ಸೋಮವಾರ, ಜನವರಿ 22, 2018

ಅನಾವರಣ

                      ಮನಸ್ಸು ಅನ್ನೋದು ಒಂಥರಾ ಊಸರವಳ್ಳಿ ಇದ್ದ ಹಾಗೆ. ಎಲ್ಲಿ, ಯಾವಾಗ ಯಾವ ಬಣ್ಣವೋ ಯಾವ ಭಾವವೋ! ಕೆಲವೊಮ್ಮೆ ನಮ್ಮ ನಡವಳಿಕೆ ನಮಗೇ ಅಚ್ಚರಿ ಆಗತ್ತೆ. ಅದರಲ್ಲೂ ನನ್ನಂಥ ಭಾವುಕರಿಗಂತೂ ಕ್ಷಣಕ್ಷಣವೂ ಭಾವಗಳಲಿ ವರ್ಣಬದಲಾವಣೆ... ಮಹಾನಗರಿಯ ಈ ಬದುಕು ಕಲಾವಿದ ರಚಿಸಿದ ಚಿತ್ತಾರಭರಿತ ವರ್ಣಚಿತ್ರದಂತೆ. ಒಂದೊಂದು ಬಣ್ಣದಲ್ಲಿ ಕುಂಚ ಅದ್ದುವಾಗಲೂ ಕಲಾವಿದ ಎಚ್ಚರ ವಹಿಸುತ್ತಾನೆ. ನಾವೂ ಹಾಗೆ ಎಚ್ಚರ ವಹಿಸಿದರೆ ಬದುಕು ಸುಂದರ ಬಣ್ಣಗಳ ಸೊಗಸಿನ ಚಿತ್ತಾರ ! ಆದರೆ ಈ ಮನಮರ್ಕಟ ಯಾವಾಗ ಯಾವ ಮರ ಏರುವುದೋ ಬಲ್ಲವರಾರು??...

                     ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಮನಕೆ ಬೇಸರದ ಪೊರೆಯ ಆವರಣ. ಆಗ ಪ್ರತಿಯೊಂದೂ ಸಮಸ್ಯೆಗಾಳಾಗಿ ಗೋಚರಿಸುತ್ತವೆ. ಚಳಿಗಾಲದ ಮುಂಜಾನೆ ಏಳುವುದೇ ಒಂದು ಬೇಜಾರು. ಎದ್ದು ಕಷ್ಟಪಟ್ಟು ತಯಾರಾದರೆ ಆಫೀಸಿಗೆ ತಡವಾಯ್ತು ಎಂಬ ಕಳವಳ. ಬಸ್ ನಿಲ್ದಾಣದಲ್ಲಿ ಎಷ್ಟು ಕಾದರೂ ಬಸ್ ಸಿಗದಿದ್ದರೆ ತಳಮಳ. ಕಡೆಗೂ ಬಸ್ಸೇರುವಷ್ಟರಲ್ಲಿ "ಫುಲ್ ರಶ್" ಎಂಬ ಸಿಟ್ಟು. ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ಬಿ.ಎಂ.ಟಿ.ಸಿ.ಯ ನೂಕುನುಗ್ಗಲಿನಲ್ಲಿ ತನ್ನ ಕಳೆ ಕಳೆದುಕೊಂಡು ಕೊಳೆ ಆಯ್ತೆಂದು ಕಸಿವಿಸಿ. ಬಸ್ಸಿಳಿದು ಆಫೀಸಿಗೆ ಕಾಲಿಡುವವರೆಗೂ "Boss" ಬೈದರೆ ಏನುತ್ತರ ಕೊಡಬೇಕೆಂಬ ತಯಾರಿ. ಆಫೀಸಲ್ಲಿ ಕುಳಿತರೆ ಮಾಡಬೇಕಾದ ಕೆಲಸಗಳ ಪಟ್ಟಿಯೋ ಹನುಮಂತನ ಬಾಲವೇ ಸರಿ! ಜೊತೆಗೆ ಯಾರದೋ ತಪ್ಪಿಗೆ ಮೇಲಧಿಕಾರಿಯಿಂದ ಬೈಸಿಕೊಳ್ಳುವ ಭಾಗ್ಯ! ತಪ್ಪು ತನ್ನದಲ್ಲವೆಂದು ಸರಿಪಡಿಸಿಕೊಳ್ಳಲು ಯತ್ನಿಸಿದರೆ "ನನಗೇ ಎದುರುತ್ತರ ಕೊಡ್ತೀಯಾ?" ಎಂಬ ಬೈಗುಳ ಬೋನಸ್ ! ಮನಸ್ಸು ಕೆಡಿಸಿಕೊಂಡು ಹೇಗೋ ಕೆಲಸ ಮುಗಿಸುವಷ್ಟರಲ್ಲಿ ಸಾಕು ಸಾಕಾಗಿರತ್ತೆ....ಇನ್ನು ಬಸ್ಸಿಗೆ ಕಾಯುವ ಗೋಜಲೇ ಬೇಡವೆಂದು ಕ್ಯಾಬ್ ಬುಕ್ ಮಾಡಲು ಹೋದರೆ ಹತ್ತಿರದಲ್ಲೆಲ್ಲೂ ಕ್ಯಾಬ್ ಇಲ್ಲವೆಂಬ ಸಿಟ್ಟು. ಆಟೋ ಹಿಡಿಯೋಣವೆಂದರೆ "ಒಂದು ಆಟೋನೂ ಸಿಕ್ತಾ ಇಲ್ಲ"ವೆಂಬ ಕೋಪ. ಆಟೋ ಸಿಕ್ಕ ಮೇಲೆ "ಅಬ್ಬ!.." ಎಂದು ನಿಟ್ಟುಸಿರು ಬಿಟ್ರೆ ಆಟೋದವನು ಟ್ರಾಫಿಕ್ ಅಂತ ಅರ್ಧ ಬೆಂಗಳೂರು ಸುತ್ತಿಸಿ ನಂತ್ರ ಇಳಿಸಬೇಕಾದಲ್ಲಿ ಇಳಿಸ್ತಾನೆ. ಗೊಣಗುತ್ತಾ ದುಡ್ಡು ಕೊಟ್ರೆ ಚಿಲ್ಲರೆ ಇಲ್ಲವೆಂಬ ಸಮಸ್ಯೆ. ಹೇಗೋ ಸರಿಯಾದ ಮೊತ್ತ ಕೊಟ್ಟು ರೂಂ ಸೇರುವಷ್ಟರಲ್ಲಿ ತಲೆ ಕಾರ್ಪೋರೇಷನ್ ತೊಟ್ಟಿ !.. 

                " ಈ ಜೀವನ ಅಂದ್ರೆ ಇಷ್ಟೇನಾ? ಏನೋ ದೊಡ್ಡ ಸಾಧನೆ ಮಾಡ್ತೀನಿ ಅಂತ ಹುಟ್ಟಿ ಬೆಳೆದ ಊರು, ತಂದೆ - ತಾಯಿಯರನ್ನು ಬಿಟ್ಟು ಮಹಾನಗರಿಯ ಮಡಿಲೇರಿದ್ದು ಇದಕ್ಕೇನಾ? ಕೇವಲ ತಿಂಗಳ ಕೊನೆಯಲ್ಲಿ ಬರುವ ಸಂಬಳವೇ ಈಗೀಗ ನನ್ನ ಖುಷಿಯಾ? ಇದು ನಿಜಕ್ಕೂ ನಾ ಬಯಸಿದ ಬದುಕಾ?.... ಛೇ, ನನ್ನ ಆಯ್ಕೆ ತಪ್ಪಾಗಿ ಹೋಯ್ತಾ????......" ಅಂತೆಲ್ಲ ಪ್ರಶ್ನೆಗಳು ಮೆದುಳನ್ನು ಇಲಿಯಾಗಿ ಬಿಲಕೊರೆದ ಭಾಸ !.. "ಯಾಕೋ ಈ ದಿನವೇ ಸರಿಯಿಲ್ಲ.." ಎಂದು ರಾತ್ರಿ ಊಟ ಮುಗಿಸಿ ಮೊಬೈಲ್ ಹಿಡಿದರೆ ಸದ್ದಿಲ್ಲದೇ ಗಂಟೆ ಹನ್ನೆರಡು ದಾಟಿರುತ್ತದೆ. ಮರುದಿನ ಏಳುವಾಗ ಮತ್ತೆ ಲೇಟ್ ! ಮತ್ತದೇ ಚಕ್ರದ ಪುನರಾವರ್ತನೆ!!.... 

                    ಇದನ್ನು ನೋಡಿ ಬದುಕಂದ್ರೆ ಬರಿ ಇಷ್ಟೇ...ಅಂತ ಅಂದ್ಕೊಳ್ಳೋದು ತಪ್ಪಾಗತ್ತೆ! ಕೆಲವೊಮ್ಮೆ ಈ ಮನಸ್ಸು ಸುಮ್ನೆ ಸುಮ್ನೆ ಖುಷಿ ಪಡೋದನ್ನ ಕಲಿಸುತ್ತೆ. ಎಷ್ಟೇ ಬೇಜಾರಲ್ಲಿದ್ದರೂ ಸ್ವಲ್ಪ ಹೊತ್ತಿಗೆ ಸುಮ್ಮನೆ ನಗುವ ಮಗುವಿನಂತಾಗಿರುತ್ತೇವೆ. ಪುಟ್ಟ ಹುಡುಗಿ ಮೊದಲ ಬಾರಿ ಕಾಲ್ಗೆಜ್ಜೆ ತೊಟ್ಟಾಗ ಹೇಗೆ ನಲಿಯುತ್ತದೋ ಹಾಗೆ ಕುಣಿಯುತ್ತದೆ ಈ ಮನ! ಸಂತಸಕ್ಕೆ ನಿರ್ದಿಷ್ಟ ಕಾರಣಗಳು ಬೇಕೆಂದೇನಿಲ್ಲ! ಸುರಿವ ಸೋನೆಗೆ, ಹರಿವ ಝರಿಗೆ, ತಂಬೆಲರ ಆಲಿಂಗನಕೆ, ಇಬ್ಬನಿಯ ಚುಂಬನಕೆ ಕಾರಣ ಹುಡುಕುವುದನ್ನು ಬಿಡಿ...

          ಸುಮ್ಮನೆ ಆ ಮಧುರ ಅನುಭೂತಿಯನ್ನು ಅನುಭವಿಸುವುದರಲ್ಲೇ ಅಪಾರ ಖುಷಿ ಅಡಗಿದೆ. ಅಗಾಧ ಆನಂದದ ಅಲೆಯಿದೆ...! ಕೆಲವೊಮ್ಮೆ ಮನಮರ್ಕಟದ ಕೈಯಲ್ಲಿ ಖುಷಿಯ ಹಣ್ಣುಗಳ ಗೊಂಚಲೇ ಇರುತ್ತವೆ! ಆಗ ಎಲ್ಲಕ್ಕೂ ನಗು, ಮುಂಜಾನೆ ಏಳುವಾಗಲೇ ನವೋತ್ಸಾಹ, ಇವತ್ತೇನೋ ಒಳಿತಾಗುತ್ತದೆಂಬ ಭಾವ! ಬೇಗನೆ ತಯಾರಾಗಿ ಆಫೀಸಿಗೆ ಹೊರಟಾಗ ರೂಂಮೇಟ್ "ಬಾಯ್, ಹುಷಾರು..." ಎಂದರೆ ಅವರ ಕಾಳಜಿ ನೆನೆದು ಪುಟ್ಟ ಮನಕೆ ಸಂತಸ. ತುಟಿಯಂಚಿನಲಿ ಕಿರುನಗೆ. ಬೇಗ ಬಸ್ ಸಿಕ್ಕರೆ ಖುಷಿ, ಸೀಟು ಸಿಕ್ಕರಂತೂ ಮನದಲಿ ಸದ್ದಿಲ್ಲದ ದೀಪಾವಳಿ ಹಬ್ಬ! ಆಫೀಸಿಗೆ ಬೇಗನೆ ತಲುಪಿದ್ದಕ್ಕೆ ಆನಂದ. ಎಷ್ಟೇ ಗಡಿಬಿಡಿಯಲ್ಲಿರಲಿ, ತಲೆಬಿಸಿಯಿರಲಿ, ಅದೇ ಸಮಾಧಾನದ ಮೊಗ ಹೊತ್ತು "ಗುಡ್ಮಾರ್ನಿಂಗ್.." ಎನ್ನುವ ವಾಚ್ ಮೆನ್ ಗೆ ಮುಗುಳ್ನಕ್ಕು "ವೆರಿ ಗುಡ್ಮಾರ್ನಿಂಗ್" ಎಂದು ಒಳಹೋಗುವ ಕ್ಷಣದ ಭಾವಗಳನ್ನು ವಿವರಿಸುವುದು ಕಷ್ಟವೇ! ಎಸಿ ರೂಮಿನಲ್ಲಿ ಸಮಯದ ಪರಿವಿಲ್ಲದಂತೆ ದುಡಿವ ಮನಕೆ ಆಫೀಸಿನಿಂದ ಹೊರಬಂದ ತಕ್ಷಣ ಸಿನೆಮಾ ಥಿಯೇಟರಿನಿಂದ ಹೊರಬಂದ ಭಾಸ! ನಿಜ ಜೀವನದ ಪ್ರಾರಂಭ ಆಫೀಸಿನ ಗೇಟಿನಿಂದಾಚೆಯೇ ಎಂಬ ತುಂಬು ಭಾವ... ಫುಟ್ಪಾತಿನಲ್ಲಿ ಕುಳಿತು ಹೂಮಾರುವ ಹೆಂಗಸಿನ ಪುಟ್ಟ ಮಗುವಿನ ಕಣ್ಣಲ್ಲಿನ ಹೊಳಪು ಬೇಸರದ ಮನಕೊಂದು ಪವರ್ ಫುಲ್ ಟಾನಿಕ್!!.. ಪಾರ್ಕಿನಲಿ ಕೇಳಿಬರುವ ಹಿರಿಯರ ಮುಗಿಯದ ಹರಟೆಯಿಂದ ಮನದಲೊಂದು ಪುಟ್ಟ ನಗು, ಬಲೂನು ಮಾರುವ ಹುಡುಗನ ತಾಳ್ಮೆ ನೆನೆದು ಅಂತರಾಳದಲ್ಲೆಲ್ಲೋ ಉತ್ಸಾಹಕಾರಂಜಿಯ ಚಿಲುಮೆ! ಇರುವ ಸಣ್ಣ ಟೆರೇಸಿನಲ್ಲೇ ಮಡಿಕೆಯಲಿ ಹೂಗಿಡ ಬೆಳೆದು, ಪ್ರತಿದಿನವೂ ನೀರೆರೆಯುವ ನೀರೆಯ ಕಂಡಾಗ ಬದುಕಿನ ಅರ್ಥ ಅರಿವ ಕುತೂಹಲ, ಎಲ್ಲ ಮರೆತು ಕೂಡಿ ಆಡುವ ಚಿಣ್ಣರ ಕಂಡಾಗ ಬಾಲ್ಯವ ನೆನೆದು ನವಿರಾದ ಕಂಪನ, ದಿನವೂ ಓಡಾಡುವ ಹಾದಿಯ ಕಲ್ಲು ಕಲ್ಲಿಗೂ ಕಿವಿಯಿದ್ದರೆ ನನ್ನೀ ತರಹೇವಾರಿ ಭಾವನೆಗಳಿಗೆ ಸ್ಪಂದನೆ ಸಿಗುತ್ತಿತ್ತೇನೋ...ಎಂಬ ಕಲ್ಪನೆ.... 

              ಭಾವಗಳ ಬಂಡಿ ಏರಿ ಹೊರಟರೆ ತಲುಪುವ ಗಮ್ಯಕ್ಕಿಂತ ಆ ಯಾತ್ರೆಯ ಅನುಭವಗಳ ಗೊಂಚಲು ಹಾಗೂ ಅದರಿಂದಾದ ಅರಿವೇ ಮುಖ್ಯವೆನಿಸುತ್ತವೆ...ಬಹುಶಃ ಬದುಕು ಬಣ್ಣ ಪಡೆವ ಕಾಲ ಅದೇ ಇರಬಹುದು....!! ಮಳೆಗಾಲದಲಿ ತೋಡಿನಲ್ಲಿ ಕಾಗದದ ದೋಣಿ ಬಿಡುವಾಗಲೇ "ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ...." ಎಂದು ಕುವೆಂಪುರವರ ಗೀತೆಯನ್ನು ಭಾವತುಂಬಿ ಹಾಡುತ್ತಿದ್ದ ಬಾಲ್ಯವನು ದಾಟಿ ಇದೀಗ ಯಾಂತ್ರಿಕ ಬದುಕಿಗೆ ಕಾಲಿಟ್ಟಾಗಿದೆ. ಆದರೆ ಹಳೆಯ ಮುಗ್ಧತೆ ನಮ್ಮಲ್ಲಿ ತುಸುವಾದರೂ ಜೀವಂತವಾಗಿದ್ದರೆ ಬದುಕು ಬಲು ಸುಂದರ....! 

                ಖುಷಿ ಅನ್ನೋದು ಕೆ.ಆರ್.ಮಾರ್ಕೆಟ್ಟಿನಿಂದ ಕೊಂಡು ತರುವ ತರಕಾರಿಯಲ್ಲ, ನೋವು ಅನ್ನೋದು ಇದ್ದಕ್ಕಿದ್ದಂತೆ ಆಕಾಶದಿಂದ ಉದುರೋ ಉಲ್ಕೆಯೂ ಅಲ್ಲ.... ಎಲ್ಲವೂ ಇರುವುದು ನಮ್ಮೊಳಗೆ. ಕೇವಲ ನಮ್ಮೊಳಗೆ ಮಾತ್ರ ...!

- R.R.B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...