಕಾಲಚಕ್ರವನ್ನು ತಡೆದು ನಿಲ್ಲಿಸೋ ಹಾಗಿದ್ದಿದ್ರೆ...!!


                     ಬದುಕೊಂದು ಚಂದದ ಪುಸ್ತಕವಾದ್ರೆ ಅದರಲ್ಲಿ ಮುದ್ದಾದ ಅಧ್ಯಾಯ ನೀನು. ಅದರ ಪ್ರತಿ ಪುಟದಲ್ಲೂ ನಿನ್ನ ಹೆಸರಿರಲಿ ಎಂಬ ಹೆಬ್ಬಯಕೆ ನನ್ನದು. ಗೆಳೆಯಾ, ನಾನು ವಾಣಿಜ್ಯಶಾಸ್ತ್ರ ಓದಿದ್ದೇ ವೇಸ್ಟು. ನನಗೆ ಅಂಥ ತುಟ್ಟಿಯಾದ ಆಸೆಗಳೇನಿಲ್ಲ ಬಿಡು, ಸುಂದರ ಸಂಜೆಗಳಲಿ ಇಬ್ಬರೇ ಕೈಕೈ ಬೆಸೆದು ಗಮ್ಯವಿಲ್ಲದೇ ಸಂಚರಿಸಬೇಕು, ಬದುಕು ಸಾಗಿಬಂದ ಹಾದಿಯಲ್ಲಿನ ಚೆಂದದ ನೆನಪುಗಳ ಕಲ್ಲನ್ನು ಪರಸ್ಪರ ಹಂಚಿಕೊಳ್ಳಬೇಕು. ಸಿಹಿಯಾದ ನಾಳೆಗಳ ಬಗ್ಗೆ ಕನಸುಗಳ ಮೂಟೆ ಕಟ್ಟಬೇಕು. ಅದನ್ನು ನನಸು ಮಾಡುವ ಬಗ್ಗೆ ತುಸು ಗಂಭೀರ ಮಾತುಕತೆಯೂ ಬೇಕು. ಕಡಲ ಕಿನಾರೆಯ ಮರಳಿನಲಿ ಮತ್ತೆ ಮತ್ತೆ ನಮ್ಮ ಹೆಸರು ಬರೆಯಬೇಕು. ಅಲೆಗಳು ಆಟವಾಡುವುದ ನೋಡುತ್ತಾ ನಿನ್ನ ಹೆಗಲ ಮೇಲೆ ತಲೆಯಿಟ್ಟು ಒಂದರೆ ಘಳಿಗೆ ಪ್ರಪಂಚವನ್ನೇ ಮರೆಯಬೇಕು. ನನ್ನ ಅರ್ಥವಿಲ್ಲದ ಮಾತುಗಳನ್ನೆಲ್ಲ ಮುಗುಳುನಗೆಯಿಂದ ಕೇಳಿಸಿಕೊ ಸಾಕು. ನಿನ್ನ ಅಕ್ಕರೆಯ ಮುತ್ತಿರುವಾಗ ಸಾಗರದ ಮುತ್ತೇನೂ ನನಗೆ ಬೇಕಾಗಿಲ್ಲ. ಆದರೆ ಮರಳಿನಲ್ಲಿ ಆಟವಾಡುವಾಗ ಮುದ್ದಾದ ಕಪ್ಪೆಚಿಪ್ಪು ಸಿಕ್ಕರೆ ಅದರ ಒಡತಿ ಮಾತ್ರ ನಾನು ಎಂಬುದು ನೆನಪಿರಲಿ. 


                       ಗಂಜಿಯಾದರೂ ಸರಿ, ಬೆಳದಿಂಗಳ ರಾತ್ರಿಯಲ್ಲಿ ಟೆರೇಸ್ ಮೇಲೆ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನಿಸಬೇಕು. ಅದು - ಇದು ಅಂತ ಗಂಟೆಗಟ್ಟಲೇ ಹರಟಬೇಕು. ಕಣ್ಣಲ್ಲಿ ಕಣ್ಣಿಟ್ಟು ಮೌನದಲ್ಲೇ ಯುಗಳಗೀತೆ ಹಾಡಬೇಕು. ಕೊನೆಗೆ ಚಂದ್ರನೂ ನಾಚುವಂತೆ ಒಂದಾಗಬೇಕು. ನಮ್ಮಿಬ್ಬರ ನಡುವಿನ ಹೊಂದಾಣಿಕೆ ನೋಡಿ ಪಕ್ಕದ ಮನೆಯ ಆಂಟಿ ಅಸೂಯೆ ಪಡಬೇಕು..... ಅಷ್ಟಾದರೆ ಬಾಳಿಗೊಂದು ಸಾರ್ಥಕತೆಯ ಸ್ಪರ್ಷ. 


                      ಹೇ..‌. ಇಷ್ಟಕ್ಕೇ ಕಥೆ ಮುಗಿದಿಲ್ಲ, ನಮ್ಮ ಮಗು ಓದಿ, ಅದು ಮದುವೆಯಾಗುವವರೆಗಿನ ಆಲೋಚನೆಗಳ ನೀಲಿನಕ್ಷೆ ಅದ್ಯಾವಾಗಲೋ ತಯಾರಾಗಿದೆ!! ಸದ್ಯಕ್ಕಿಷ್ಟು ಸಾಕು. 

ನಿನ್ನ ಕರೆಗಾಗಿ ಕಾಯುತ್ತಿರುವ,
ಇಂತಿ ನಿನ್ನ ಗೆಳತಿ


- R. R. B.
Note : ಈ ಸಾಲುಗಳು ಕೇವಲ ಕಾಲ್ಪನಿಕ ಮಾತ್ರ !!

ಭಾನುವಾರ, ಮಾರ್ಚ್ 25, 2018

ಅಭಿಲಾಷೆ...

                   ಮರಣದಂಡನೆ ರದ್ದಾಗಬೇಕೆಂಬ ಮಹತ್ತ್ವಾಕಾಂಕ್ಷೆ ಹೊತ್ತು, ಅದಕ್ಕಾಗಿ ಜೀವವನ್ನೇ ಪಣಕ್ಕಿಡುವ ಸಾಮಾನ್ಯ ಯುವಕನೋರ್ವನ ಬದುಕ ಕಥನವೇ 'ಅಭಿಲಾಷೆ'ಯ ಜೀವಾಳ. ಅಂದ ಹಾಗೆ 'ಅಭಿಲಾಷೆ' ಎಂಬುದು ನನ್ನ ನೆಚ್ಚಿನ ಲೇಖಕರಾದ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ. (ಕನ್ನಡಕ್ಕೆ ಅನುವಾದ - ಸಂಡೂರು ವೆಂಕಟೇಶ್) ಹಿಂದೆಯೇ ಇದನ್ನು ಓದಿದ್ದೆನಾದರೂ ಇದರ ಕುರಿತು ಹೇಳುವ ಮನಸ್ಸಾಗಿದ್ದು ಮಾತ್ರ ಈಗ...

                   ಬೆಳಿಗ್ಗೆ ಓದಲು ಕುಳಿತವಳು ಪೂರ್ತಿ ಓದಿ ಮುಗಿಸಿದ ಮೇಲೆಯೇ ಊಟ ಮಾಡಿದ್ದು. ಯಂಡಮೂರಿಯವರ ಬರಹಗಳೇ ಹಾಗೆ. ಆರಾಮಾಗಿ ಓದಿಸಿಕೊಂಡು ಹೋಗುತ್ತವಲ್ಲದೇ ಕಿಂಚಿತ್ತೂ ಬೋರೆನಿಸುವುದಿಲ್ಲ - ಕಡಲಕಿನಾರೆಯಲ್ಲಿ ಅಲೆಗಳೊಂದಿಗೆ ಆಟವಾಡಿದ ಹಾಗೆ !!... 

                ಹಲವಾರು ದೇಶಗಳು ಮರಣದಂಡನೆಯನ್ನು ರದ್ದುಮಾಡಿವೆ. ಆದರೆ ನಮ್ಮ ಭಾರತದಲ್ಲಿನ್ನೂ ಸ್ಟೇ ಆರ್ಡರ್ ಗಳ ಹಂತದಲ್ಲೇ ಇದೆ. ಈ ಕಠೋರ ಶಿಕ್ಷೆಯಿಂದಾಗಿ ಎಷ್ಟೋ ಅಮಾಯಕರು ತಾವು ಮಾಡಿರದ ತಪ್ಪಿಗೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರನ್ನೇ ನಂಬಿ ಜೀವನ ನಡೆಸುತ್ತಿದ್ದ ಬಡಕುಟುಂಬಗಳೆಷ್ಟೋ ದಿಕ್ಕಾಪಾಲಾಗಿ ಹೋಗಿವೆ. ಅದಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ಓಡಾಡಿಕೊಂಡಿದ್ದ ಮನೆಯ ಸದಸ್ಯನೊಬ್ಬ ತನ್ನದಲ್ಲದ ತಪ್ಪಿಗೆ ಈ ಲೋಕದಿಂದಲೇ ಕಣ್ಮರೆಯಾದಾಗ ಅವನ ಕುಟುಂಬದ ನೋವನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ?? ಕೊಲೆ ಮಾಡುವುದು ಘೋರ ಅಪರಾಧ ಎಂಬುದು ಸರಿ. ಆದರೆ ಅದೇ ಕಾರಣಕ್ಕೆ ತಪ್ಪಿತಸ್ಥನನ್ನು ಸಾಯಿಸುವುದೆಷ್ಟು ಸರಿ? ತಿದ್ದಿಕೊಳ್ಳಲು ಅವಕಾಶವೇ ಇಲ್ಲದಂತೆ ಮಾಡುವುದು ಎಷ್ಟು ಸಮಂಜಸ? ಅಷ್ಟಕ್ಕೂ ಒಬ್ಬರ ಜೀವತೆಗೆಯಲು ಇನ್ನೊಬ್ಬರಿಗೆ ಅನುಮತಿ ಕೊಟ್ಟವರ್ಯಾರು?...ಹೀಗೆ ಆಲೋಚನಾಸರಣಿ ಕಾದಂಬರಿ ಓದಿ ಮುಗಿಸಿದ ಮೇಲೆ ನಮ್ಮನ್ನು ಕಾಡತೊಡಗುತ್ತದೆ... 

                    ಕಥೆಯಲ್ಲಿ ಬರುವ ಸರ್ವೋತ್ತಮರಾವ್, ಚಿರಂಜೀವಿ, ಅರ್ಚನಾ, ಪ್ರಕಾಶ್, ಸ್ಪೂರ್ತಿ, ದಾರಾಸಿಂಗ್, ಓಬಳೇಶ, ವಿಷ್ಣು ಶರ್ಮ, ಸುಶೀಲಾ....ಹೀಗೆ ಎಲ್ಲ ಪಾತ್ರಗಳೂ ಕಾದಂಬರಿಯ ಆಳಕ್ಕೆ ಕರೆದೊಯ್ಯುತ್ತವೆ. ಓದುವ ಪ್ರತಿಕ್ಷಣವೂ "ಮುಂದೇನು?.." ಎಂಬ ಆಸಕ್ತಿ, ಉದ್ವೇಗವನ್ನು ಹುಟ್ಟು ಹಾಕುತ್ತವೆ. ಒಬ್ಬರಿಗಿಂತ ಒಬ್ಬರು ಚಾಣಾಕ್ಷರಂತೆ ಕಾಣುತ್ತಾ ಹೋಗುತ್ತಾರೆ. ದೊಡ್ಡ ಸಾಹಸಕ್ಕೆ ಕೈ ಹಾಕಲು ಹೋಗುವಾಗ ಸಣ್ಣ ಪುಟ್ಟ ತಪ್ಪುಗಳೇ ಮುಳುವಾಗಿ ಜೀವನವೇ ಬಹುದೊಡ್ಡ ಪ್ರಶ್ನೆಯಾಗುತ್ತದೆ. ಕೆಲವೊಮ್ಮೆ ಅದರಿಂದ ಹೊರಬರುವ ದಾರಿಗಳೇ ಮುಚ್ಚಿಹೋಗಿವೆ ಎಂಬ ಅಭದ್ರತಾ ಭಾವ ಮೂಡುತ್ತದೆ.... ನಮ್ಮ ದೇಶದ ಕಾನೂನಿನ ಲೋಪಗಳ ಮೇಲೆ ಬೆಳಕು ಬೀರುತ್ತಲೇ ಮರಣದಂಡನೆಗೊಳಗಾದ ಖೈದಿಯ ಮನಸ್ಥಿತಿಯನ್ನು ಯಂಡಮೂರಿಯವರು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ನಾಳೆ ಸಾಯುತ್ತೇನೆಂದು ತಿಳಿದಾಗ ವ್ಯಕ್ತಿಯೊಬ್ಬನಲ್ಲಿ ಮೂಡುವ ವಿಚಿತ್ರ ಭಾವನೆಗಳು, ಗೊಂದಲಗಳು, ಪ್ರಶ್ನೆಗಳು, ಕೊನೆಯಾಸೆ, ನಿರಾಸೆ, ಜಿಗುಪ್ಸೆ, ಬದುಕಿನ ಬಗ್ಗೆ ನಿಲುವು, ತತ್ತ್ವಜ್ಞಾನದ ಕಡೆಗಿನ ಒಲವು, ಹೇಳಿಕೊಳ್ಳಲಾಗದಂಥ ತಳಮಳ, ಸಂಕಟ ಎಲ್ಲವೂ ಹೃದಯಸ್ಪರ್ಶಿ!! 

                  ಹೋಟೇಲಿನಲ್ಲಿ ಎಲ್ಲರ ಮುಂದೆ ಜೋರಾಗಿ ಸೀನಲೂ ಭಯಪಡುತ್ತಿದ್ದ ಅಂಜಿಕೆಯ ಯುವಕ ತನ್ನ ಬದುಕಿನ ಬಹುಮುಖ್ಯ ಗುರಿಸಾಧನೆಗಾಗಿ ಸಂಪೂರ್ಣವಾಗಿ ಬದಲಾಗುವ ಆ ಪಯಣ ನಿಜಕ್ಕೂ ಕಥೆಯ ಮೆರುಗೆನ್ನಬಹುದು. ಎಲ್ಲ ಕಾದಂಬರಿಯಂತೆ ಇದರಲ್ಲೂ ಪ್ರೀತಿ, ಪ್ರೇಮ ಇದೆಯಾದರೂ ಕೊಂಚ ವಿಭಿನ್ನ ಎನಿಸುತ್ತದೆ. ಏನೋ ಊಹಿಸಿಕೊಂಡರೆ ಕೊನೆಯಲ್ಲಿ ಕಥೆ ಮಹತ್ತರ ಬದಲಾವಣೆ ಪಡೆದುಕೊಳ್ಳುತ್ತದೆ. ಕೊನೆಯಲ್ಲಿ ಹಣ, ಕೀರ್ತಿಯ ಬೆನ್ನತ್ತುವ ಜನ ಹೀಗೂ ಇರುತ್ತಾರಾ?... ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತದೆ. "ಸೆಕ್ಷನ್ ೩೦೨ ರದ್ದಾಗಬೇಕು..." ಎಂಬ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ. ಕೊನೆಯ ಸಾಲು ಓದಿಮುಗಿಸಿ ಪುಸ್ತಕ ಮುಚ್ಚುವಾಗ ಒಂದರೆ ಕ್ಷಣ ತಲೆ ಖಾಲಿ ಖಾಲಿ.. 
     
                   ಮರುಕ್ಷಣವೇ ಹಲಾವಾರು ಪ್ರಶ್ನೆಗಳ ಉದ್ಭವ !!... ಯೋಚಿಸುತ್ತಾ ಹೋದರೆ ಆಲೋಚನಾಲಹರಿಗೆ ಹತ್ತು ಹಲವು ಮುಖಗಳು - ಹರಿಯುವ ನದಿಯ ತಿರುವಿನ ಹಾಗೆ!! ಅದೇನೇ ಇರಲಿ, 'ಅಭಿಲಾಷೆ'ಯನ್ನು ಓದಿ ನಂಗಂತೂ ಖುಷಿ ಆಯ್ತು. ಸಾಧ್ಯವಾದರೆ ನೀವೂ ಓದಿ ಹೇಗಿದೆ ಅಂತ ಹೇಳಿ... :) :) 

 - R.R.B.

ಸೋಮವಾರ, ಜನವರಿ 22, 2018

ಅನಾವರಣ

                      ಮನಸ್ಸು ಅನ್ನೋದು ಒಂಥರಾ ಊಸರವಳ್ಳಿ ಇದ್ದ ಹಾಗೆ. ಎಲ್ಲಿ, ಯಾವಾಗ ಯಾವ ಬಣ್ಣವೋ ಯಾವ ಭಾವವೋ! ಕೆಲವೊಮ್ಮೆ ನಮ್ಮ ನಡವಳಿಕೆ ನಮಗೇ ಅಚ್ಚರಿ ಆಗತ್ತೆ. ಅದರಲ್ಲೂ ನನ್ನಂಥ ಭಾವುಕರಿಗಂತೂ ಕ್ಷಣಕ್ಷಣವೂ ಭಾವಗಳಲಿ ವರ್ಣಬದಲಾವಣೆ... ಮಹಾನಗರಿಯ ಈ ಬದುಕು ಕಲಾವಿದ ರಚಿಸಿದ ಚಿತ್ತಾರಭರಿತ ವರ್ಣಚಿತ್ರದಂತೆ. ಒಂದೊಂದು ಬಣ್ಣದಲ್ಲಿ ಕುಂಚ ಅದ್ದುವಾಗಲೂ ಕಲಾವಿದ ಎಚ್ಚರ ವಹಿಸುತ್ತಾನೆ. ನಾವೂ ಹಾಗೆ ಎಚ್ಚರ ವಹಿಸಿದರೆ ಬದುಕು ಸುಂದರ ಬಣ್ಣಗಳ ಸೊಗಸಿನ ಚಿತ್ತಾರ ! ಆದರೆ ಈ ಮನಮರ್ಕಟ ಯಾವಾಗ ಯಾವ ಮರ ಏರುವುದೋ ಬಲ್ಲವರಾರು??...

                     ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಮನಕೆ ಬೇಸರದ ಪೊರೆಯ ಆವರಣ. ಆಗ ಪ್ರತಿಯೊಂದೂ ಸಮಸ್ಯೆಗಾಳಾಗಿ ಗೋಚರಿಸುತ್ತವೆ. ಚಳಿಗಾಲದ ಮುಂಜಾನೆ ಏಳುವುದೇ ಒಂದು ಬೇಜಾರು. ಎದ್ದು ಕಷ್ಟಪಟ್ಟು ತಯಾರಾದರೆ ಆಫೀಸಿಗೆ ತಡವಾಯ್ತು ಎಂಬ ಕಳವಳ. ಬಸ್ ನಿಲ್ದಾಣದಲ್ಲಿ ಎಷ್ಟು ಕಾದರೂ ಬಸ್ ಸಿಗದಿದ್ದರೆ ತಳಮಳ. ಕಡೆಗೂ ಬಸ್ಸೇರುವಷ್ಟರಲ್ಲಿ "ಫುಲ್ ರಶ್" ಎಂಬ ಸಿಟ್ಟು. ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ಬಿ.ಎಂ.ಟಿ.ಸಿ.ಯ ನೂಕುನುಗ್ಗಲಿನಲ್ಲಿ ತನ್ನ ಕಳೆ ಕಳೆದುಕೊಂಡು ಕೊಳೆ ಆಯ್ತೆಂದು ಕಸಿವಿಸಿ. ಬಸ್ಸಿಳಿದು ಆಫೀಸಿಗೆ ಕಾಲಿಡುವವರೆಗೂ "Boss" ಬೈದರೆ ಏನುತ್ತರ ಕೊಡಬೇಕೆಂಬ ತಯಾರಿ. ಆಫೀಸಲ್ಲಿ ಕುಳಿತರೆ ಮಾಡಬೇಕಾದ ಕೆಲಸಗಳ ಪಟ್ಟಿಯೋ ಹನುಮಂತನ ಬಾಲವೇ ಸರಿ! ಜೊತೆಗೆ ಯಾರದೋ ತಪ್ಪಿಗೆ ಮೇಲಧಿಕಾರಿಯಿಂದ ಬೈಸಿಕೊಳ್ಳುವ ಭಾಗ್ಯ! ತಪ್ಪು ತನ್ನದಲ್ಲವೆಂದು ಸರಿಪಡಿಸಿಕೊಳ್ಳಲು ಯತ್ನಿಸಿದರೆ "ನನಗೇ ಎದುರುತ್ತರ ಕೊಡ್ತೀಯಾ?" ಎಂಬ ಬೈಗುಳ ಬೋನಸ್ ! ಮನಸ್ಸು ಕೆಡಿಸಿಕೊಂಡು ಹೇಗೋ ಕೆಲಸ ಮುಗಿಸುವಷ್ಟರಲ್ಲಿ ಸಾಕು ಸಾಕಾಗಿರತ್ತೆ....ಇನ್ನು ಬಸ್ಸಿಗೆ ಕಾಯುವ ಗೋಜಲೇ ಬೇಡವೆಂದು ಕ್ಯಾಬ್ ಬುಕ್ ಮಾಡಲು ಹೋದರೆ ಹತ್ತಿರದಲ್ಲೆಲ್ಲೂ ಕ್ಯಾಬ್ ಇಲ್ಲವೆಂಬ ಸಿಟ್ಟು. ಆಟೋ ಹಿಡಿಯೋಣವೆಂದರೆ "ಒಂದು ಆಟೋನೂ ಸಿಕ್ತಾ ಇಲ್ಲ"ವೆಂಬ ಕೋಪ. ಆಟೋ ಸಿಕ್ಕ ಮೇಲೆ "ಅಬ್ಬ!.." ಎಂದು ನಿಟ್ಟುಸಿರು ಬಿಟ್ರೆ ಆಟೋದವನು ಟ್ರಾಫಿಕ್ ಅಂತ ಅರ್ಧ ಬೆಂಗಳೂರು ಸುತ್ತಿಸಿ ನಂತ್ರ ಇಳಿಸಬೇಕಾದಲ್ಲಿ ಇಳಿಸ್ತಾನೆ. ಗೊಣಗುತ್ತಾ ದುಡ್ಡು ಕೊಟ್ರೆ ಚಿಲ್ಲರೆ ಇಲ್ಲವೆಂಬ ಸಮಸ್ಯೆ. ಹೇಗೋ ಸರಿಯಾದ ಮೊತ್ತ ಕೊಟ್ಟು ರೂಂ ಸೇರುವಷ್ಟರಲ್ಲಿ ತಲೆ ಕಾರ್ಪೋರೇಷನ್ ತೊಟ್ಟಿ !.. 

                " ಈ ಜೀವನ ಅಂದ್ರೆ ಇಷ್ಟೇನಾ? ಏನೋ ದೊಡ್ಡ ಸಾಧನೆ ಮಾಡ್ತೀನಿ ಅಂತ ಹುಟ್ಟಿ ಬೆಳೆದ ಊರು, ತಂದೆ - ತಾಯಿಯರನ್ನು ಬಿಟ್ಟು ಮಹಾನಗರಿಯ ಮಡಿಲೇರಿದ್ದು ಇದಕ್ಕೇನಾ? ಕೇವಲ ತಿಂಗಳ ಕೊನೆಯಲ್ಲಿ ಬರುವ ಸಂಬಳವೇ ಈಗೀಗ ನನ್ನ ಖುಷಿಯಾ? ಇದು ನಿಜಕ್ಕೂ ನಾ ಬಯಸಿದ ಬದುಕಾ?.... ಛೇ, ನನ್ನ ಆಯ್ಕೆ ತಪ್ಪಾಗಿ ಹೋಯ್ತಾ????......" ಅಂತೆಲ್ಲ ಪ್ರಶ್ನೆಗಳು ಮೆದುಳನ್ನು ಇಲಿಯಾಗಿ ಬಿಲಕೊರೆದ ಭಾಸ !.. "ಯಾಕೋ ಈ ದಿನವೇ ಸರಿಯಿಲ್ಲ.." ಎಂದು ರಾತ್ರಿ ಊಟ ಮುಗಿಸಿ ಮೊಬೈಲ್ ಹಿಡಿದರೆ ಸದ್ದಿಲ್ಲದೇ ಗಂಟೆ ಹನ್ನೆರಡು ದಾಟಿರುತ್ತದೆ. ಮರುದಿನ ಏಳುವಾಗ ಮತ್ತೆ ಲೇಟ್ ! ಮತ್ತದೇ ಚಕ್ರದ ಪುನರಾವರ್ತನೆ!!.... 

                    ಇದನ್ನು ನೋಡಿ ಬದುಕಂದ್ರೆ ಬರಿ ಇಷ್ಟೇ...ಅಂತ ಅಂದ್ಕೊಳ್ಳೋದು ತಪ್ಪಾಗತ್ತೆ! ಕೆಲವೊಮ್ಮೆ ಈ ಮನಸ್ಸು ಸುಮ್ನೆ ಸುಮ್ನೆ ಖುಷಿ ಪಡೋದನ್ನ ಕಲಿಸುತ್ತೆ. ಎಷ್ಟೇ ಬೇಜಾರಲ್ಲಿದ್ದರೂ ಸ್ವಲ್ಪ ಹೊತ್ತಿಗೆ ಸುಮ್ಮನೆ ನಗುವ ಮಗುವಿನಂತಾಗಿರುತ್ತೇವೆ. ಪುಟ್ಟ ಹುಡುಗಿ ಮೊದಲ ಬಾರಿ ಕಾಲ್ಗೆಜ್ಜೆ ತೊಟ್ಟಾಗ ಹೇಗೆ ನಲಿಯುತ್ತದೋ ಹಾಗೆ ಕುಣಿಯುತ್ತದೆ ಈ ಮನ! ಸಂತಸಕ್ಕೆ ನಿರ್ದಿಷ್ಟ ಕಾರಣಗಳು ಬೇಕೆಂದೇನಿಲ್ಲ! ಸುರಿವ ಸೋನೆಗೆ, ಹರಿವ ಝರಿಗೆ, ತಂಬೆಲರ ಆಲಿಂಗನಕೆ, ಇಬ್ಬನಿಯ ಚುಂಬನಕೆ ಕಾರಣ ಹುಡುಕುವುದನ್ನು ಬಿಡಿ...

          ಸುಮ್ಮನೆ ಆ ಮಧುರ ಅನುಭೂತಿಯನ್ನು ಅನುಭವಿಸುವುದರಲ್ಲೇ ಅಪಾರ ಖುಷಿ ಅಡಗಿದೆ. ಅಗಾಧ ಆನಂದದ ಅಲೆಯಿದೆ...! ಕೆಲವೊಮ್ಮೆ ಮನಮರ್ಕಟದ ಕೈಯಲ್ಲಿ ಖುಷಿಯ ಹಣ್ಣುಗಳ ಗೊಂಚಲೇ ಇರುತ್ತವೆ! ಆಗ ಎಲ್ಲಕ್ಕೂ ನಗು, ಮುಂಜಾನೆ ಏಳುವಾಗಲೇ ನವೋತ್ಸಾಹ, ಇವತ್ತೇನೋ ಒಳಿತಾಗುತ್ತದೆಂಬ ಭಾವ! ಬೇಗನೆ ತಯಾರಾಗಿ ಆಫೀಸಿಗೆ ಹೊರಟಾಗ ರೂಂಮೇಟ್ "ಬಾಯ್, ಹುಷಾರು..." ಎಂದರೆ ಅವರ ಕಾಳಜಿ ನೆನೆದು ಪುಟ್ಟ ಮನಕೆ ಸಂತಸ. ತುಟಿಯಂಚಿನಲಿ ಕಿರುನಗೆ. ಬೇಗ ಬಸ್ ಸಿಕ್ಕರೆ ಖುಷಿ, ಸೀಟು ಸಿಕ್ಕರಂತೂ ಮನದಲಿ ಸದ್ದಿಲ್ಲದ ದೀಪಾವಳಿ ಹಬ್ಬ! ಆಫೀಸಿಗೆ ಬೇಗನೆ ತಲುಪಿದ್ದಕ್ಕೆ ಆನಂದ. ಎಷ್ಟೇ ಗಡಿಬಿಡಿಯಲ್ಲಿರಲಿ, ತಲೆಬಿಸಿಯಿರಲಿ, ಅದೇ ಸಮಾಧಾನದ ಮೊಗ ಹೊತ್ತು "ಗುಡ್ಮಾರ್ನಿಂಗ್.." ಎನ್ನುವ ವಾಚ್ ಮೆನ್ ಗೆ ಮುಗುಳ್ನಕ್ಕು "ವೆರಿ ಗುಡ್ಮಾರ್ನಿಂಗ್" ಎಂದು ಒಳಹೋಗುವ ಕ್ಷಣದ ಭಾವಗಳನ್ನು ವಿವರಿಸುವುದು ಕಷ್ಟವೇ! ಎಸಿ ರೂಮಿನಲ್ಲಿ ಸಮಯದ ಪರಿವಿಲ್ಲದಂತೆ ದುಡಿವ ಮನಕೆ ಆಫೀಸಿನಿಂದ ಹೊರಬಂದ ತಕ್ಷಣ ಸಿನೆಮಾ ಥಿಯೇಟರಿನಿಂದ ಹೊರಬಂದ ಭಾಸ! ನಿಜ ಜೀವನದ ಪ್ರಾರಂಭ ಆಫೀಸಿನ ಗೇಟಿನಿಂದಾಚೆಯೇ ಎಂಬ ತುಂಬು ಭಾವ... ಫುಟ್ಪಾತಿನಲ್ಲಿ ಕುಳಿತು ಹೂಮಾರುವ ಹೆಂಗಸಿನ ಪುಟ್ಟ ಮಗುವಿನ ಕಣ್ಣಲ್ಲಿನ ಹೊಳಪು ಬೇಸರದ ಮನಕೊಂದು ಪವರ್ ಫುಲ್ ಟಾನಿಕ್!!.. ಪಾರ್ಕಿನಲಿ ಕೇಳಿಬರುವ ಹಿರಿಯರ ಮುಗಿಯದ ಹರಟೆಯಿಂದ ಮನದಲೊಂದು ಪುಟ್ಟ ನಗು, ಬಲೂನು ಮಾರುವ ಹುಡುಗನ ತಾಳ್ಮೆ ನೆನೆದು ಅಂತರಾಳದಲ್ಲೆಲ್ಲೋ ಉತ್ಸಾಹಕಾರಂಜಿಯ ಚಿಲುಮೆ! ಇರುವ ಸಣ್ಣ ಟೆರೇಸಿನಲ್ಲೇ ಮಡಿಕೆಯಲಿ ಹೂಗಿಡ ಬೆಳೆದು, ಪ್ರತಿದಿನವೂ ನೀರೆರೆಯುವ ನೀರೆಯ ಕಂಡಾಗ ಬದುಕಿನ ಅರ್ಥ ಅರಿವ ಕುತೂಹಲ, ಎಲ್ಲ ಮರೆತು ಕೂಡಿ ಆಡುವ ಚಿಣ್ಣರ ಕಂಡಾಗ ಬಾಲ್ಯವ ನೆನೆದು ನವಿರಾದ ಕಂಪನ, ದಿನವೂ ಓಡಾಡುವ ಹಾದಿಯ ಕಲ್ಲು ಕಲ್ಲಿಗೂ ಕಿವಿಯಿದ್ದರೆ ನನ್ನೀ ತರಹೇವಾರಿ ಭಾವನೆಗಳಿಗೆ ಸ್ಪಂದನೆ ಸಿಗುತ್ತಿತ್ತೇನೋ...ಎಂಬ ಕಲ್ಪನೆ.... 

              ಭಾವಗಳ ಬಂಡಿ ಏರಿ ಹೊರಟರೆ ತಲುಪುವ ಗಮ್ಯಕ್ಕಿಂತ ಆ ಯಾತ್ರೆಯ ಅನುಭವಗಳ ಗೊಂಚಲು ಹಾಗೂ ಅದರಿಂದಾದ ಅರಿವೇ ಮುಖ್ಯವೆನಿಸುತ್ತವೆ...ಬಹುಶಃ ಬದುಕು ಬಣ್ಣ ಪಡೆವ ಕಾಲ ಅದೇ ಇರಬಹುದು....!! ಮಳೆಗಾಲದಲಿ ತೋಡಿನಲ್ಲಿ ಕಾಗದದ ದೋಣಿ ಬಿಡುವಾಗಲೇ "ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ...." ಎಂದು ಕುವೆಂಪುರವರ ಗೀತೆಯನ್ನು ಭಾವತುಂಬಿ ಹಾಡುತ್ತಿದ್ದ ಬಾಲ್ಯವನು ದಾಟಿ ಇದೀಗ ಯಾಂತ್ರಿಕ ಬದುಕಿಗೆ ಕಾಲಿಟ್ಟಾಗಿದೆ. ಆದರೆ ಹಳೆಯ ಮುಗ್ಧತೆ ನಮ್ಮಲ್ಲಿ ತುಸುವಾದರೂ ಜೀವಂತವಾಗಿದ್ದರೆ ಬದುಕು ಬಲು ಸುಂದರ....! 

                ಖುಷಿ ಅನ್ನೋದು ಕೆ.ಆರ್.ಮಾರ್ಕೆಟ್ಟಿನಿಂದ ಕೊಂಡು ತರುವ ತರಕಾರಿಯಲ್ಲ, ನೋವು ಅನ್ನೋದು ಇದ್ದಕ್ಕಿದ್ದಂತೆ ಆಕಾಶದಿಂದ ಉದುರೋ ಉಲ್ಕೆಯೂ ಅಲ್ಲ.... ಎಲ್ಲವೂ ಇರುವುದು ನಮ್ಮೊಳಗೆ. ಕೇವಲ ನಮ್ಮೊಳಗೆ ಮಾತ್ರ ...!

- R.R.B.

ಭಾನುವಾರ, ಜನವರಿ 14, 2018

ಶೀರ್ಷಿಕೆ ಇಲ್ಲದ ಸಾಲುಗಳು

ಮುಂಜಾನೆಯ ಈ ಸವಿ ಸಮಯಕೆ 
ಹೊಂಬಿಸಿಲಿನ ಸಿಹಿ ಸ್ಪರ್ಷ ಇಳೆಗೆ 
ಆಲಂಗಿಸೋ ತಂಬೆಲರ ಮೌನರಾಗಕೆ 
ತಲೆದೂಗೋ ಆನಂದ ಚಿಗುರೆಲೆಗೆ... 

ಎತ್ತರಕೆ ಬೆಳೆದುನಿಂತ ಕಲ್ಪವೃಕ್ಷಕೋ 
ನೀಲಾಕಾಶವ ಚುಂಬಿಸುವ ಬಯಕೆ 
ಗಿಡಗಳ ತಬ್ಬಿಕೊಂಡ ಮುಳ್ಳುಬೇಲಿಗೋ 
ಆಗಾಗ ಬರುವ ಯಜಮಾನನದೇ ಸ್ಮರಿಕೆ... 

ಗದ್ದೆಯಂಚಲಿನ್ನೂ ನಿದ್ದೆಮಂಪರಿನ ರಸ್ತೆ 
ಕಾಲುದಾರಿಯ ಪಯಣದಲಿಹ ಯಾತ್ರಿಕ 
ತಿಳಿಸದೇ ಸಂಗಾತಿಯಾಗಿವೆ ಹೆಜ್ಜೆ ಸದ್ದು 
ಇನ್ನೆಲ್ಲೋ ಸದ್ದಿಲ್ಲದೆ ಕಾಯುತಿದೆ ನೆರಳು...  

ಹಸಿರಸೀರೆಯ ಸೆರಗಿಗೆ ಸೊಬಗ ಚಿತ್ತಾರ 
ಮನದ ಕಡಲಲಿ ಈಗೀಗ ಬರೀ ಉಬ್ಬರ... 
ಬೀಸೋ ಗಾಳಿಯಲೆಗೆ ಹಾಯಿ ಬಿಸಿಲಕೋಲು 
ಗೊತ್ತಾಗದಂತೆ ಪ್ರಸವಿಸಿದ ಭಾವಗಳು ಸಾಲು ಸಾಲು...

- R.R. B.

ಹುಚ್ಚು ಹುಡುಗಿಯ ಬಿಚ್ಚು ಮಾತುಗಳು...

               ಇನಿಯಾ, ನಂಗೆ ಗೊತ್ತು - ಈ ಓಲೆ ಓದಿದ್ಮೇಲೆ ನೀನು ತುಂಬಾ ಅಳ್ತೀಯ ಅಂತ. ಆದ್ರೆ ಕೆಲ ವಿಷ್ಯಗಳು ನೇರವಾಗಿದ್ರೇನೇ ಒಳ್ಳೇದು ಅಂತ ನನ್ನ ಅನಿಸಿಕೆ. ನಿನ್ನ ಪ್ರೀತಿಯ ಮಳೆಯಿಂದ ನಾನೀಗ ಪರಿಶುದ್ಧ. ನಿನ್ನ ಭರವಸೆಯ ನುಡಿಗಳೇ ನನ್ನೀ ಬದುಕಿಗೆ ಆಧಾರಸ್ತಂಭ. ನಿನ್ನೊಂದಿಗೆ ಕಳೆದ ಕ್ಷಣಗಳು ನನ್ನ ಬಾಳಿನ ಅತ್ಯಂತ ಸುಂದರ ಘಳಿಗೆಗಳು.....

                    "ನೀನೇ ನನ್ನ ಜೀವ" ಅನ್ನೋ ದೊಡ್ಡ ಮಾತು ನಾ ಹೇಳಲಾರೆ ಗೆಳೆಯಾ. ಯಾಕಂದ್ರೆ ನಿನ್ನ ಆಗಮನದ ಮೊದಲೂ ನಾನು ಬದುಕುತ್ತಿದೆ ನನಗಾಗಿ... ಆದರೆ ನೀ ಬಂದ ಮೇಲೆ ನನ್ನ ಬಾಳಪುಟದಲ್ಲಿ ಸಾವಿರಾರು ಸವಿನೆನಪುಗಳ ದಾಖಲೀಕರಣ...ಖಾಲಿ ಹಾಳೆಯಲ್ಲಿ ಬಣ್ಣ ಬಣ್ಣದ ಚೆಂದದ ಚಿತ್ತಾರ ಬರೆದವ ನೀನು! ನನ್ನಂತರಂಗದ ಮೌನಕ್ಕೆ ಮಾತಿನ ರೂಪ ಕೊಟ್ಟವ ನೀನು! ನಾ ಕಾಣೋ ಕನಸಿಗೆ ಒಂದೊಳ್ಳೆ ಅರ್ಥ ಕಲ್ಪಿಸಿದವ ನೀನು! ಏಕತಾನತೆಯ ವೇಳೆಯಲಿ ನವಿರಾದ ಏರಿಳಿತ ತಂದವ ನೀನು! ಹುಚ್ಚು ಹುಡುಗಿಯಂತವಳನ್ನು ಆಗಾಗ ಹೆಣ್ಣಾಗಿಸಿದ್ದು ನೀನು! ಜೀವನದ ಗಮ್ಯಗಳತ್ತ ಗಮನ ತಂದವ ನೀನು! ಪ್ರೀತಿ ಬೊಗಸೆಯೊಳಗಣ ನೀರಲ್ಲ, ಅದು ಸಾಗರದಂತೆ ವಿಶಾಲ ಎಂದು ಕಲಿಸಿದ್ದು ನೀನು! ಒಮ್ಮೊಮ್ಮೆ ತಿಳಿಯದೇ ಮೂಡುವ ನನ್ನ ಮುಗುಳ್ನಗೆ ನೀನು.....!! 

                   ಇದಕ್ಕೆ ನಾನು ಎಂದೆಂದೂ ಚಿರ ಋಣಿ... ಗೆಳೆಯಾ, ನಿನ್ನೊಂದಿಗೆ ಕಳೆದ ಪ್ರತಿ ನಿಮಿಷವೂ ನನ್ನ ಮನದಂಗಳದಿ ಹಚ್ಚ ಹಸಿರು...ಅತಿಯಾದರೆ ಅಮೃತವೂ ವಿಷವಂತೆ. ನಿನ್ನ ಪ್ರೀತಿ ಅಷ್ಟೆತ್ತರ ತಲುಪಿದೆ. "ಈ ಮಟ್ಟದ ಅನುರಾಗಕ್ಕೆ ನಾನು ಅರ್ಹಳೇ?" ಅನ್ನೋ ಪ್ರಶ್ನೆ ನನ್ನ ಕಾಡುತ್ತಿದೆ ಮಿತ್ರಾ... ನೀನಿಲ್ಲದೇ ಬದುಕೇ ಇಲ್ಲವೇನೋ ಎಂಬಷ್ಟು ಗೀಳು ನಿನ್ನ ಬಗ್ಗೆ... ಆದರೆ ಬಾಲ್ಯದ ಕನಸುಗಳ ನನಸಾಗಿಸೋ ಜವಾಬ್ದಾರಿ ಇನ್ನೂ ಬಾಕಿಯಿದೆ. ನಿನ್ನ ಪ್ರೀತಿಯ ಮಡದಿಯಾಗೋ ಮುನ್ನ ಅಪ್ಪ - ಅಮ್ಮನಿಗೆ ಸಾರ್ಥಕ ಮಗಳಾಗಬೇಕು ನಾನು... ಕಂಡ ವರ್ಣರಂಜಿತ ಸ್ವಪ್ನಗಳಿಗೆ ಅರ್ಥ ತುಂಬಿ ಸಾಕಾರ ರೂಪ ಕೊಟ್ಟು ಸಾರ್ಥಕ್ಯ ಪಡೆಯಬೇಕು ನಾನು... ಅದಕ್ಕಾಗಿ ನಿನ್ನಿಂದ ನನ್ನ, ನನ್ನಿಂದ ನಿನ್ನ ಬಿಟುಗಡೆ ಅನಿವಾರ್ಯ ಗೆಳೆಯಾ... 

                   ನಿನಗೆ ಗೊತ್ತಿದೆಯೋ ಇಲ್ಲವೋ - ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುವ ಶಕ್ತಿ ವಿರಹಕ್ಕಿದೆಯೆಂದು ! ನಿನ್ನೀ ಕಪ್ಪು ಕಂಗಳ ಚೆಲುವೆ ನಿನ್ನ ಬಿಟ್ಟು ಓಡಿಹೋದಳೆಂದು ಎಂದೂ ಭಾವಿಸ್ಬೇಡ... ತುಸು ವಿರಾಮಬೇಕಿದೆ ಸಿಹಿನೆನಪುಗಳ ಸವಿಯಲು. ಖಾಲಿಯಾಗಬೇಕಿದೆ ಹೊಸತನವ ತುಂಬಿಕೊಳಲು. ಏಕಾಂಗಿಯಾಗಬೇಕಿದೆ ಯೋಚನೆಗಳ ಬಂಡಿ ಏರಲು..... 

               ನಾನು ಮತ್ತೆ ಬರುತ್ತೇನೆ - ಇನ್ನಷ್ಟು ಸಂತಸದ ಘಳಿಗೆ ಹೊತ್ತು. ಆಗ ನೆನಪಿನ ಬುತ್ತಿ ಬಿಚ್ಚಿ ಸವಿಯೋಣ..ಬೆಳದಿಂಗಳ ಬೆಳಕಲಿ ಒಬ್ಬರಿಗೊಬ್ಬರು ಪ್ರೀತಿಯ ತುತ್ತು ತಿನಿಸೋಣ..ಮನ ಬಂದಷ್ಟು ಹೊತ್ತು ಹರಟೋಣ..ಕತ್ತಲೂ ನಾಚುವಂತೆ ಕೂಡೋಣ... ಅಲ್ಲಿಯವರೆಗೆ ಈ ಗೆಳತಿ ನಿನ್ನ ನೆನಪಿನಲ್ಲುಳಿಯುತ್ತಾಳೆಂಬುದು ನನ್ನ ನಂಬಿಕೆ. ಅದು ಹುಸಿಯಾಗದಿರಲೆಂದು ಆಶಿಸುತ್ತಾ... 

 - R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...