ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜುಲೈ 16, 2020

ನಿಹಾರಿಕಾ !

                     "ರೀ ಕಾಫಿ" ಲ್ಯಾಪ್ಟ್ ಟಾಪಿನಲ್ಲಿ ಮುಳುಗಿದ್ದ ಗಂಡನಿಗೆ ನಿಹಾರಿಕಾ ಕಾಫಿ ಕಪ್ಪನ್ನು ಕೊಟ್ಟಳು. ಮೊದಲೇ ಕೆಲಸದ ಕಿರಿಕಿರಿಯಲ್ಲಿದ್ದ ಕ್ಷಿತಿಜ್ ಒಂದು ಸಿಪ್ ಕುಡಿದು ಮುಖ ಕಿವುಚಿ, "ಅಡುಗೆ ಮಾಡೋವಾಗ ಮೈಮೇಲೆ ಪ್ರಜ್ಞೆ ಇರಲ್ವಾ ನಿಂಗೆ? ಕಾಫಿಗೆ ಶುಗರ್ ತುಂಬಾ ಕಮ್ಮಿ ಹಾಕಿದ್ಯಲ್ಲ... ಕೆಲ್ಸದ ತಲೆಬಿಸಿನೇ ತಡ್ಕೊಳ್ಳಕ್ಕಾಗ್ತಿಲ್ಲ. ಅದರ ಮಧ್ಯೆ ನೀನು ಬೇರೇ..." ಎಂದು ಬೈದು ಮತ್ತೆ ಕೀಬೋರ್ಡ್ ಕುಟ್ಟಲಾರಂಭಿಸಿದ. ನಿಹಾರಿಕಾ ಪೆಚ್ಚಾಗಿ ಅಡುಗೆ ಮನೆಗೆ ಬಂದಳು. ತನ್ನ ಪಾಲಿನ ಕಾಫಿ ಕುಡಿಯುತ್ತಿರುವಾಗ ಅವಳಿಗೆ ಸಕ್ಕರೆ ಸರಿಯಾದ ಪ್ರಮಾಣದಲ್ಲೇ ಇದೆ ಎಂದು ಅರಿವಾಯಿತು. ಕ್ಷಿತಿಜನ ಕೊನೆಯ ಮಾತು ಅವಳ ಮನಸ್ಸಲ್ಲಿ ಹಲವು ಅಲೆಗಳನ್ನು ಸೃಷ್ಟಿಸಿತ್ತು‌...

            ಮತ್ತೆ ಬೈಸಿಕೊಳ್ಳುವ ಇರಾದೆಯಿಲ್ಲದೇ, ಮಧ್ಯಾಹ್ನದ ಊಟಕ್ಕೆ ರುಚಿಯಾದ ಸ್ಪೆಷಲ್ ಅಡಿಗೆ ಮಾಡಿ, ನಿಹಾರಿಕಾ ರೂಮಿಗೆ ಬಂದು ಕುಳಿತಳು. " ಈ ಹಾಳು ಕೊರೋನಾ ರೋಗ ಬಂದು ಎಲ್ಲರ ನೆಮ್ಮದಿನೂ ಕಿತ್ತುಕೊಂಡಿತು...‌ ಆಫೀಸಿಗೆ ಹೋಗಿ ಬರುವಾಗಲೇ ಚೆನ್ನಾಗಿತ್ತು. ಕ್ಷಿತಿಜ ನನ್ನನ್ನು ಆಫೀಸಿಗೆ ಡ್ರಾಪ್ ಮಾಡಿ ಖುಷಿಯಲ್ಲಿ ಹೋಗುತ್ತಿದ್ದ. ಸಂಜೆ ಬರುವುದು ತಡವಾದರೂ ಕೆಲಸ ಮುಗಿಸಿಯೇ ಬರುತ್ತಿದ್ದ. ಟೆನ್ಶನ್ ಕಮ್ಮಿ ಇತ್ತು. ನಾನೂ ಸಂಜೆ ಬೇಗ ಬಂದು ಒಂದರ್ಧ ಗಂಟೆ ಭರತನಾಟ್ಯ ಮಾಡುವಾಗ ತಲೆಬಿಸಿಯೆಲ್ಲ ಮಾಯವಾಗುತ್ತಿತ್ತು. ಜೊತೆಗೆ ಬದುಕಿನ ಬಗ್ಗೆ ವಿಚಿತ್ರ ಪ್ರೀತಿ ಉಕ್ಕುವ ಸಮಯವದು... ಈಗ 'ವರ್ಕ್ ಫ್ರೊಮ್ ಹೋಂ' ಎನ್ನುವ ಹೆಸರಲ್ಲಿ ನೆಮ್ಮದಿಯನ್ನೂ ಎಮ್ಮೆನ್ಸಿಗಳಿಗೆ ಮಾರಿಕೊಂಡುಬಿಟ್ಟಿದ್ದೇವೆ....." ನಿಟ್ಟುಸಿರೊಂದು ಅವಳಿಗರಿವಿಲ್ಲದೆಯೇ ಹೊರಬಂತು. ಆಗಿನ್ನೂ ಸಮಯ ಹನ್ನೊಂದು ಗಂಟೆ. ಊಟಕ್ಕೆ ಇನ್ನೂ ತಡವಿದೆ. ಏನು ಮಾಡಲಿ? ಎಂದು ಯೋಚಿಸುತ್ತ ನಿಹಾರಿಕಾ ಹಾಲ್ ಕಡೆ ಬಂದಳು. ಕ್ಷಿತಿಜ್ ಸೀರಿಯಸ್ಸಾಗಿ ಕೆಲಸ ಮಾಡುತ್ತಿದ್ದ. ಹಣೆ ಮೇಲೆ ಚಿಂತೆಯ ಗೆರೆಗಳು. ಇವನನ್ನು ಮಾತಾಡಿಸಿದ್ರೆ ಇರೋ ಮೂಡ್ ಕೂಡ ಹಾಳಾಗತ್ತೆ‌ ಎಂದನಿಸಿ ಟೆರೇಸಿಗೆ ಹೋದಳು.

           ಆಗಸ ಮಳೆ ಬರುವ ಸೂಚನೆ ನೀಡಿತ್ತು. ನಿಹಾರಿಕಾ ತೂಗುಯ್ಯಾಲೆಯಲಿ ಕೂತು ಬದುಕ ಉಯ್ಯಾಲೆಯ ಕುರಿತು ಯೋಚಿಸಲಾರಂಭಿಸಿದಳು...  "ಲವ್ ಮ್ಯಾರೇಜ್ ಅಲ್ಲದೇ ಇದ್ರೂ ಕ್ಷಿತಿಜ್ ನಂತ ಒಳ್ಳೆ ಹುಡುಗ ಸಿಕ್ಕಿದ್ದು ನನ್ನ ಪುಣ್ಯ. ಯಾವ ಚಟಗಳಿಲ್ಲ, ಪಾರ್ಟಿ ಅಂದ್ರೇನೇ ಆಗಲ್ಲ, ಇರುವ ಕೆಲವೇ ಕೆಲವು ಗೆಳೆಯರೂ ಒಳ್ಳೆಯವರು, ನನ್ನನ್ನು ತುಂಬಾ ಇಷ್ಟ ಪಡೋರು.... ಬದುಕಲು ಇನ್ನೇನು ಬೇಕು? - ಹೀಗೆಂದೇ ಎಷ್ಟು ದಿನ ಸಮಾಧಾನ ಮಾಡಿಕೊಂಡಿರ್ಲಿ? ಹೆಂಡತಿ ಮೇಲೆ ಕಾಳಜಿ ಇರವುದು ಒಳ್ಳೆದೇ.. ಆದ್ರೆ ಅತಿಯಾದ್ರೆ ಸಿಹಿಯೂ ಮುಖಗಟ್ಟಿಸತ್ತೆ. ನಾನೂ ಇವನ‌ ಮನಸ್ಸಿಗೆ ಡಿಸ್ಟರ್ಬ್ ಆಗತ್ತೆ ಅಂತ ಭರತನಾಟ್ಯ ನಿಲ್ಲಿಸಿ ನಾಲ್ಕೈದು ತಿಂಗಳೇ ಆಯ್ತು. ಅವನಿಗೆ ಆಫೀಸ್ ಟೆನ್ಶನ್ ಆದ್ರೆ ನನ್ಮೇಲೆ ಕೂಗಾಡಿ ಫ್ರಸ್ಟ್ರೇಷನ್ ಹೊರಹಾಕ್ತಾನೆ. ಆದ್ರೆ ನಾನು? ನಾನೇನ್ ಮಾಡ್ಲಿ? ನಾನೇ ಅವನಿಗಿಂತ ಹೆಚ್ಚು ಫ್ರಸ್ಟ್ರೇಷನ್ ನಲ್ಲಿದೀನಿ. ಕೊರೊನಾ ಅಂತ ಇದ್ದ ಒಂದು ಕೆಲಸಕ್ಕೂ ಕಲ್ಲು ಬಿತ್ತು. ಅದೆಷ್ಟು ಈಸಿಯಾಗಿ ಟರ್ಮಿನೇಟ್ ಮಾಡಿಬಿಟ್ರು ನಮ್ಮನ್ನ... 😪  ಆ ಕಡೆ ಕೆಲಸವಿಲ್ಲ, ಈ ಕಡೆ ಮನೆಯಿಂದ ಹೊರಗೇ ಹೋಗುವ ಹಾಗೂ ಇಲ್ಲ. ನಾಲ್ಕು ಗೋಡೆಗಳ ನೋಡಿ ನೋಡಿ ಸಾಕಾಗಿದೆ... ಈ ಮನೆಯೊಳಗೇ ಇರುವಂತೆ ಮಾಡಿದ ಕೊರೊನಾದ ಬಂಧನಕ್ಕೆ ಯಾವಾಗ ಕೊನೆ? ವಾಯುವಿಹಾರಕ್ಕೆ ಅಂತ ಪಾರ್ಕಿಗಾದ್ರೂ ಹೋಗೋಣ ಅಂದ್ರೆ ಕೊರೊನಾಗೆ ಆಹಾರ ಆಗ್ಬಿಟ್ರೆ ಎಂಬ ಭಯ ! ದಿನಾ ಮನೆಗೆ ಫೋನ್ ಮಾಡಿ ಎಷ್ಟು ಅಂತ ಮಾತಾಡ್ಲಿ ? ಅದೆಲ್ಲದರ ಜೊತೆ ನನ್ನ ಫೇವರಿಟ್ ಹಾಬಿ ಅಂತ ಕುಣಿಯಲೂ ಆಗ್ತಿಲ್ಲ. ವಿದುಷಿ ನಿಹಾರಿಕಾ ಈಗ ಬರೀ ಬೇಸರದ ನಿಹಾರಿಕಾ ಆಗಿದಾಳೆ. ಒಂದ್ಸಲ ಗಟ್ಟಿಯಾಗಿ ಹಾಡು ಹಾಕಿ ಡ್ಯಾನ್ಸ್ ಮಾಡಬೇಕು ಅನಿಸತ್ತೆ. ಆದ್ರೆ ಅವತ್ತು ಸಂಜೆ ಭರತನಾಟ್ಯದ ಗೆಜ್ಜೆ ಸದ್ದು ಕೇಳಿ ಕ್ಷಿತಿಜ್ ಸಿಕ್ಕಾಪಟ್ಟೆ ಸಿಟ್ಟಾಗಿ ಕೆನ್ನೆಗೆ ಹೊಡೆದಿದ್ದು... ಓಹ್..." ನಿಹಾರಿಕಾಳ ಕೈ ಅಪ್ರಯತ್ನವಾಗಿ ಬಲಗೆನ್ನೆ ನೇವರಿಸಿತು.

                "ಪಾಪ ಅವನು.. ಐ ಆ್ಯಮ್ ಸಾರಿ ನಿಹಾರಿಕಾ. ಬಟ್ ಗೆಜ್ಜೆ ಸದ್ದು ಕೇಳಿದ್ರೆ ಯಾಕೋ ತುಂಬಾ ಸಿಟ್ಟು ಬರತ್ತೆ ಅಂತ ಅವತ್ತೊಂದು ದಿನ ಹೇಳಿ ಮಡಿಲಲ್ಲಿ ಮಲಗಿ  ಬಿಕ್ಕಿದ್ದ... ಆದ್ರೆ ನಾನಾದರೂ ಏನು ಮಾಡಲಿ? ಮನೆಯಲ್ಲೇ ಇದ್ದು ಇದ್ದು ತಲೆ ಚಿಟ್ಟುಹಿಡಿದಿದೆ. ಯಾವುದಕ್ಕೂ ಮನಸ್ಸಿಲ್ಲ. ನನ್ನ ಮನಸ್ಸೇ ಸರಿಯಿರದಿದ್ದರೆ ಕ್ಷಿತಿಜ್ ನ ಸಮಾಧಾನ ಮಾಡೋರು ಯಾರು? ಪಾಪಚ್ಚಿ ಅವನು ಜಾಸ್ತಿ ಟೆನ್ಶನ್ ತಡೆಯಲಾರ. ಪ್ರೀತಿ ಎಂಬುದು ಮನಕೆ ತಂಗಾಳಿ‌ಸೂಸುವ ಮರಗಳಾಗಬೇಕೇ ಹೊರತೂ‌ ಚುಚ್ಚುವ  ಪಾಪಾಸುಕಳ್ಳಿಯಾಗಬಾರದು... ಅವನ ಕಾರಣವಿಲ್ಲದ ಸಿಟ್ಟಿಗೆ ನನ್ನ ಅಭಿರುಚಿಯೊಂದು ಕಳೆದು ಹೋದರೆ ನನ್ನತನವನ್ನೇ ಕೊಂದುಕೊಂಡಂತೆ... ಹೀಗನಿಸಿದ್ದೇ ತಡ, ಪಟಪಟನೆ ಕೆಳಗಿಳಿದು ಹೋದಳು. ರೂಮಿಗೆ ಹೋಗಿ ಡೋರ್ ಲಾಕ್ ಮಾಡಿ, ತನ್ನ ಗೆಜ್ಜೆಯನ್ನೊಮ್ಮೆ ಪ್ರೀತಿಯಿಂದ ಮುಟ್ಟಿ, ಕಾಲಿಗೆ ಧರಿಸಿದಳು.
ರೂಮಿನೊಳಗಿಂದ ಆದಿತಾಳದಲ್ಲಿ
ಆನಂದ ನರ್ತನ ಗಣಪತಿಂ ಭಾವಯೇ... ಎಂದು ಹಾಡು ಕೇಳಿ ಬರುವಾಗ ಮಳೆ ನಿಂತು ಬಾನು ತಿಳಿಯಾಗಿತ್ತು !!

- R. R. B.


ಸೋಮವಾರ, ಜೂನ್ 29, 2020

ಮತ್ತೆ ಮನಕೆ ವಸಂತ...

                     ಚುಮು ಚುಮು ಚಳಿಯ ಮುಂಜಾನೆ. ಸೂರ್ಯದೇವನಿಗೆ ಹಾಸಿಗೆ ಬಿಟ್ಟೇಳಲು ಮನಸ್ಸಾಗದೇ ತನ್ನ ದೈನಂದಿನ ಕಾಯಕಕ್ಕೆ ಚಕ್ಕರ್ ಹಾಕಿ, ಮೋಡಗಳ ಹೊದಿಕೆಯೊಳಗೆ ಅಡಗಿದ್ದ. ರಾತ್ರಿ ಸುಳಿದ ಜಡಿಮಳೆಗೆ ಸಾಕ್ಷಿ ಎಂಬಂತೆ ಅಂಗಳದ ತುಂಬೆಲ್ಲ ಕೆಂಪು ನೀರು. ಎಲೆಗಳಿಂದ ತೊಟ್ಟಿಕ್ಕುವ ಸಿಹಿ ಹನಿಗಳು. ಇನ್ನೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ತಿಳಿಸಿದ ಕಾರ್ಮೋಡಗಳ ಸಾಲು... ಆರಾಧನಾ ಕೈಯಲ್ಲಿ ಬಿಸಿ ಬಿಸಿ ಕಾಫಿಯ ಕಪ್ ಹಿಡಿದು ಕಿಟಕಿಯಾಚೆ ನೋಡುತ್ತ ನಿಂತಿದ್ದಳು. ಹೊರಗಿನ ಆಹ್ಲಾದಕರ ವಾತಾವರಣ ಮನಸ್ಸಿಗೆ ಹಿತವೆನಿಸಿತ್ತು. ವಾಸ್ತವದ ಸವಿ ಸಮಯ ಹಳೆಯ ಕಹಿ ನೆನಪುಗಳನ್ನು ಮರೆಸುವಲ್ಲಿ ಯಶಸ್ವಿಯಾಗಿತ್ತು !!

             ಗಂಟೆ ಅದಾಗಲೇ ಎಂಟೂವರೆ.  ಬಿರಬಿರನೆ ರೆಡಿಯಾಗಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ "ಅಮ್ಮಾ, ಕೆಲ್ಸ ಜಾಸ್ತಿ ಇದೆ.  ಬರೋವಾಗ ಲೇಟಾಗ್ಬೋದು... " ಅಂತ ಉಸುರಿ ಮನೆಯಿಂದ ಹೊರಟಳು. ಆಫೀಸು ತಲುಪುವಾಗಲೇ ಗಂಟೆ ಹತ್ತರ ಗಡಿ ದಾಟಿತ್ತು. ಬೆಳಿಗ್ಗೆ ಬೆಳಿಗ್ಗೆ  ಬೈಸಿಕೊಳ್ಳಬೇಕೇನೋ ಎಂದು ಗಡಿಬಿಡಿಯಿಂದ ಒಳ ಹೋಗಿ ಕುಳಿತಳು. ಪುಣ್ಯಕ್ಕೆ ಯಾರೂ ಅವಳನ್ನು ಗಮನಿಸದಾಗ ನಿರಾಳವೆನಿಸಿತು. ತಿಂಗಳ ಕೊನೆ ಬಂದಾಗೆಲ್ಲ ರಾಶಿ ರಾಶಿ ಫೈಲುಗಳು ಆರಾಧನಾಳ ಟೇಬಲ್ ಮೇಲೆ ತಮ್ಮ ಇರುವಿಕೆ ಪ್ರದರ್ಶಿಸುತ್ತಿದ್ದವು. ಅದರೆಡೆಗೆ ಒಮ್ಮೆ ನಿರ್ಭಾವುಕ ನೋಟ ಹರಿಸಿ ಪಟಪಟನೆ ಕೆಲಸ ಮಾಡತೊಡಗಿದಳು. ಒಂದೊಂದೇ ಫೈಲು ಮುಗಿಸಿ ಪಕ್ಕಕ್ಕಿಡುವಾಗ ಒಂಥರಾ ಸಮಾಧಾನ - ದೇವಸ್ಥಾನದ ಒಂದೊಂದೇ ಮೆಟ್ಟಿಲು ಹತ್ತಿದಂತೆ, ಬದುಕಿನ ಒಂದೊಂದೇ ಪುಟ್ಟ ಕಷ್ಟವನ್ನು ದಾಟಿ ಮುಂದೆ ಸಾಗಿದಂತೆ... ಕೆಲಸದ ಒತ್ತಡದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ ಅವಳಿಗೆ. ಮಧ್ಯಾಹ್ನ ಎಲ್ಲ ಊಟಕ್ಕೆ ಹೊರಟಾಗ ಥಟ್ಟನೆ ಕಂಪ್ಯೂಟರ್ ಪರದೆಯ ಮೇಲೆ ಸಮಯ ನೋಡಿದಳು. ಗಂಟೆ ಒಂದೂವರೆ. ಗಡಿಬಿಡಿಯಲ್ಲಿ ಟಿಫಿನ್ ಬಾಕ್ಸ್ ಬಿಟ್ಟು ಬಂದಿದ್ದು ಆಗಲೇ ನೆನಪಾಗಿದ್ದು ಅವಳಿಗೆ. "ಛೇ.." ಅಂತ ತಲೆಕೊಡವಿಕೊಂಡಳು. ಅಷ್ಟರಲ್ಲಿ ಭುವನ್ ಅವಳ ಪಕ್ಕವೇ ಬಂದು ನಿಂತಿದ್ದ. "ಊಟ ತರೋದು ಮರ್ತೋಯ್ತಾ? ನಾನು ಕ್ಯಾಂಟೀನ್ ಗೆ ಹೋಗ್ತಾ ಇದೀನಿ. ನಿಮಗೇನೂ ಅಭ್ಯಂತರ ಇಲ್ಲ ಅಂದ್ರೆ ನನ್ ಜೊತೆ ಬನ್ನಿ... ಒಟ್ಟಿಗೇ ಊಟ ಮಾಡಿ ಬರೋಣ ಆರಾಧನಾ ಅವ್ರೆ.." ಎಂದು ಮುಗುಳ್ನಕ್ಕ. ಆರಾಧನಾ "ಹಾ.. ಬರ್ತೀನಿ.‌ ನಡೀರಿ..." ಎಂದು ಭುವನ್ ಜೊತೆ ಕ್ಯಾಂಟೀನ್ ಕಡೆ ಹೆಜ್ಜೆ ಹಾಕಿದಳು. ಅಷ್ಟಾಗಿ ಯಾರ ಜೊತೆಯೂ ಬೆರೆಯದ ಆರಾಧನಾಗೆ ಭುವನ್ ಅಂದ್ರೆ ಇಷ್ಟ. ಎಲ್ಲರೊಡನೆ ಬೆರೆಯುತ್ತ, ಯಾವಾಗಲೂ ನಗೆ‌ಚಟಾಕಿ ಸಿಡಿಸುತ್ತ ಖುಷಿ ಖುಷಿಯಾಗಿರುವ ಹುಡುಗ. ಒಂಥರಾ ಪಾಸಿಟಿವ್ ವೈಬ್ ಅವನ ಜೊತೆ ಇದ್ರೆ ಅಂತ ಅನಿಸುತ್ತಿತ್ತು. 

               ಇಬ್ಬರೂ ಕ್ಯಾಂಟೀನ್ ತಲುಪಿ ಒಂದು‌ ಕಡೆ ಕುಳಿತರು. ದಾರಿಯುದ್ದಕ್ಕೂ ಸುಮ್ಮನೇ ಇದ್ದ ಆರಾಧನಾಳನ್ನು ಮಾತನಾಡಿಸುವ ತವಕದಲ್ಲಿದ್ದ ಭುವನ್. "ಅಲ್ಲಾ ಆರಾಧನಾ ಅವ್ರೇ, ನೋಡಿ ನನ್ನ ಹೆಸರು ಭುವನ್. ಅದನ್ನು ಬೇಕಿದ್ರೆ ಇನ್ನೂ ಶಾರ್ಟ್ ಅಂಡ್ ಸ್ವೀಟಾಗಿ 'ಭುವು' ಅಂತ ಕರೀತಾರೆ. ನಿಮ್ಮ ಹೆಸ್ರೇ ಮಾರುದ್ದ ಇದೆ. ಅಲ್ದೇ ಅದನ್ನ ಶಾರ್ಟ್ ಮಾಡಿ 'ಆರು' ಅಂತ ಕರದ್ರೆ ನೀವು ಹೊಡದೇ ಬಿಡ್ತೀರೇನೋ... ಮತ್ತೆ ಏನಂತ ಕರೀಬೇಕು ನಿಮ್ಮನ್ನ? " ಎಂದು ಆರಾಧನಾಳ ಮುಖ ನೋಡುತ್ತ ಕುಳಿತ. ಈ ಪ್ರಶ್ನೆಯನ್ನು ನಿರೀಕ್ಷಿಸದ ಆರಾಧನಾ ಏನು ಹೇಳಬೇಕೆಂದು ತೋಚದೇ ಸುಮ್ಮನೆ ನಕ್ಕಳು. ಹಾಗೇ ಊಟ ಮಾಡುತ್ತ ಭುವನ್ ಏನೇನೋ ಕತೆ ಹೇಳಿ ನಗಿಸುತ್ತಿದ್ದ. ಆರಾಧನಾ ಮನ ಬಿಚ್ಚಿ ನಕ್ಕಿದ್ದಳು. ವಾಪಸ್ ಹೋಗುವಾಗ "ತುಂಬಾ ಥ್ಯಾಂಕ್ಸ್ ಭುವನ್ ಅವ್ರೇ.. ತುಂಬ ದಿನಗಳ ಬಳಿಕ ನಿಮ್ಮಿಂದಾಗಿ  ಖುಷಿಯಲ್ಲಿ ನಗುವಂತಾಯ್ತು." ಎಂದಳು. ಭುವನ್ ಆಶ್ಚರ್ಯದಿಂದ "ವಾಟ್ ? ನೀವು ನಗದೇ ತುಂಬ ದಿನ ಆಗಿತ್ತಾ? ಯಾಕೆ?" ಎಂದು ಕೇಳಿದ. ಆರಾಧನಾಗೆ ತಾನು ಏನು ಹೇಳಿದೆ ಎಂಬುದರ ಅರಿವಾಗಿ ನಾಲಿಗೆ ಕಚ್ಚಿ, "ಏನಿಲ್ಲ..‌.‌ಸುಮ್ನೆ ಏನೋ ಅಂದೆ..." ಅಂತ ಹೇಳಿ ತನ್ನ ಡೆಸ್ಕಿನತ್ತ ನಡೆದಳು. ಮತ್ತದೇ ಕೆಲಸದ ಗಡಿಬಿಡಿಯಲ್ಲಿ ಮುಳುಗಿದಳು. ಅವತ್ತಿನ ಎಲ್ಲ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವಾಗ ನೆಮ್ಮದಿ ಎನಿಸಿತ್ತು.

                   ದಿನಗಳು ಕ್ಷಣಗಳಂತೆ ಉರುಳುತ್ತಿದ್ದವು. ಆರಾಧನಾಳಿಗೆ ಪದೇ ಪದೇ ಕಾಡುವ ಹಳೆಯ ನೆನಪುಗಳು ತಮಗೆ ತಾವೇ ರಜೆ ಘೋಷಿಸಿಕೊಂಡಿದ್ದವು. ಈ ಮಧ್ಯೆ ಭುವನ್ ಇನ್ನಷ್ಟು ಹತ್ತಿರವಾಗಿದ್ದ. ಅವಳಲ್ಲಾದ ಬದಲಾವಣೆ ಅಪ್ಪ - ಅಮ್ಮನಿಗೂ ಸಂತಸ ನೀಡಿತ್ತು. "ಹೇಗಾದರೂ ಮಗಳು ಹಳೆಯ ಸಾಲು ಸಾಲು ಕಹಿನೆನಪುಗಳನ್ನು ಮರೆತು, ಹೊಸ ಜೀವನ ಶುರು ಮಾಡಲಿ" ಎಂಬ ಬಯಕೆ ಅವರದು. ಈ ನಡುವೆ ಭುವನ್ ಗೂ ಆತನಲ್ಲಾದ ಬದಲಾವಣೆಗಳು ಅರಿವಿಗೆ ಬಂದಿತ್ತು. ಹೇಳದೇ ಕೇಳದೇ, ಸಣ್ಣ ಗ್ಯಾಪಲ್ಲಿ ಹುಟ್ಟಿಕೊಂಡ ನವಿರಾದ ಪ್ರೀತಿಗೆ, ಅದರ ರೀತಿಗೆ ಆಶ್ಚರ್ಯವೂ ಆಗಿತ್ತು. "ಬೇಗ ಮದುವೆ ಮಾಡ್ಕೊಳೋ.. ಆಮೇಲೆ ಹುಡುಗಿ ಸಿಗಲ್ಲ.." ಅಂತ ಮನೆಯಲ್ಲಿ ಹೇಳಿದಾಗೆಲ್ಲ ನಯವಾಗಿ ಮುಂದೂಡುತ್ತ ಬಂದಿದ್ದ. ಎಷ್ಟೇ ಚಂದದ ಹುಡುಗಿಯರೂ ಇಷ್ಟವಾಗದ ಅವನಿಗೆ, ತನ್ನ ಪಾಡಿಗೆ ತಾನಿರುತ್ತಿದ್ದ ಆರಾಧನಾ ತುಂಬ ಹಿಡಿಸಿದ್ದಳು. ಅವಳ ಅಚ್ಚುಕಟ್ಟುತನ, ಸೌಮ್ಯ ಸ್ವಭಾವ, ಮುತ್ತು ಪೋಣಿಸಿದಂತಹ ಮಾತು..‌ಎಲ್ಲವೂ ಇಷ್ಟ ಅವನಿಗೆ. ಮನೆಯಲ್ಲಿ ವಿಷಯ ತಿಳಿಸಿ, ಒಪ್ಪಿಗೆ ಪಡೆದೂ ಆಗಿತ್ತು. ಆದರೆ ಆರಾಧನಾಳಿಗೆ ಹೇಳಲು ಭಯ... ಹೇಗೆ ಹೇಳಬೇಕೆಂದು ತಳಮಳ. ಹೇಗಾದರೂ ನಾಳೆ ಮನಸ್ಸಿನಲ್ಲಿದ್ದದ್ದೆಲ್ಲ ಹೇಳಿಬಿಡಬೇಕೆಂದು ನಿರ್ಧಾರ ಮಾಡಿ ನಿರಾಳನಾಗಿದ್ದ.

               ಅಂದು ಮುಂಜಾನೆ ಭಾಸ್ಕರ ಮೋಡದ ಮರೆಯಿಂದ ತುಸು ತುಸುವೇ ಇಣುಕಿ ತನ್ನ ಹಾಜರಿ ಹಾಕಿದ್ದ. ಆರಾಧನಾ ಖುಷಿಯಲ್ಲಿ ರೆಡಿಯಾಗಿ ಆಫೀಸಿಗೆ ಹೋದಳು. ಈ ನಡುವೆ ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಿತ್ತು. ಭುವನ್ ಜೊತೆಗಿನ ಒಡನಾಟ ಹೊಸ ಚೈತನ್ಯ ತಂದಿತ್ತು. "ಇವತ್ತು ಮಧ್ಯಾಹ್ನ ನನ್ ಜೊತೆನೇ ಊಟ ಮಾಡ್ಬೇಕು ಪ್ಲೀಸ್.." ಅಂತ ಭುವನ್ ಬೇಡಿಕೆ ಇಟ್ಟಿದ್ದ. "ಸರಿ" ಎಂದು ಒಪ್ಪಿದ್ದಳು. ಕೆಲಸದ ಮಧ್ಯೆ ಅವಳಿಗದು ಮರೆತೇ ಹೋಗಿತ್ತು‌ ಸರಿಯಾಗಿ ಒಂದೂವರೆಗೆ ಭುವನ್ ಅವಳ ಡೆಸ್ಕ್ ಬಳಿ ಬಂದು ನಿಂತಾಗಲೇ ನೆನಪಾಗಿದ್ದು. "ಓಹ್.. ಸಾರಿ ಮರ್ತೋಗಿತ್ತು. ಒಂದೇ ನಿಮಿಷ.." ಎಂದು ಪಟಪಟನೆ ಸಿಸ್ಟಂ ಲಾಗೌಟ್ ಮಾಡಿ ಅವನೊಂದಿಗೆ ಹೆಜ್ಜೆ ಹಾಕಿದಳು. ಊಟ ಮಾಡುವಾಗ ಭುವನ್ ಕಷ್ಟಪಟ್ಟು ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದರಿತ ಆರಾಧನಾ "ಹೇಳಿ.. ಏನೋ ಹೇಳ್ಬೇಕಂದ್ಕೊಂಡ್ರಾ?" ಎಂದಳು. ಭುವನ್ ಗಾಢವಾಗಿ ಒಮ್ಮೆ ಉಸಿರೆಳೆದುಕೊಂಡು ಹೇಳಲು ಶುರು ಮಾಡಿದ. " ಅದು ಆರಾಧನಾ.. ಸುತ್ತಿ ಬಳಸಿ ಮಾತಾಡಕ್ಕೆ ಬರಲ್ಲ ನಂಗೆ. ನೇರವಾಗಿ ವಿಷಯಕ್ಕೇ ಬರ್ತೀನಿ. ತಪ್ಪು ತಿಳ್ಕೋಬೇಡಿ... ನೀವಂದ್ರೆ ನಂಗೆ ತುಂಬಾ ಇಷ್ಟ. ಮನೆಯಲ್ಲಿ ಮದುವೆಯಾಗು ಅಂತ ಹತ್ತಾರು ಹುಡುಗಿಯರ ಫೋಟೋ ತೋರಿಸಿದಾಗಲೂ ಯಾರೂ ಹಿಡಿಸಿರಲಿಲ್ಲ.‌ ಆದ್ರೆ ನೀವು..‌... ಗೊತ್ತಾಗದಂತೆ ನನ್ನ ಮನದಾಳದಲ್ಲಿ ಪ್ರೀತಿಯ ಬೀಜ ಬಿತ್ತಿ, ಇವಾಗ ಅದು ಪುಟ್ಟ ಸಸಿಯಾಗಿದೆ. ಮುದ್ದಿಸಿ  ಅದಕ್ಕೆ ನೀರೆರೆಯುತ್ತೀರೋ, ಅಥವಾ ಚಿವುಟಿ ಹಾಕ್ತೀರೋ ಗೊತ್ತಿಲ್ಲ. ಆದರೆ ನನ್ನ ಭಾವನೆಗಳನ್ನು ಹೇಳದೇ ಮುಚ್ಚಿಡುವುದು ಯಾಕೋ ತಪ್ಪು ಅಂತ ಅನಿಸ್ತು. ಅದ್ಕೆ ಎಲ್ಲ ಹೇಳ್ದೆ..‌. ನೀವು ಏನೇ ತೀರ್ಮಾನ ಮಾಡಿದರೂ ನಾನದಕ್ಕೆ ಬದ್ಧ... " ಎಂದು ಸುಮ್ಮನಾದ. ಆರಾಧನಾಳಿಗೆ ಸಡನ್ನಾಗಿ ಏನು ಉತ್ತರಿಸಬೇಕೋ‌ ಎಂದು ತಿಳಿಯಲಿಲ್ಲ. ಆದರೆ ಭುವನ್ ಅಂದ್ರೆ ಇಷ್ಟ ಎಂದು ಅವಳ ಒಳಮನ ಹೇಳುತ್ತಿತ್ತು. "ಭುವನ್ ನಿಮ್ಮ ಮನಸ್ಸಲ್ಲಿರೋದನ್ನ ನೀವು ಹೇಳಿದ್ರಿ. ಆದ್ರೆ ನಾನು? ನನ್ನ ಹಳೆಯ ಜೀವನದ ತಿರುವುಗಳ‌ ಬಗ್ಗೆ ನಿಮಗೇನು ಗೊತ್ತು?.... ಮುಂಚೆ ನಾನು ಅನಿಕೇತ್‌ ಮದುವೆಯಾಗಿದ್ದು, ಅವನ ಜೊತೆ ಕಳೆದ ಸಿಹಿಕ್ಷಣಗಳು, ಕೊನೆಗೆ ಆತ ಸಡನ್ನಾಗಿ ನನ್ನೊಬ್ಬಳನ್ನೇ‌ ಬಿಟ್ಟು ಬಾರದ ಲೋಕಕ್ಕೆ..." ಮುಂದೆ ಹೇಳಲಾಗದೇ ಆರಾಧನಾಳ ಕಣ್ತುಂಬಿತು. "ಅಯ್ಯೋ.. ‌ಅಳ್ಬೇಡಿ.. ಆಗಿದ್ದೆಲ್ಲಾ ಆಗಿಹೋಯ್ತು. ಮತ್ತೆ ಅದನ್ನೇ ನೆನೆಸಿಕೊಂಡು ಕೊರಗುವುದರಲ್ಲಿ ಯಾವ ಅರ್ಥನೂ ಇಲ್ಲ. ಇವತ್ತು, ಈ ಕ್ಷಣ ನಾವಿಲ್ಲಿ ಕ್ಯಾಂಟೀನ್ ನಲ್ಲಿ ಕುಳಿತು ಮಾತಾಡ್ತಿದೀವಿ ಅಂದ್ರೆ ಇದು ಮಾತ್ರ ಸತ್ಯ. ಅದರ ಹಿಂದಿನದು, ಮುಂದಿನದೆಲ್ಲ ನಮ್ಮ ಕೈಯಲ್ಲಿಲ್ಲ. ಅದ್ಕೇ ವರ್ತಮಾನವನ್ನು ದೇವರು ಕೊಟ್ಟ 'ಪ್ರೆಸೆಂಟ್' ಅನ್ನೋದು ಅಲ್ವಾ... ನೋಡಿ ನಿಧಾನವಾಗಿ ಯೋಚನೆ ಮಾಡಿ.. ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇರ್ತೀನಿ..." ಎಂದು ಮಾತು ಮುಗಿಸಿದ. 
"ಮರೆತೆ ಹೋದೆನು
ಹೊರಟ ಕಾರಣ
ನಿನ್ನಯ ಮಿಂಚಿನ ಗಾಳಿಯಲಿ..."  ಎಂದು ಕ್ಯಾಂಟೀನ್ ನಲ್ಲಿ ಹಾಕಿದ್ದ ಹಾಡು ತನಗಾಗಿಯೇ ಎಂದು ಅವಳಿಗೆ ಅನಿಸಿತು.

- R. R. B.

ಶನಿವಾರ, ಜೂನ್ 13, 2020

ಊರ ನಡುವಣ ಅರಳೀಮರ



               "ಅನು...‌ನನ್ನ ಲಂಚ್ ಬಾಕ್ಸ್ ಎಲ್ಲೆ? ಬೇಗ ತಂದ್ಕೊಡು, ಟೈಮಾಯ್ತು" ಎಂದು ಸಿಡುಕುತ್ತ ಕೈ ಗಡಿಯಾರ ನೋಡಿಕೊಂಡ ವೈಭವ್.
"ಬಂದೆ ರೀ... ತಗೊಳ್ಳಿ" ಎಂದು, ಊಟದ ಡಬ್ಬಿಯನ್ನು ಗಂಡನ ಕೈಗಿಟ್ಟು ಮುಗುಳ್ನಕ್ಕಳು ಅನಘಾ.
ವೈಭವ್ ಅದಕ್ಕೆ ಪ್ರತಿಯಾಗಿ ನಗದೇ ಬಿರಬಿರನೆ ಹೊರಟಾಗ ಅನಘಾಳ ಕಣ್ಣಂಚಲ್ಲಿ ನೀರು ಜಿನುಗಿತ್ತು. ಉಕ್ಕಿಬರುತ್ತಿದ್ದ ಅಳುವನ್ನು ನಿಯಂತ್ರಿಸುತ್ತ  ಸೋಫಾದ ಮೇಲೆ ಕುಸಿದಳು. ಮನಸ್ಸು ಹತೋಟಿಗೆ ಸಿಗದ ಗಾಳಿಪಟದಂತಾಗಿತ್ತು. "ವೈಭವ್ ಗೆ ಯಾಕಿಷ್ಟು ಕೋಪ ನನ್ನ ಮೇಲೆ ?..." ಅಂತ ಜೋರಾಗಿಯೇ ಕೇಳಿಕೊಂಡಳು. ಆಲೋಚನೆಗಳ ನಾಗಾಲೋಟ ಅದಾಗಲೇ ಆರಂಭವಾಗಿತ್ತು....

                ಬೆಂಗಳೂರಿಗೆ ಬಂದು ಎರಡು ವರ್ಷಗಳಾಗಿದ್ದಷ್ಟೇ. ಆದರೆ ವೈಭವ್ ನಲ್ಲಿ ಆಗಿದ್ದ ಪ್ರೀತಿ, ಕಾಳಜಿ ಈಗ ಇಲ್ಲ. ಕೆಲಸದ ಒತ್ತಡದಲ್ಲಿ ವೈಯಕ್ತಿಕ ಜೀವನವನ್ನೇ ಮರೆತರೆ ಹೇಗೆ? ನಾನಾದರೂ ಏನು ಮಾಡಲಿ? ಇಡೀ ದಿನ ಈ ಪುಟ್ಟ ಮನೆಯಲ್ಲಿದ್ದು ಬೋರಾಗತ್ತೆ. ಮೊದಲು ರವಿವಾರವಾದರೂ ಎಲ್ಲಾದರೂ ಸುತ್ತಾಡಿಕೊಂಡು ಬರುತ್ತಿದ್ದೆವು. ಈಗೀಗ ಎರಡು ತಿಂಗಳಿಂದ ಅದೂ ಇಲ್ಲ. ಕೇಳಿದರೆ ಡೆಡ್ಲೈನ್, ವರ್ಕ್ ಲೋಡ್ ಅದು‌ ಇದು ಅಂತ ಮನೆಯಲ್ಲೇ ಲ್ಯಾಪಟಾಪ್ ಕುಟ್ಟುತ್ತಿರುತ್ತಾರೆ. ನಾನೂ ಎಷ್ಟು ಹೊತ್ತು ಅಂತ ಮೊಬೈಲ್ ನೋಡ್ಲಿ? ಈಗೀಗ ಅದೂ ಬೇಜಾರು. ಮನೆಕೆಲಸ ಬಿಟ್ಟು ಬೇರೆನೂ ಕೆಲಸ ಇಲ್ಲ. ಇದ್ದದ್ದೊಂದು ವೀಣೆ ಊರಲ್ಲೇ ಉಳಿದುಕೊಂಡುಬಿಟ್ಟಿದೆ. ಈ ಸಲ ಹೋದಾಗ ತರಬೇಕು... ಹಾಗೋ ಹೀಗೋ ಪಕ್ಕದ ಮನೆಯವರನ್ನ ಫ್ರೆಂಡ್ ಮಾಡ್ಕೊಂಡೆ. ಆದ್ರೆ ಅವರ್ಯಾರೂ ಜಾಸ್ತಿ ಮಾತಾಡುವವರಲ್ಲ... ಸುಮಾರು ದಿನ ಒಬ್ಬಳೇ ಪಾರ್ಕಿಗೆ ಹೋಗಿ ಬರೋಕೂ ಟ್ರೈ ಮಾಡಿದೆ. ಈಗೀಗ ಅಲ್ಲಿಗೆ ಹೋಗಲೂ ಮನಸಿಲ್ಲ. ಇವರು ನೋಡಿದ್ರೆ ಪ್ರೀತಿಯಿಂದ ಮಾತಾಡೋದನ್ನೇ ಮರೆತ ಹಾಗಿದೆ. ಸಣ್ಣ ಪುಟ್ಟ ವಿಷಯಕ್ಕೆಲ್ಲ ಕೂಗಾಡಿ ಆಫೀಸಿನ ಫ್ರಸ್ಟ್ರೇಷನ್ ಎಲ್ಲ ನನ್ನ ಮೇಲೆ ತೋರಿಸ್ತಾರೆ. ಹೆಂಡ್ತಿ ಮೇಲೆ‌ ಒಂಚೂರೂ ಕಾಳಜಿ ಇಲ್ಲ. ನಂಗೂ ಸಾಕಾಗಿ ಹೋಗಿದೆ. ಒಂದ್ಸಲ ಊರಿಗೆ ಹೋಗಿ ಅಮ್ಮನ ಹತ್ರ ಎಲ್ಲ ಹೇಳ್ಕೋಬೇಕು...ಯೋಚನೆಗಳು ಒಂದು ದಡ ತಲುಪಿದಾಗ ಅನಘಾಳಿಗೆ ತುಸು ಸಮಾಧಾನವಾಯ್ತು.

                ಮನೆಕೆಲಸ ಎಲ್ಲ‌ ಮುಗಿಸಿ ಸಂಜೆ ವೈಭವ್ ಗೆ ವಿಷಯ ಹೇಳಬೇಕೆಂದು ಕಾಯುತ್ತಿದ್ದಳು. ವೈಭವ್ ಬಂದಾಗ ರಾತ್ರಿ ಒಂಭತ್ತೂವರೆ. ಅನಘಾ ಊಟ ಬಡಿಸಲು ಹೋದಳು. "ನಂದಾಗ್ಲೇ ಊಟ ಆಗಿದೆ. ನೀನು ಊಟ ಮಾಡಿ ಮಲ್ಕೋ" ಎಂದ ವೈಭವ್. "ಅಲ್ಲ ರೀ ಅದು..." ಅಂತ ಏನೋ ಹೇಳಲಿದ್ದಳು ಅನಘಾ. ಅವಳ ಮಾತನ್ನು ಮೊಟಕುಗೊಳಿಸಿ "ನಾನು ತುಂಬಾ ಟೈರಡ್ ಆಗಿದೀನಿ. ನಿನ್ನ ಹರಿಕತೆ ಎಲ್ಲ ಇವಾಗ ಬೇಡ" ಎಂದು ವೈಭವ್ ರೂಮಿಗೆ ಹೋದ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿದ್ದರೂ ಅನಘಾ ಊಟ ಮಾಡಲಿಲ್ಲ.‌ ಎಲ್ಲವನ್ನು ಅಲ್ಲೇ ಮುಚ್ಚಿಟ್ಟು, ಸ್ವಲ ನೀರು ಕುಡಿದು, ನಿಟ್ಟುಸಿರು ಬಿಡುತ್ತ ರೂಮಿನ ಕಡೆ ನಡೆದಳು. ಮಲಗಿ ಸುಮಾರು ಹೊತ್ತಾದರೂ ನಿದ್ದೆ ಕೈಗೆಟುಕದ ನಕ್ಷತ್ರವಾಗಿತ್ತು. ಮನಸ್ಸು ಗತಕಾಲಕ್ಕೆ ವಾಲಿತ್ತು. ನೆನಪುಗಳ ಸರಮಾಲೆಯಿಂದ ಒಂದೊಂದೇ ನೆನಪುಗಳನ್ನು ಬಿಡಿಸುತ್ತ ಹೋದಳು ಅನಘಾ...

                ಅದೊಂದು ಸುಂದರವಾದ ಹಳ್ಳಿ. ಅಪ್ಪ - ಅಮ್ಮನ ಮುದ್ದು ಮಗಳು ಅನಘಾ. ಚಿಕ್ಕಂದಿನಿಂದ ಓದುವುದರಲ್ಲಿ‌ ಜಾಣೆ. ವೀಣೆ ತರಗತಿಗೆ ಸೇರಿದಾಗಿನಿಂದ ವೀಣೆ ನುಡಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಸುಮಧುರ ಕಂಠವೂ ಇದ್ದದ್ದು ಅವಳ ಇನ್ನೊಂದು ಅದೃಷ್ಟ. ವೈಭವ್ ಒಂದನೇ ಕ್ಲಾಸಿಂದ ಅವಳ ಕ್ಲಾಸ ಮೇಟ್. ಅದೇ ಊರಿನವ. ಅನಘಾಳ ತಂದೆಯ ಗೆಳೆಯನ ಮಗ. ಅವನೂ ಹಾಡುತ್ತಿದ್ದರಿಂದ  ಇವರಿಬ್ಬರ ನಡುವೆ ಬಹುಬೇಗ ಗೆಳೆತನ ಶುರುವಾಗಿತ್ತು. ಶಾಲೆ ಮುಗಿದ ತಕ್ಷಣ ಊರ ನಡುವಿನ ಅರಳೀಮರದ ಚಡಿಯ ಮೇಲೆ ಕುಳಿತು ಹರಟೆ ಹೊಡೆದೇ ಮನೆಗೆ ಹೋಗುವ ವಾಡಿಕೆ. ಶಾಲೆ ಮುಗಿದು ಹೈಸ್ಕೂಲ್, ಕಾಲೇಜಿಗೆ ಹೋದಾಗಲೂ ಅದೇ ಸ್ನೇಹ, ಅದೇ ಮುಗಿಯದ ಮಾತುಕತೆ, ಅದೇ ಅರಳೀಮರದ ಚಡಿ... ಡಿಗ್ರಿ ಓದುವಷ್ಟರಲ್ಲಿ ನಿಧಾನವಾಗಿ ಸ್ನೇಹ ಪ್ರೇಮವಾಗಿ ಪ್ರಮೋಷನ್ ಗಳಿಸಿತ್ತು. ಕಾಲೇಜಿನ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಯುಗಳ ಗೀತೆ ಹಾಡಿದರೆ ಸಾಕು, ಇಡೀ ಕಾಲೇಜೇ ಹುಚ್ಚೆದ್ದು ಕುಣಿಯುತ್ತಿತ್ತು.  ವೈಭವ್ ಎಂ.ಬಿ.ಎ. ಮಾಡಲು ಬೆಂಗಳೂರಿಗೆ ಹೋದಾಗ ಅನಘಾ ಚಡಪಡಿಸಿದ್ದಳು. ಆಗಲೂ ಬೇಜಾರಾದಾಗ ಅದೇ ಅರಳೀಮರದ ಕಟ್ಟೆಯ ಮೇಲೆ ಕುಳಿತು ಸವಿ ಕ್ಷಣಗಳ ಮೆಲುಕುಹಾಕಿ ಹಗುರಾಗುತ್ತಿದ್ದಳು. ವೈಭವ್ ಎಂ.ಬಿ.ಎ. ಮುಗಿಸಿ, ಒಂದು ಕೆಲಸ ಹಿಡಿದು ಊರಿಗೆ ಬಂದಾಗ ಎಲ್ಲರಿಗಿಂತ ಹೆಚ್ಚು ಅನಘಾ ಖುಷಿ ಪಟ್ಟಿದ್ದಳು. ಇವರಿಬ್ಬರ ಭಾವನೆ ಅರಿತವರಂತೆ, ಮನೆಯಲ್ಲಿ ಮದುವೆಗೆ ಸಮ್ಮತಿ ಸೂಚಿಸಿ ಆಗಿತ್ತು. ಜೋಡಿ ಹಕ್ಕಿಗಳು ಮದುವೆ ಎಂಬ ಸಂಭ್ರಮ ಮುಗಿಸಿ, ಗೂಡಿಂದ ಹಾರಿ ಬೆಂದಕಾಳೂರೆಂಬ ಮಹಾನಗರ ಸೇರಿದ್ದರು. ಮೊದ ಮೊದಲು ಖುಷಿಯಾಗೇ ಇದ್ದರೂ, ವೈಭವ್ ಗೆ ಪ್ರಮೋಷನ್ ಆದಾಗಿನಿಂದ ಕೆಲಸದ ಹೊರೆ ಜಾಸ್ತಿಯಾಗಿತ್ತು. ಅನಘಾಳ ಮೇಲಿನ ಪ್ರೀತಿ ಕಡಿಮೆಯಾಯ್ತು ಎನ್ನುವುದಕ್ಕಿಂತ ಅವಳತ್ತ ಗಮನ ಕೊಡಲಾಗಲಿಲ್ಲ ಎಂದರೆ ಹೆಚ್ಚು ಸೂಕ್ತ...
ಹಳೆಯ ಘಟನೆಗಳೆಲ್ಲ ನೆನಪಾದಾಗ ನಿಟ್ಟುಸಿರೊಂದು ಹೊರಬಂತು. ಹಾಗೇ ತವರು ಮನೆಗೆ ಹೋಗದೇ ಆರು ತಿಂಗಳೇ ಕಳೆದಿದೆ ಎಂದು ನೆನಪಾಗಿ, ಊರಿಗೆ ಹೋಗುವ ಬಯಕೆ ಹೆಚ್ಚಾಯಿತು. ಊರು ಎಂದಕೂಡಲೇ ಮತ್ತೆ ನೆನಪುಗಳ ಬಂಡಿ...

               ‌‌ತಾನಿದ್ದ ಹಳೆಯ ಕಾಲದ ತೊಟ್ಟಿ ಮನೆ, ಅಂಗಳದಲ್ಲಿ ಸಾಲು ಸಾಲು ಹೂವಿನ ಗಿಡ, ಹಿತ್ತಲ ಬದಿ ಅಮ್ಮ ನೆಟ್ಟ ಮಲ್ಲಿಗೆ ಗಿಡ, ಮನೆಯ ಕಾಂಪೌಂಡಿನ ಬಳಿಯ ಪಾರಿಜಾತ, ಸ್ವಲ್ಪ ದೂರದವರೆಗೆ ಮಣ್ಣಿನ ಕಚ್ಚಾ ರಸ್ತೆ, ಊರ ಮಧ್ಯದ ಆ ಅರಳೀಮರ...ಓಹ್ ಅದೊಂದು ಅಚ್ಚರಿ... ಸಾವಿರ ಕತೆಗಳ ತನ್ನೊಳಗೆ ಬಚ್ಚಿಟ್ಟು, ತಂಪಾದ ಗಾಳಿ ನೀಡುವ ಅದ್ಭುತ !! ಆ ಎಲೆಗಳನ್ನು ಎಷ್ಟು ಚಂದವಾಗಿ ಜೋಪಾನ ಮಾಡುತ್ತಿದ್ದೆ ನಾನು... ಎಲೆಯ ಮೇಲ್ಪದರವೆಲ್ಲಾ ಕಿತ್ತುಹೋಗಿ ಬಲೆಯಂತಾದಾಗ ಎಷ್ಟು ಚಂದ ಕಾಣುತ್ತಿತ್ತು ಅದು... ನನ್ನ ಚಿತ್ರಕಲೆ ಪಟ್ಟಿಯಲ್ಲಿ ಯಾವತ್ತೂ ಒಂದು ಪೇಜು ಆ ಎಲೆಗೇ ಮೀಸಲಿತ್ತು... ವೈಭವ್ ಕೂಡ ನನ್ನ ಹುಚ್ಚಾಟ ನೋಡಿ ಎಲೆಯನ್ನು ಒಣಗಿಸಿ, ಅದರ ಮೇಲೆ ಚಿತ್ರ ಬಿಡಿಸಿ ನನಗೆ ಕೊಡುತ್ತಿದ್ದ... ಆ ದಿನಗಳು ಎಷ್ಟು ಸುಂದರವಿತ್ತು.... ನಮ್ಮಿಬ್ಬರ ಸ್ನೇಹಕ್ಕೆ, ಪ್ರೀತಿಗೆ ಆ ಅರಳೀಮರವೇ ಸಾಕ್ಷಿಯಾಗಿತ್ತು... ಮಳೆಗಾಲದಲ್ಲಿ ದಾರಿಯ ಇಕ್ಕೆಲಗಳಲೂ ಹಚ್ಚ ಹಸುರಿನ ಸಾಲು, ಹೊಲದಲ್ಲಿ ಬೆಳೆಯುತ್ತಿದ್ದ ಭತ್ತ - ಕಬ್ಬು - ಶೇಂಗಾ, ತೋಟದಲ್ಲಿ ನಳ ನಳಿಸುವ ಅಡಕೆ, ಬಾಳೆ, ತೆಂಗಿನ ಮರಗಳು, ಶಿಲೆಯಿಂದಲೇ ಕಟ್ಟಿದ್ದ ಊರಿನ ಪುಟ್ಟ ದೇವಾಲಯ, ಅಲ್ಲಿ ಕೊಡುತ್ತಿದ್ದ ರುಚಿಯಾದ ಪ್ರಸಾದ... ಪ್ರಸಾದ ಅಂದಾಕ್ಷಣ ಅಮ್ಮನ ಅಡುಗೆಗಳ ನೆನಪು - ಬಾಳೆಕಾಯಿ ಚಿಪ್ಸ, ಹಲಸಿನ ಕಾಯಿ ಚಿಪ್ಸ್, ಅದರ ಹಪ್ಪಳ, ಮಾವಿನ ಹಣ್ಣಿನ ಹಪ್ಪಳ, ಸಂಡಿಗೆ, ಹಲಸಿನ ಬೇಳೆಯ ಸಾಂಬಾರ್.... ಅಯ್ಯೋ ಇನ್ನು ನೆನಸಿಕೊಂಡ್ರೆ ತಡೆಯಲಾರೆ ಎನ್ನುತ್ತ ಅನಘಾ ವಾಸ್ತವಕ್ಕೆ ಬಂದಳು. ಗಡಿಯಾರ 11 ಗಂಟೆ ಎಂದು ತೋರಿಸುತ್ತಿತ್ತು. ತಿಂಡಿಗಳ ನೆನಪಿನಿಂದ ಹೊಟ್ಟೆ ಹಸಿವು ಹೆಚ್ಚಾಗಿ, ಒಂದು ಲೋಟ ನೀರು ಕುಡಿದು "ಎಷ್ಟಂದ್ರೂ ಹಳ್ಳಿ ಜೀವನವೇ ಚಂದ.. ವೈಭವ್ ಗೆ ಒಂದೆರಡು ದಿನ ಅಡ್ಜಸ್ಟ್ ಮಾಡ್ಕೋ ಅಂತ ಹೇಳಿ, ನಾಳೇನೇ ಊರಿಗೆ ಹೋಗ್ಬೇಕು..." ಎಂದುಕೊಂಡವಳಿಗೆ ಒಳ್ಳೆಯ ನಿದ್ರೆ ಬಂತು.

- R. R. B.


ಸೋಮವಾರ, ಜೂನ್ 8, 2020

ನಿಯತಿ


                 ಮುಸ್ಸಂಜೆಯ ಸಮಯ. ಭಾಸ್ಕರ ತನ್ನ ಕೆಲಸ ಮುಗಿಸಿ, ಬಾನಿನ ಕೆನ್ನೆ ಕೆಂಪೇರಿಸುತ್ತ ಪಡುವಣದಲ್ಲಿ ಮರೆಯಾಗುತ್ತಿದ್ದ. ಗಮ್ಯದೆಡೆಗೆ ಸಾಗುತ್ತಿದ್ದ ಹಕ್ಕಿಗಳ ಗುಂಪು, ಹಿತವಾಗಿ ಬೀಸುತ್ತಿದ್ದ ತಂಗಾಳಿ, ತೀರದ ಮರಳ ಸವರುವ ಕಡಲ ಅಲೆಗಳ ಸಾಲು, ದಡದತ್ತ ಬರುತ್ತಿರುವ ಪುಟ್ಟ ದೋಣಿ... ಇವೆಲ್ಲದರ ಮಧ್ಯೆ ವಿಶಾಖಾ ತನ್ನ ಯೋಚನಾ ಲಹರಿಯಲ್ಲೇ ಮುಳುಗಿದ್ದಳು. ಕಡಲು ಅವಳಿಗೆ ಹೊಸತಲ್ಲ, ಹಾಗಂತ ದಿನಾಲೂ ಸಮುದ್ರ ತೀರಕ್ಕೆ ಬರುವ ಅವಳಿಗೆ ಅದು ಎಂದೂ ಹಳೆತು ಎನಿಸಿಲ್ಲ. ಪ್ರತಿ ದಿನ, ಪ್ರತಿ ಸಂಜೆ, ಪ್ರತಿ ಅಲೆಗಳು ಅವಳಿಗೆ ಹೊಚ್ಚ ಹೊಸದೇ - ಥೇಟ್ ಜೀವನದ ಅನುಭವಗಳಂತೆ !! ಸಾಗರ ಎಂದೂ ಅವಳಿಗೆ ಅಚ್ಚರಿಯ ವಿಷಯ. ಒಳಿತು - ಕೆಡುಕು ಎಲ್ಲವನ್ನು ತನ್ನ ಒಡಲಲ್ಲಿರಿಸಿ, ನಿರಂತರ ಭೋರ್ಗರೆವ ಸಮುದ್ರ ತನ್ನ ತೀರಕ್ಕೆ ಬಂದವರಿಗೆ ನೀಡುವ ದಿವ್ಯ ಸಾನ್ನಿಧ್ಯ, ಪ್ರಶಾಂತತೆ, ನಿರಾಳತೆ ಎಲ್ಲವೂ ವಿಶಾಖಾಳಿಗೆ ಕುತೂಹಲ ಹುಟ್ಟಿಸುವ ಸರಕು. ಆದರೆ ಇಂದು ಇದ್ಯಾವುದೂ ಅವಳ ಗಮನದಲ್ಲಿಲ್ಲ.. ವಿಶಾಖಾಳ ಮನ ಗತಕಾಲದ ನೆನಪುಗಳ ರಾಶಿಯಿಂದ ನಿಧಾನವಾಗಿ ಒಂದೊಂದೇ ಹರಳನ್ನು ಹೆಕ್ಕುತ್ತಿತ್ತು....

                            ವಿಶಾಖಾ ಚಿಕ್ಕವಳಿರುವಾಗಿನಿಂದ  ಕಡಲ ನಂಟು ಗಟ್ಟಿಯಾಗಿ ಬೆಳೆದಿತ್ತು. ಪ್ರತಿ ಭಾನುವಾರ ಅಪ್ಪ - ಅಮ್ಮನ ಜೊತೆ ಸಮುದ್ರ ತೀರಕ್ಕೆ ಬಂದು ಒಂದಿಷ್ಟು ಹೊತ್ತು ಆಟವಾಡಿ, ಮರಳ ಮೇಲೆಲ್ಲ ಚಿತ್ರ ಬರೆದು ಖುಷಿ ಪಡುತ್ತಿದ್ದ ಹುಡುಗಿ, ಬೆಳೆದು ಕೆಲಸಕ್ಕೆ ಸೇರಿದರೂ ಕಡಲ ಮೇಲಿನ ಪ್ರೀತಿ ಒಂಚೂರೂ ಕಮ್ಮಿಯಾಗಿರಲಿಲ್ಲ. ದಿನವೂ ಮನೆಯಿಂದ ಸಮುದ್ರ ತೀರಕ್ಕೆ ಬರುವ ಆ ಹಾದಿ, ಅದರ ಅಕ್ಕಪಕ್ಕದ ಗಿಡಗಳು, ಕಡುಗಪ್ಪು ಬಣ್ಣದ ಡಾಂಬರು ರಸ್ತೆ ಎಲ್ಲವೂ ಅವಳಿಗೆ ಆಪ್ತ. ಸಮುದ್ರ ತೀರದಲ್ಲಿ ಹಾರಿಸಿದ ಚಂದದ ನೀಲಿ ಗಾಳಿಪಟ, ವರ್ಷ ವರ್ಷ ಆಡಿದ ಹೋಳಿ, ಗೆಳತಿಯರೊಂದಿಗೆ ಕಿತ್ತಾಟ, ಡಿಗ್ರಿ ಮುಗಿಸಿ ಇನ್ನು ಹೀಗೆ ಎಲ್ಲರೂ ಒಟ್ಟಿಗೆ ಸಿಗುವುದಿಲ್ಲ ಎಂದು ಕಣ್ಣೀರು ಹಾಕಿದ ಭಾವುಕ ದಿನ ಎಲ್ಲವೂ ಅವಳಿಗೆ ನೆನಪಾಗುತ್ತಿತ್ತು. ಅದೆಷ್ಟು ಸುಂದರವಿತ್ತು ಆ ಕ್ಷಣಗಳು...‌ ಆಲೋಚನೆಯಲ್ಲಿ ಮುಳುಗಿದ್ದವಳಿಗೆ ವಾಸ್ತವ ರಪ್ಪನೆ ಕಣ್ಮುಂದೆ ಬಂತು.

    ‌‌          ಅಪ್ಪ ತೀರಿ ಹೋಗಿ ಒಂದೂವರೆ ವರ್ಷವಾಯ್ತು. ಅಮ್ಮನಿಗೋ ಈಗೀಗ ಯಾವುದರಲ್ಲೂ ಆಸಕ್ತಿಯಿಲ್ಲ. ನನಗೋ ಕಂಪೆನಿಯ ಬಿಡುವಿಲ್ಲದ ಕೆಲಸಗಳಲ್ಲಿ  ಹೇಗೋ ದಿನ ಕಳೆದು ಹೋಗುತ್ತದೆ‌. ಆದರೆ ಮನೆಗೆ ಬಂದು, ಅಮ್ಮನ ಕುಂಕುಮವಿಲ್ಲದ ಹಣೆ ನೋಡಿದಾಗ ಮತ್ತೆ ಮತ್ತೆ ಅಪ್ಪನ ನೆನಪಾಗುತ್ತದೆ... ಬೇಗ ನನ್ನನ್ನು ಮದುವೆ ಮಾಡಿ ಕಳಿಸಬೇಕೆಂಬ ಕರ್ತವ್ಯದ ಹೊರೆ ಅಮ್ಮನ ಮೇಲೆ. ಅದೆಲ್ಲಿಂದ ಸಿಕ್ಕಿದನೋ ಆ ಪುಣ್ಯಾತ್ಮ...‌ " ಇಲ್ಲಿನ ನಿಮ್ಮ ಮನೆ ಮಾರಿ ನನ್ನೊಂದಿಗೆ ಮುಂಬೈಗೆ ಬನ್ನಿ ಆಂಟಿ..‌ನಾವೆಲ್ರೂ ಅಲ್ಲೇ ಆರಾಮಾಗಿರ್ಬೋದು..." ಅಂತ ಅಮ್ಮನ ಕಿವಿ ಹಿಂಡಿ, ನನ್ನ ಕೈ ಹಿಡಿಯುವ ಆಸೆಯಲ್ಲಿದ್ದಾನೆ.  ಈ ಊರು, ಅಪ್ಪ ಪ್ರೀತಿಯಿಂದ ಕಟ್ಟಿಸಿದ, ನಾನು ಹುಟ್ಟಿ ಬೆಳೆದ, ಸಾವಿರ ನೆನಪುಗಳ ಮೂರ್ತ ರೂಪವಾದ ಮನೆ, ಈ ಕಡಲು ಎಲ್ಲವನ್ನು ಬಿಟ್ಟು ಹೋಗುವುದಾದರೂ ಹೇಗೆ?...
ಮನೆಯನ್ನಾದರೂ ಬಿಡಬಹುದು.. ಆದರೆ ನೆಚ್ಚಿನ ಸಮುದ್ರ ತೀರ? ತುಂಬಾ ಕಷ್ಟ... ಅದು ಹೇಗೆ ಅಮ್ಮ ನನ್ನ ಕೇಳದೆಯೇ, ಹುಡುಗಿ ನೋಡುವ ಶಾಸ್ತ್ರವೂ ಮುಗಿಸದೇ ನಿಶ್ಚಿತಾರ್ಥ ಇಟ್ಟುಕೊಂಡಳು? ಈಗ ವಾಟ್ಸಾಪ್, ಫೇಸ್ಬುಕ್ ಕಾಲ ಅಂತ ಅದ್ರಲ್ಲೇ ಪಟ ಕಳಿಸಿದೀನಿ ಎಂಬ ಸಬೂಬು ಬೇರೆ... ಹುಡುಗ ನೋಡಲೇನೋ ಚೆನ್ನಾಗಿದ್ದಾನೆ. ಆದರೆ ಹೇಗೋ ಏನೋ...
ವಿಶಾಖಾ ಯೋಚನೆಯ ಸುಳಿಯಲ್ಲಿ ಸಿಲುಕಿದ್ದಳು.

                "ಅಯ್ಯೋ" ಎಂಬ ಶಬ್ದ ವಿಶಾಖಾಳನ್ನು ವಾಸ್ತವಕ್ಕೆ ಕರೆತಂದಿತು. ಅವಳ ಪಕ್ಕದಲ್ಲೇ ಒಂದು ಪುಟ್ಟ ಹೆಣ್ಣು ಮಗು  ಆಟವಾಡುತ್ತಿತ್ತು. ಅಲೆಗಳ ಅಬ್ಬರದಲ್ಲಿ ಕಾಲ್ಗೆಜ್ಜೆ ಸಮುದ್ರ ಸೇರಿದ್ದೂ ಪುಟ್ಟಿಗೆ ಗೊತ್ತಿಲ್ಲ. ಸ್ವಲ್ಪ ಹೊತ್ತಿನ ನಂತರ ಅದನ್ನು ಗಮನಿಸಿದ ಮಗುವಿನ ತಾಯಿ ಬೇಸರದಿಂದ ಉಸುರಿದ್ದರು. ಅವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಪುಟ್ಟಿಯ ಅಪ್ಪ ದುಬೈ ಹೋಗುವ ಮುನ್ನ ಪ್ರೀತಿಯಿಂದ ಕೊಡಿಸಿದ ಗೆಜ್ಜೆ ಸಾಗರದ ಒಡಲು ಸೇರಿತ್ತು. ವಿಷಯ ತಿಳಿದ ವಿಶಾಖಾ ಮಗುವಿನ ತಾಯಿಗೆ ತೋಚಿದಷ್ಟು ಸಮಾಧಾನ ಮಾಡಿ ಕಳುಹಿಸಿ, 
ಮತ್ತೆ ತನ್ನ ಆಲೋಚನಾ ಲಹರಿಗೆ ಚಾಲ್ತಿ ನೀಡಿದಳು. ಈ ಬಾರಿ ಧನಾತ್ಮಕವಾಗಿ ಯೋಚಿಸಲಾರಂಭಿಸಿದಳು.

 ಜಗದಲ್ಲಿ ಸ್ವಾರ್ಥತೆಯೇ ತುಂಬಿರುವಾಗ ಅವನ್ಯಾರೋ ಪುಣ್ಯಾತ್ಮ ನನ್ನ ಮದುವೆಯಾಗುವುದರ ಜೊತೆ,  ಖುಷಿಯಿಂದ ಅಮ್ಮನಿಗೂ ಅವರ ಮನೆಯಲ್ಲೇ ಇರಲು ಹೇಳುತ್ತಿದ್ದಾನೆಂದರೆ ಖಂಡಿತ ಆತ ಒಳ್ಳೆಯವನೇ.. ನಾನೇ ಏನೇನೋ ಅಂದುಕೊಳ್ಳುವುದರ ಬದಲು ನೇರವಾಗಿ ಅವನೊಂದಿಗೆ ಮಾತನಾಡಬೇಕು. ಅವನನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೇ ಮದುವೆಯಾದರೂ ಈ  ಮನೆಯನ್ನಂತೂ ಬಿಡಲೇಬೇಕು. ಇನ್ನು ಸಮುದ್ರ? ಇಲ್ಲಿಯ ತೀರಕ್ಕೆ ಮುದ್ದಿಸುವ ಅಲೆಗಳೇ ಅಲ್ಲವಾ ಮುಂಬೈಯ ಕರಾವಳಿಯನ್ನೂ ಚುಂಬಿಸುವುದು? ವಿಶಾಲ ಕಡಲು ಕಡಲೇ... ತೀರ ಬದಲಾಗಬಹುದಷ್ಟೇ. ಬದುಕಿನ ದೋಣಿಯಲ್ಲಿ ಕುಳಿತು ಎಲ್ಲೂ ಹೋಗಬಾರದೆಂದು ದಡವ ಕಚ್ಚಿಕೊಂಡರೆ ಹೇಗೆ? ಎಲ್ಲವೂ ಬದಲಾಗುತ್ತದೆ. ಮುಂದಿನ ಜೀವನ ಕೂಡಾ. ಅಮ್ಮ ಹೇಳಿದ ಹುಡುಗನನ್ನೊಮ್ಮೆ ಭೇಟಿಯಾಗಿ ಮನಕ್ಕೆ ತೃಪ್ತಿಯಾಗುವಷ್ಟು ಮಾತನಾಡಬೇಕು. ಅವನ ಅಭಿಪ್ರಾಯ ಕೇಳಬೇಕು. ಇಷ್ಟವಾದರೆ ಮುಗೀತು. ಇಲ್ಲಾ ಅಂದ್ರೆ ಅಮ್ಮನಿಗೆ ನೇರವಾಗಿ ಹೇಳಬೇಕು. ಸಮಯ ತುಂಬಾ ಇದೆ. ಸದುಪಯೋಗ ಮಾಡುವ ಮನಸ್ಸು ಬೇಕಷ್ಟೇ.. ಹೀಗೆ ಇನ್ನೂ ಯೋಚಿಸುತ್ತ ಕುಳಿತವಳಿಗೆ ಯಾರೋ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಅವಳ ಹುಡುಗ ಮುಗುಳ್ನಗುತ್ತ ನಿಂತಿದ್ದ.  ಅವಳ ಕೊನೆಯಿಲ್ಲದ ಆಲೋಚನೆಗಳಿಗೆ ಅವನೇ ಗಮ್ಯವಾಗಿದ್ದ !! 

- R. R. B.

"ಶ್ರೀಸುತ" ಜಾಲತಾಣದಲ್ಲಿ‌ ಪ್ರಕಟವಾದ ಕತೆ 

ಗುರುವಾರ, ಜೂನ್ 4, 2020

ಬದುಕ ಪುಟಗಳಲಿ...

              ಶ್ರೀಕಾರ್ ಇಂಜಿನಿಯರ್ ಮುಗಿಸಿ ಮಲ್ಟಿ ನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಂದೆ - ತಾಯಿಯ ಮುದ್ದಿನ ಏಕೈಕ ಮಗ. ಬಾಲ್ಯದಿಂದಲೂ ಚೂಟಿ ಹುಡುಗ. ಓದಿನಲ್ಲಿ, ಆಟೋಟದಲ್ಲಿ ಬಲು ಚುರುಕು. ಕಂಪೆನಿ ಸೇರಿ ಎರಡು ವರ್ಷವಾಗುತ್ತ ಬಂತು. ಪ್ರತಿ‌ ತಿಂಗಳೂ ಮನೆಗೆ ಸ್ವಲ್ಪ ಹಣ ಕಳುಹಿಸುತ್ತಿದ್ದ. ಎಲ್ಲರೂ  "ಹುಡುಗ ಆರಾಮಾಗಿದಾನೆ" ಅಂತ ಅಂದುಕೊಂಡಿದ್ದರು. ಆದರೆ ಮಲೆನಾಡಿನ ಹಳ್ಳಿಯ ಸುಂದರ ಬಾಲ್ಯವನ್ನು ಅನುಭವಿಸಿದ್ದ ಶ್ರೀಕಾರ್ ಗೆ ಕಂಪೆನಿಯ ಏಕತಾನತೆಯ ಕೆಲಸಗಳು‌ ಬೇಸರ  ತರಿಸಿದ್ದವು. ಅದೇ ಕ್ಯಾಬಿನ್, ಚಳಿಯಿದ್ದರೂ ಹಾಕುವ ಏಸಿ, ಇಷ್ಟವಿಲ್ಲದಿದ್ದರೂ ಧರಿಸುವ ಫಾರ್ಮಲ್ ಬಟ್ಟೆ, ಆ ಉದ್ದಮೂತಿಯ ಶೂ... ಎಲ್ಲವೂ ಅವನಿಗೆ ಯಾಂತ್ರಿಕ ಬದುಕಿನ ಮೆಟ್ಟಿಲುಗಳಂತೆ ಅನಿಸುತ್ತಿತ್ತು....

              ಪ್ರಕೃತಿಯಲ್ಲಿ ಒಂದಾಗಿ, ಹೊಸ ಹೊಸ  ಸ್ಥಳಗಳ ಸೊಬಗು ನೋಡುತ್ತ, ವಿಭಿನ್ನ ಪ್ರದೇಶದ ವಿಭಿನ್ನ ಜೀವನ ಶೈಲಿಯನ್ನು ಅರಿತು ಪದಕ್ಕಿಳಿಸುವ ಬಯಕೆ ಶ್ರೀಕಾರನಲ್ಲಿ ಮೂಡಿತ್ತು. ಮನೆಯಲ್ಲಿ ಹೇಳಿದರೆ - " ಅಷ್ಟ್ ಚೊಲೋ‌ ಕಂಪನಿ, ಚೊಲೋ‌ ಸಂಬಳ ಬತ್ತು, ಅದ್ನ ಬಿಟ್ಟಿಕೆ ಎಂತ ಅಲೆಮಾರಿ ಆಗ್ತ್ಯನ ಮಾಣಿ? ನಿಂಗೊಂಚೂರೂ ಜವಾಬ್ದಾರಿನೇ ಇಲ್ಲೆ.. ಒಂದು ಮದ್ವೆ ಮಾಡ್ಸಕಾತು ಬೇಗ..." ಅಂತ ಅಪ್ಪ ಅಮ್ಮನ ವರಸೆ. ಶ್ರೀಕಾರ್ ಗೊಂದಲದ ಗೂಡಾಗಿದ್ದ. ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗಿ, ಟೀಂ ಲೀಡ್ ನಿಂದ ಒಂದೆರಡು ಸಲ ಬೈಸಿಕೊಂಡ. ಕೊನೆಗೂ "ಆದದ್ದಾಗಲಿ‌‌" ನೋಡೇಬಿಡೋಣ ಅಂತ ಮನೆಯಲ್ಲಿ ‌ತಿಳಿಸದೇ ಕಂಪನಿಯ ಉದ್ಯೋಗ ಬಿಟ್ಟ. ನೋಟೀಸ್ ಪೀರಿಯಡ್ ನಲ್ಲಿ ಪ್ರತಿದಿನ ರೂಮಿಗೆ ಬಂದವನೇ ತನ್ನ ಮುಂದಿನ ಬದುಕಿನ‌ ಬಗ್ಗೆ ರೂಪು - ರೇಷೆ ತಯಾರಿಸುತ್ತಿದ್ದ. ಕೊನೆಗೂ‌ ಕಂಪೆನಿಯ ಸ್ನೇಹಿತರಿಗೆಲ್ಲಾ ವಿದಾಯ ಹೇಳಿ ಬಂದ ದಿನ ಮನಸ್ಸಲ್ಲಿ  ಏನೋ ಒಂಥರಾ ನೆಮ್ಮದಿ...

             ಶ್ರೀಕಾರ್ ಟ್ರಾವೆಲ್ ಬ್ಲಾಗರ್ ಆದ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಧ್ಯವಾದಲ್ಲೆಲ್ಲ ಪಯಣಿಸಿದ. ತಾನು ಕಂಡ, ಕೇಳಿದ ಅನುಭವಗಳ ಸರಣಿ ಬರೆದ. ಸದ್ದಿಲ್ಲದಂತೆ ನಿಧಾನವಾಗಿ ಪ್ರಖ್ಯಾತಿ ಕೂಡ ಗಳಿಸಿದ. ಅದೆಲ್ಲದರ ನಡುವೆ ಮನೆಗೆ ಹಣ ಕಳಿಸುವುದನ್ನು, ಆಗಾಗ ಮನೆಗೆ ಹೋಗುವುದನ್ನೂ ಮರೆಯಲಿಲ್ಲ. ಇತ್ತ ಮನೆಯಲ್ಲಿ ಮಗನಿಗೆ ಹುಡುಗಿ ನೋಡಲು ಶುರು ಮಾಡಿದ್ದರು. ಅದು ತಿಳಿದ ಕೂಡಲೇ, ಇನ್ನು ತಡಮಾಡುವುದು‌‌ ಸರಿಯಲ್ಲ ಎಂದು ಶ್ರೀಕಾರ್ ನಡೆದಿದ್ದೆಲ್ಲವನ್ನೂ ಮನೆಯಲ್ಲಿ ಹೇಳಿದ. ಮೊದಲಿಗೆ ಅಪ್ಪ - ಅಮ್ಮ ಸ್ವಲ್ಪ ಟೆನ್ಶನ್ ಮಾಡಿಕೊಂಡರೂ ಆಮೇಲೆ‌, ಮಗ ಇಷ್ಟವಿಲ್ಲದ ಕೆಲಸ ಮಾಡುವುದಕ್ಕಿಂತ ಹೀಗೆ ಬದುಕುವುದೇ ಸರಿ‌‌ ಎಂದು ಒಪ್ಪಿಗೆ ಕೊಟ್ಟರು. ಮುಂದೆ‌ ಆಗಿದ್ದೆಲ್ಲ ಇತಿಹಾಸ...
    
              ಶ್ರೀಕಾರ್ ಬ್ಲಾಗಿಂಗ್ ಜೊತೆ ಕತೆ, ಕವನಗಳ ಪುಸ್ತಕ ಬಿಡುಗಡೆಮಾಡಿದ್ದ. ಚಲನಚಿತ್ರ ಗೀತೆಗಳನ್ನೂ ಬರೆದಿದ್ದ. ಯುವ ಜನತೆಯ ಕಣ್ಣಲ್ಲಿ ಹೀರೋ ಆಗಿದ್ದ.ಶ್ರೀಕಾರ್ ತನ್ನ ಬದುಕಿನ ಅನುಭವಗಳನ್ನು ಪುಸ್ತಕ ರೂಪಕ್ಕೆ ತಂದ. ಅದರ ಬಿಡುಗಡೆ ಸಮಾರಂಭ. ಶ್ರೀಕಾರ್ ನ  ಭಾವಪೂರ್ಣ ಮಾತುಗಳಿಗೆ ಕಿವಿಯಾಗಲು ನೂರಾರು ಜನ ಸೇರಿದ್ದರು. "ನನ್ನ ಬದುಕೊಂದು ತೆರೆದ ಪುಸ್ತಕ..." ಅಂತ ಶ್ರೀಕಾರ್  ಮಾತು ಆರಂಭಿಸಿದ ಕೂಡಲೇ ಚಪ್ಪಾಳೆಗಳ ಸುರಿಮಳೆ !!

- R. R. B.

ಶುಕ್ರವಾರ, ಮೇ 15, 2020

ಕಾರ್ಮೋಡ



              ಜಿಟಿ ಜಿಟಿ ಜಿಟಿ... ಎಂದು ನಿಲ್ಲದೆ ಸುರಿಯುವ ಸೋನೆ. ಸೂರ್ಯತೇಜ ಎಲ್ಲೋ ಮರೆಯಾಗಿ ವಾರಗಳೇ ಕಳೆದಿತ್ತು. ಇಳೆ - ಮಳೆಯ ಸಮಾಗಮದಿಂದ ರಸ್ತೆಯ ಇಕ್ಕೆಲವೂ ಹಸಿರ ರಾಶಿಯಿಂದ ತುಂಬಿತ್ತು. ಬಣ್ಣ ಬಣ್ಣದ ಕೊಡೆ ಹಿಡಿದ ಅನುಷ್ಕಾ ತನ್ನ ಸೀರೆಯ ನೆರಿಗೆಗಳನ್ನು ಒದ್ದೆಯಾಗಲು ಬಿಡದೇ ಹಿಡಿದು, ನಿಧಾನವಾಗಿ ಮನೆಯತ್ತ ಬರುತ್ತಿದ್ದಳು. ವಾತಾವರಣ ಬಲು ಸುಂದರವಾಗಿದ್ದರೂ ನಡೆದು ಬರುತ್ತಿದ್ದ ಸುಂದರಿಯ ತಲೆಯಲ್ಲಿ ಮಾತ್ರ ಗೊಂದಲಗಳ ಗೂಡು....

                  ಅನುಷ್ಕಾ ಸರ್ಕಾರಿ ಹೈಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿತ್ತು. ಹರೆಯದ ಮಕ್ಕಳ ತುಂಟಾಟ, "ಟೀಚರ್ ಟೀಚರ್ ಅದು ಹೇಗೆ? ಇದು ಯಾಕೆ ಹೀಗಾಗಲ್ಲ? ಟೀಚರ್ ಅವನು ಸುಳ್ಳು ಹೇಳ್ತಿದಾನೆ...." ಈ ಥರಹದ ಮಾತುಗಳು ಅವಳಿಗೆ ಬರೀ ಅಭ್ಯಾಸವಷ್ಟೇ ಅಲ್ಲ, ಅಮೂಲ್ಯವೂ ಆಗಿತ್ತು. ಅನುಷ್ಕಾ ಚಿಕ್ಕವಳಿಂದ ಆಸೆ ಪಟ್ಟು, ಕನಸು ಕಂಡು ಸೇರಿದ ಮೊದಲ ಕೆಲಸ ಅದು... ಜೊತೆಗೆ ಮಲೆನಾಡ ಪ್ರಕೃತಿ ಸೌಂದರ್ಯ, ಕನ್ನಡ ಮಾಧ್ಯಮದ ಮಕ್ಕಳ ಅತಿಯಾದ ಮುಗ್ಧತೆ, ಸರಳತೆ ಎಲ್ಲವೂ ಅವಳಿಗೆ ಅತಿ ಅಪ್ಯಾಯಮಾನ !! 

            ಶಿಕ್ಷಕರ ವೃತ್ತಿ ಒಂದು ಶ್ರೇಷ್ಠ ವೃತ್ತಿ. ಜೊತೆಗೆ ಸವಾಲಿನ ಕೆಲಸ ಕೂಡಾ... ಹಸಿಗೋಡೆಯ ಮೇಲೆ ಏನೇ ಬರೆದರೂ ಒಣಗಿದ ಮೇಲೆ ಅದೇ ಶಾಶ್ವತ, ಹಾಗೇ ಮಕ್ಕಳ ಮನಸ್ಸು ಕೂಡಾ... ತಾನು ಸಾಯುವವರೆಗೂ ಮಲೆನಾಡ ಮಡಿಲಲ್ಲಿ ಮುಗ್ಧ ಮಕ್ಕಳಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂಬ ಮಹದಾಸೆ ಅನುಷ್ಕಾಳಿಗೆ. ಎಲ್ಲವೂ ಸರಿಯಾಗೇ ನಡೆಯುತ್ತಿದೆ ಎನ್ನುವಾಗ ಅನುಷ್ಕಾ ಜೀವನದಲ್ಲೊಂದು ಸಮಸ್ಯೆ ಎದುರಾಗಿತ್ತು. ಅವಳು ಇಷ್ಟ ಪಟ್ಟ, ಮನೆಯವರೆಲ್ಲ "ಇವನೇ ನಮ್ಮ ಅಳಿಯ" ಎಂದು ಆರಿಸಿದ್ದ ಸಿದ್ದಾರ್ಥ್ ತನ್ನ ಹಳೆಯ ತತ್ತ್ವಗಳನ್ನೆಲ್ಲ ಬದಿಗೊತ್ತಿ, ಹಣಕ್ಕಾಗಿ ಸ್ವೀಡನ್ ಹೋಗುವ ಮನಸ್ಸು ಮಾಡಿದ್ದ. ಅಲ್ಲೇ ಸೆಟಲ್ ಆಗುವ ಯೋಚನೆ ತಿಳಿಸಿದ್ದ. ಆರ್ಥಿಕವಾಗಿ ಅದು ಒಳ್ಳೆಯ ನಿರ್ಧಾರವೇ ಆಗಿದ್ದರೂ, ಭಾವುಕ ಅನುಷ್ಕಾಳಿಗೆ ತನ್ನೂರು, ತನ್ನ ದೇಶ ಬಿಟ್ಟು ಬೇರೆಲ್ಲೋ ಅಪರಿಚಿತರಾಗಿ ಜೀವನ ನಡೆಸುವುದು ಸುತರಾಂ ಇಷ್ಟವಿಲ್ಲ....

                 ಮದುವೆ ಬೇಡವೆಂದು ಸುಲಭವಾಗಿ ಹೇಳಬಹುದಲ್ಲವೇ? ಎಂದು ನೀವು ಕೇಳಬಹುದು. ಆದರೆ  ಚಿಕ್ಕಂದಿನಿಂದ ಸಿದ್ಧಾರ್ಥನ ಬಗ್ಗೆ ಅನುಷ್ಕಾ ಬೆಳೆಸಿಕೊಂಡ ಭಾವನೆ, ಜೊತೆಯಾಗಿ ಕಂಡ ಕನಸುಗಳ ಮೂಟೆ, ಇಬ್ಬರ ಭವಿಷ್ಯದ ಬಗ್ಗೆ ಇದ್ದ ಆಸೆಗಳನ್ನು ಮನದಾಳದಿಂದ ಕಿತ್ತೆಸೆಯುವುದೂ ಅಷ್ಟು ಸುಲಭವೇನಿಲ್ಲ... ಅತ್ತ ಹೋಗಲೂ ಆಗದೇ ಇತ್ತ ಸಿದ್ದಾರ್ಥ್ ನ ಬಿಟ್ಟು ಇಲ್ಲಿರಲೂ ಆಗದೇ ಬೆಂಕಿಗೆ ಬಿದ್ದ ಪತಂಗದಂತಾಗಿದ್ದಳು ಅನುಷ್ಕಾ... ಅದಕ್ಕೆ ಸರಿಯಾಗಿ ಅವರಿಬ್ಬರವ ನಿಶ್ಚಿತಾರ್ಥಕ್ಕೆಂದು ಕೈಗೆ ಹಚ್ಚಿದ ಗೋರಂಟಿ ಮಾಸಿದ್ದರೂ ಕಲೆಯಾಗಿ ತನ್ನಿರುವನ್ನು ನೆನಪಿಸುತ್ತ ಅನುಷ್ಕಾಳನ್ನು ಅಣಕಿಸುತ್ತಿತ್ತು... 

                ಇಷ್ಟೆಲ್ಲಾ ಗೊಂದಲಗಳು ತಲೆಯಲ್ಲಿದ್ದರೂ ಅನುಷ್ಕಾಳ ಲಯಭರಿತ ಹೆಜ್ಜೆ ಮನೆಯನ್ನು ಸಮೀಪಿಸುತ್ತಿತ್ತು. ಇದೇ ಥರ ಇವತ್ತೂ ಟೆನ್ಶನ್ ನಲ್ಲಿದ್ರೆ ಅಪ್ಪ-ಅಮ್ಮಂಗೂ ಬೇಜಾರಾಗುತ್ತೆ. ಮನೆ ತಲುಪುವುದರೊಳಗೆ ಎರಡರಲ್ಲೊಂದು ನಿರ್ಧಾರ ಮಾಡಿಯೇ ತೀರಬೇಕೆಂದು ಅವಳ ಮನ ಹೇಳುತ್ತಿತ್ತು. ವಾಸ್ತವ - ಭವಿಷ್ಯದ ನಡುವಣ ಯುದ್ಧದಲ್ಲಿ ವಾಸ್ತವ ಗೆದ್ದಿತ್ತು. ಪ್ರೀತಿಯಿಂದ ಕಟ್ಟಿಕೊಂಡ ಬದುಕನ್ನು ಪ್ರೀತಿಗಾಗಿ ತ್ಯಾಗ ಮಾಡುವುದರಲ್ಲಿ ಹಿರಿಮೆ ಇದೆಯಾದರೂ ಅದು ನೀಡುವ ಪರಿಣಾಮ, ಭಾವನೆಗಳ ಕಲಹ ಎಷ್ಟು ಕಷ್ಟವಾಗಿರುತ್ತದೆಂದು ಅವಳು ಭೈರಪ್ಪನವರ "ಧರ್ಮಶ್ರೀ" ಕಾದಂಬರಿಯಲ್ಲಿ ಓದಿದ್ದ ಸ್ಪಷ್ಟ ನೆನಪಿತ್ತು. ಸಿದ್ದಾರ್ಥ್ ಸ್ವೀಡನ್ ಹೋಗಿ ಅಲ್ಲೇ ತನ್ನ ಮುಂದಿನ ಬದುಕು ಕಟ್ಟಿಕೊಳ್ಳುವುದಾದರೆ, ನಾನು ಈ ಮದುವೆಯಾಗುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದಳು.

             ಅನುಷ್ಕಾ ಮನೆ ತಲುಪುವ ವೇಳೆಗೆ ಮಳೆ ನಿಂತಿತ್ತು. ಆಕಾಶ ತಿಳಿಯಾಗಿತ್ತು. ಇತ್ತ ಮನೆಯಲ್ಲಿ ಅನುಷ್ಕಾಳ ತಂದೆ - ತಾಯಿಯೂ ಮಗಳ ಜೀವನದ ಬಗ್ಗೆ ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅನುಷ್ಕಾ ಒಳ ಬರುತ್ತಿದ್ದಂತೆ ಅವಳ ತಂದೆ ರಾಘವೇಂದ್ರ ರಾಯರು "ಫ್ರೆಷ್ ಅಪ್ ಆಗಿ ಬಾ ಅನು. ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು." ಎಂದರು. ಅನುಷ್ಕಾ ಬಂದ ಮೇಲೆ ಮದುವೆಯ ಬಗ್ಗೆ ಅವಳ ನಿರ್ಧಾರವೇನೆಂದು ಕೇಳಿದರು. ಅನುಷ್ಕಾ ಚೂರೂ ಗೊಂದಲವಿಲ್ಲದೇ ತನ್ನ ನಿರ್ಧಾರ ತಿಳಿಸಿದಾಗ ರಾಯರ ಕಣ್ಣಲ್ಲಿ ಖುಷಿಯ ಮಿಂಚಿತ್ತು. "ನನ್ನ ಮತ್ತೆ ನಿನ್ನ ಅಮ್ಮನದೂ ಇದೇ ತೀರ್ಮಾನವಾಗಿತ್ತು ಮಗಳೇ...  ಕೊನೆಗಾಲದಲ್ಲಿ ಒಬ್ಬಳೇ ಒಬ್ಬಳು ಮಗಳನ್ನು ನೋಡಬೇಕೆನಿಸಿದರೆ, ಬೇಗ ನೋಡಲಾದರೂ ನೀನು ಇಲ್ಲೇ ಇರಬೇಕು. ನಿನ್ನ ಕನಸುಗಳನ್ನ ಸಾಕಾರಗೊಳಿಸಲಾದರೂ ನೀನು ಇಲ್ಲಿರಬೇಕು. ಸಾವಿರಾರು ಮಕ್ಕಳಲ್ಲಿ ಸಾಧಿಸುವ ಪ್ರೇರಣೆ ಹುಟ್ಟು ಹಾಕಲಾದರೂ ನೀನು ಇಲ್ಲಿರಬೇಕು...." ಎಂದು ಭಾವ ಪೂರ್ಣರಾಗಿ ನುಡಿದರು. ಅನುಷ್ಕಾಳಿಗೆ  ಗೊಂದಲದ ಗಿಜಿಗಿಜಿ ಸಂತೆಯಿಂದ ಹೊರಬಂದ ಅನುಭವ ! ದೈವೇಚ್ಛೆ ಇದ್ದ ಹಾಗೇ ಆಗುವುದೆಂಬ ಸಮಾಧಾನ. ಮೋಡ ಸರಿದ ಆಕಾಶ ಇನ್ನೂ ತಿಳಿಯಾಗಿತ್ತು. ಅನುಷ್ಕಾಳ ಗೊಂದಲದ ಕಾರ್ಮೋಡಗಳು ಕೂಡಾ... ಆ ಕ್ಷಣಕ್ಕೆ ಜೀವ ಹೂವಾಗಿತ್ತು. ನೆಮ್ಮದಿಯ ಬೀಡಾಗಿತ್ತು. ಸುಂದರ ನಾಳೆಗೆ ಅಣಿಯಾಗಿತ್ತು !!

- R.R.B.

ಭಾನುವಾರ, ನವೆಂಬರ್ 11, 2018

ನಿವೃತ್ತಿ

                       ಏಪ್ರಿಲ್ 1, 2017. ಶನಿವಾರ. ಕೃಷ್ಣರಾಯರು ಎಂದಿಗಿಂತ ಅರ್ಧ ಗಂಟೆ ಮುಂಚೆಯೇ ಎದ್ದು ಕುಳಿತರು. ಎದೆಯಲ್ಲಿ ಏನೋ ಕಸಿವಿಸಿ, ಹೇಳಿಕೊಳ್ಳಲಾಗದ ತಳಮಳ. ಅಂದು ರಾಯರ ನಿವೃತ್ತಿಯ ದಿನ. ಮೂವತ್ನಾಲ್ಕು ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಮುಕ್ತಾಯ ಹಾಡುವ ಸಮಯ. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣಗೊಳ್ಳುವ ದಿನ.... ಎದ್ದು ಕುಳಿತ ರಾಯರು ಒಮ್ಮೆ ನಿಟ್ಟುಸಿರು ಬಿಟ್ಟು ದೈನಂದಿನ ಕಾರ್ಯಗಳಲ್ಲಿ ತೊಡಗಿದರು. ಆದರೆ ಸ್ನಾನ ಮಾಡುವಾಗ ಮನಸ್ಸಲ್ಲಿ ವಿಚಿತ್ರ ಭಾವನೆಗಳು, ತಿಂಡಿ ತಿನ್ನುವಾಗಲೂ ಅದೇ ಅನ್ಯಮನಸ್ಕತೆ. ಅದನ್ನು ಗಮನಿಸಿದ ಪತ್ನಿ ಸುಶೀಲೆ ಏನೂ ಮಾತನಾಡದೇ ಸುಮ್ಮನಾದಳು. ರಾಯರು ಗಡಿಬಿಡಿಯಲ್ಲಿ ತಿಂಡಿ ತಿಂದು ಬ್ಯಾಂಕಿಗೆ ಹೊರಡಲು ಅನುವಾದರು. ಇಸ್ತ್ರಿಯಾದ ಗರಿಗರಿ ಶರ್ಟು, ಪ್ಯಾಂಟು,ಕೈಗೆ ಚಂದದ ಸೊನಾಟಾ ವಾಚು, ಗಾಂಭೀರ್ಯ ಹೆಚ್ಚಿಸುವ ಆ ಬೆಲ್ಟು, ಹೀಗೆ ಶಿಸ್ತಾಗಿ ಬ್ಯಾಂಕಿಗೆ ಹೊರಡುವ ಗಂಡನನ್ನು ಕಂಡರೆ ಐವತ್ತರ ಆಸುಪಾಸಿನ ಸುಶೀಲೆಗೆ ಏನೋ ಹೆಮ್ಮೆ, ಅಭಿವ್ಯಕ್ತಿಗೆ ಬಾರದ ಖುಷಿ.. ಪ್ರತಿದಿನ ಗೇಟಿಗೆ ತಾಗಿ ನಿಂತು ಅವರನ್ನು ಕಳುಹಿಸಿದ ಮೇಲೆಯೇ ಅವಳ ಮುಂದಿನ ಕೆಲಸ ಶುರು. ಆದರೆ ಇವತ್ತೇಕೋ ಅವಳ ಮುಖದಲ್ಲೂ ಬೇಸರದ ಛಾಯೆ.... ನಾಳೆ ಹೇಗಿರುತ್ತದೋ ಎಂಬ ಗೊಂದಲದ ನೆರಳು… 


                  ಬಿರಬಿರನೆ ಬ್ಯಾಂಕಿಗೆ ಹೊರಟ ರಾಯರ ಮನಸಲ್ಲಿ ಏನೋ ಕಳೆದುಕೊಂಡಂಥ ಅನುಭವ. ಎದೆಯಲ್ಲಿ ಖಾಲಿ ಖಾಲಿ ಭಾವ!... ಮುದ್ದಿನ ಮಗಳ ಮದುವೆಯ ದಿನವೂ ಇಷ್ಟು ಭಾವುಕನಾಗಿರಲಿಲ್ಲವೇನೋ ಎನ್ನಿಸುವಷ್ಟು! ಅಂದು ಬ್ಯಾಂಕು ಮಾತ್ರ ಥೇಟ್ ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿತ್ತು ! ಚೊಕ್ಕವಾಗಿ ಗುಡಿಸಿದ ಅಂಗಳ, ಗೇಟಿಗೆ ಮಾವಿನ ಎಲೆಯ ತೋರಣ, ಬಾಗಿಲಿಗೆ ಚಂದದ ಹೂವಿನ ಹಾರ, ಹಾಲಿನಲ್ಲಿ ನೀಟಾಗಿ ಜೋಡಿಸಿಟ್ಟ ಕುರ್ಚಿಯ ಸಾಲು, ಹೂದಾನಿಗೆ ಜೀವತುಂಬಿದ ಬಣ್ಣದ ಹೂವು, ಚೊಕ್ಕಟವಾದ ಕೆಲಸದ ಮೇಜು, ಅಲ್ಲಲ್ಲಿ ಜರಿ ಹೂಗಳ ಮಾಲೆ, ಮತ್ತು ಹಳೆಯದ್ದನ್ನು ಅಳಿಸದೇ ಅದರ ಮೇಲೇ ಹೊಸದಾಗಿ ಹಾಕಿದ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ಬೋರ್ಡು !…. ಒಳಹೊಕ್ಕ ರಾಯರಿಗೆ ಎಲ್ಲರೂ ಎಂದಿನಂತೆ ನಾರ್ಮಲ್ ಆಗಿ ಇರುವುದನ್ನು ಕಂಡು " ಛೇ...ನಾನೇ ಓವರ್ ಆಗಿ ಥಿಂಕ್ ಮಾಡ್ತಿದೀನಾ?..." ಎಂಬ ಪ್ರಶ್ನೆ. ಆದರೆ ನಿರೀಕ್ಷಿತ ಅತಿಥಿ ಆಡಿಟರ್ ಗಳಿಂದ ಅವರ ಯೋಚನಾಲಹರಿಗೊಂದು ಬ್ರೇಕ್ ಬಿತ್ತು. ಸ್ಟ್ಯಾಚುಟರಿ ಆಡಿಟ್ ಆದ ಕಾರಣ ಎಲ್ಲರಿಗೂ ಕೆಲಸ ತುಸು ಹೆಚ್ಚಾಗಿಯೇ ಇತ್ತು. ಫಿಸಿಕಲ್ ಕ್ಯಾಷ್ ವೇರಿಫಿಕೇಷನ್, ಲೋಕರ್ ರೆಂಟ್ ವೇರಿಫಿಕೇಷನ್, ಅದು ಇದು ಅಂತ ಆಡಿಟರುಗಳು ಗಡಿಬಿಡಿಯಲ್ಲಿ ಓಡಾಡುತ್ತ ಬ್ಯಾಂಕಿನ ಸಿಬ್ಬಂದಿಗಳಲ್ಲೂ ಗಂಭೀರತೆ ಮೂಡಿಸಿದ್ದರು. ಸಮಯ ಸರಿದದ್ದೇ ತಿಳಿಯಲಿಲ್ಲ. 


                    ಮಧ್ಯಾಹ್ನ ಹನ್ನೆರಡು ಗಂಟೆ. ಬ್ಯಾಂಕಿನವರೆಲ್ಲ ಒಬ್ಬೊಬ್ಬರಾಗಿ ಎದ್ದು, ಬೀಳ್ಕೊಡುಗೆ ಸಮಾರಂಭಕ್ಕೆಂದು ಜೋಡಿಸಿಟ್ಟ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತಿದ್ದರೆ ರಾಯರಲ್ಲಿ ಹೇಳಿಕೊಳ್ಳಲಾಗದ ಚಡಪಡಿಕೆ. ಸ್ವಲ್ಪ ಹೊತ್ತಲ್ಲೇ ಕಾರ್ಯಕ್ರಮ ಆರಂಭವಾಯಿತು. ಒಬ್ಬೊಬ್ಬರೇ ಸ್ಟೇಜಿಗೆ ಬಂದು ಕೃಷ್ಣರಾಯರ ಬಗ್ಗೆ ತಮಗಿರುವ ಪ್ರೀತಿ, ಗೌರವ, ಸದ್ದಿಲ್ಲದೇ ಬೆಳೆದ ಬಾಂಧವ್ಯದ ಕುರಿತು ಹೇಳುವಾಗ ರಾಯರ ಕಣ್ಣಂಚಲ್ಲಿ ನೀರು… “ಹೌದಲ್ಲವಾ, ಈ ಬ್ಯಾಂಕೇ ನನಗೆ ಎಲ್ಲವೂ ಆಗಿತ್ತು… ತಿನ್ನಲು ಅನ್ನ ಕೊಟ್ಟ, ಬದುಕಿಗೆ ಬಣ್ಣ ಕೊಟ್ಟ, ವ್ಯಕ್ತಿತ್ವಕ್ಕೊಂದು ಅಸ್ತಿತ್ವ ಕೊಟ್ಟ, ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ಪ್ರೀತಿಸುವ ಸಹೋದ್ಯೋಗಿಗಳ ಸಾಂಗತ್ಯ ಕೊಟ್ಟ ಸ್ಥಳವಿದು. ಮನೆಗಿಂತ ಹೆಚ್ಚು ಆಪ್ತವಾಗಿದ್ದ ಜಾಗ… ಆದರೆ ನಾಳೆಯಿಂದ ಇದಕ್ಕೂ ನನಗೂ ಸಂಬಂಧವಿಲ್ಲ…” ಎಂಬುದು ನೆನಪಾಗಿ ನಿಟ್ಟುಸಿರು. ಕೊನೆಯಲ್ಲಿ “ಕೃಷ್ಣರಾಯರು ತಮ್ಮ ಅನುಭವ ಹಂಚಿಕೊಳ್ಳಬೇಕು” ಎಂದಾಗ ನಡುಗುವ ದನಿಯಲ್ಲೇ ತಮ್ಮ ಮಾತು ಮುಗಿಸಿದ್ದರು. ಉಕ್ಕಿ ಬರುತ್ತಿದ್ದ ನೋವನ್ನು ತಡೆಯಲು ಕಣ್ಣುಗಳು ಅಸಮರ್ಥವಾಗಿದ್ದವು. ನೆನಪಿನ ಕಾಣಿಕೆ ಸ್ವೀಕರಿಸುವಾಗ ಕಣ್ಣಂಚಲ್ಲಿದ್ದ ನೀರು ಕೆನ್ನೆ ತಲುಪಿತ್ತು. ಅಳುತ್ತಿರುವುದು ಯಾರಿಗೂ ತಿಳಿಯದ ಹಾಗೆ ಸಂಭಾಳಿಸುವಷ್ಟರಲ್ಲಿ ರಾಯರಿಗೆ ಸಾಕು ಸಾಕಾಗಿತ್ತು. ಎಲ್ಲರಿಗೂ ವಿದಾಯ ಹೇಳಿ ಮನೆಯತ್ತ ಹೊರಟವರಿಗೆ ಮನಸ್ಸು ಸ್ಥಿಮಿತದಲ್ಲಿಲ್ಲವೆನಿಸಿ ಪಾರ್ಕಿಗೆ ಹೋಗಿ ಕುಳಿತರು. ನೆನಪಿನ ಗುಚ್ಛ ನಿಧಾನವಾಗಿ ತೆರೆದುಕೊಳ್ಳತೊಡಗಿತು……


                    ಅಪ್ಪನನ್ನೇ ಕಾಣದ ರಾಯರಿಗೆ‌ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೇಗೋ ಕಷ್ಟಪಟ್ಟು ಮಗನನ್ನು ಓದಿಸಿದ ಅಮ್ಮ. ವಯಸ್ಸಿಗೆ ಮೀರಿದ ಜಾಣ್ಮೆ, ತಾಳ್ಮೆ ಹೊಂದಿದ್ದ ಕೃಷ್ಣ ಮೊದಲ ಬಾರಿಗೇ ಬ್ಯಾಂಕಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕೆಲಸ ಗಿಟ್ಟಿಸಿಕೊಂಡಿದ್ದ. ಅಚ್ಚುಕಟ್ಟಾಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಲ್ಲದೇ ಪ್ರಮೋಷನ್ ಕೂಡ ಪಡೆದಿದ್ದ. ನಂತರ ಸುಶೀಲೆಯೊಂದಿಗೆ ಮದುವೆ, ಮಕ್ಕಳು ಎಲ್ಲಾ…. ರಾಯರ ಬದುಕಿನ‌ ಬಹುಪಾಲು ಕಳೆದದ್ದು ಅದೇ ಜಯನಗರದ ಬ್ಯಾಂಕಿನಲ್ಲಿ. ಮೂವತ್ತೈದು ವರ್ಷಗಳ ಸರ್ವಿಸ್ ನಲ್ಲಿ ಒಮ್ಮೆಯೂ ರಾಯರು ಕೋಪಗೊಂಡ ದಾಖಲೆಯೇ ಇಲ್ಲ. ಬದುಕನ್ನು ಪ್ರೀತಿಸುವ ಬಗೆ ಬಹುಶಃ ಎಲ್ಲರಿಗೂ ತಿಳಿದಿರುವುದಿಲ್ಲ. ಆದರೆ ರಾಯರು ತಾವಿದ್ದ ಬ್ಯಾಂಕಿನ ವಾಚ್ ಮೆನ್ ನಿಂದ ಹಿಡಿದು ಬರೆಯುವ ಪೆನ್ನನ್ನೂ, ಟೇಬಲ್ ಮೇಲಿರುವ ಪೇಪರ್ ವೇಟನ್ನೂ ಒಂದೇ ಸಮನಾಗಿ ಪ್ರೀತಿಯಿಂದ ಕಂಡವರು. ಅಲ್ಲಿನ ಇಂಚಿಂಚೂ ಅವರಿಗೆ ಆಪ್ತ… ಕುಳಿತುಕೊಳ್ಳುವ ಕುರ್ಚಿ, ಟೇಬಲ್ಲಿನಿಂದ ಹಿಡಿದು ಬ್ಯಾಂಕಿನ ಕಿಟಕಿ, ಬಾಗಿಲುಗಳ ಮೇಲೂ ಅದೇನೋ ಅಕ್ಕರೆ ಅವರಿಗೆ… ಎಲ್ಲರಿಗೂ ‘ಗುಡ್ ಮಾರ್ನಿಂಗ್’ ಹೇಳಿಯೇ ಕೆಲಸ ಆರಂಭಿಸುವ ಅಭ್ಯಾಸ.. ಅದೊಂಥರಾ ಹೇಳಲಾಗದ ಬಾಂಧವ್ಯ ರಾಯರಿಗೆ ಬ್ಯಾಂಕಿನ ಮೇಲೆ ಬೆಳೆದುಬಿಟ್ಟಿತ್ತು. ಈಗ ಒಮ್ಮೆಲೇ ನಾಳೆಯಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ರಾಯರಿಗೆ ಕಷ್ಟವಾಗಿತ್ತು… ಹೃದಯ ಗೊಂದಲದ ಅಲೆಗಳಿಂದ ಹೊಯ್ದಾಡತೊಡಗಿತ್ತು… ಇನ್ನು ಮೇಲೆಯೂ ಕನಿಷ್ಟ ಪಕ್ಷ ಗ್ರಾಹಕನಾಗಿಯಾದರೂ ಈ ಬ್ಯಾಂಕಿಗೆ ಬರುತ್ತೇನೆ, ಇಲ್ಲವಾದರೆ ಹುಚ್ಚು ಹಿಡಿಯಬಹುದೇನೋ ಎನಿಸುತ್ತಿತ್ತು… “ಇಪ್ಪತ್ತೈದು ವರ್ಷ ಪ್ರೀತಿಯಿಂದ ಬೆಳೆಸಿದ ಸ್ವಂತ ಮಗಳೇ ಈಗ ಅಪರಿಚಿತಳಂತೆ ವರ್ತಿಸುತ್ತಾಳೆ. ಇನ್ನು ಇಷ್ಟು ದೊಡ್ಡ ಬ್ಯಾಂಕಿಗೆ ನನ್ನಂಥ ಕೆಲಸಗಾರರು ಲಕ್ಷಾಂತರ ಮಂದಿ ಇರುತ್ತಾರೆ. ನಾನು ನಿವೃತ್ತಿಯಾದೆ ಅಂತ ಯಾರು ಕೊರಗ್ತಾರೆ? ನಿವೃತ್ತಿ ಎಲ್ಲರಿಗೂ ಅನಿವಾರ್ಯ… ಅಗತ್ಯ ಕೂಡ !! 


                ಇನ್ನು ಮೇಲೆಯಾದರೂ ಅತಿಯಾಗಿ ಭಾವುಕನಾಗುವುದನ್ನು ಬಿಟ್ಟು ನನ್ನ, ಸುಶೀಲೆಯ ಆರೋಗ್ಯ ನೋಡಿಕೊಳ್ಳಬೇಕು. ಇಳಿಸಂಜೆಯಲ್ಲಿ ಅವಳೊಂದಿಗೆ ವಾಕಿಂಗ್ ಹೋಗಬೇಕು. ಇಷ್ಟು ದಿನವಂತೂ ಬ್ಯಾಂಕಿನ ವ್ಯವಹಾರಗಳಲ್ಲಿ ಮುಳುಗಿ, ಅವಳಿಗೆ ಸರಿಯಾಗಿ ಸಮಯವೇ ಕೊಟ್ಟಿಲ್ಲ. ಇನ್ನಾದರೂ ಸುಶೀಲೆಯ ಪಕ್ಕ ಕುಳಿತು ಗಂಟೆಗಟ್ಟಲೆ ಹರಟಬೇಕು. ಅವಳು ಮಾಡಿದ ಅಡುಗೆಗೆ ಪದೇ ಪದೇ ಹೊಗಳಬೇಕು. ಮಗಳ ನೆನಪಾಗಿ ಆಕೆ ನಿಟ್ಟುಸಿರು ಬಿಡುವಾಗ ಪ್ರೀತಿಯಿಂದ ಅವಳನ್ನು ಎದೆಗಪ್ಪಿಕೊಳ್ಳಬೇಕು……..” ಎಂದುಕೊಂಡ ರಾಯರು ಮನೆ ಕಡೆ ಹೊರಟರು. ಸುಶೀಲೆಯ ಬಳಿ ಚೆನ್ನಾಗಿ ಮಾತನಾಡಿದರು. ಆದರೆ ರಾತ್ರಿ ಮಾತ್ರ ರಾಯರಿಗೆ ನಿದ್ದೆ ಸುಳಿಯಲೇ ಇಲ್ಲ. ನಾಳೆ ಏನು ಮಾಡಬೇಕೆಂಬ ಗೊಂದಲ… ಬ್ಯಾಂಕಿನ ನೆನಪುಗಳು ಮತ್ತೆ ಮರುಕಳಿಸಲಾರಂಭಿಸಿತ್ತು. ಮತ್ತೆ ಬ್ಯಾಂಕಿಗೆ ಹೋಗಬೇಕೆನಿಸತೊಡಗಿತ್ತು. ಮರುದಿನ ಎಂದಿನಂತೆ ಎದ್ದು ನೀಟಾಗಿ ರೆಡಿಯಾದ ಗಂಡನನ್ನು ಕಂಡು ಸುಶೀಲೆಗೆ ಆಶ್ಚರ್ಯ !! “ಎಲ್ಲಿಗೆ ಹೋಗ್ತಿದೀರಾ?” ಎಂಬ ಪ್ರಶ್ನೆಗೆ ಗಡಿಬಿಡಿಯಲ್ಲಿ ಮನೆಯ ಹೊಸಿಲು ದಾಟುತ್ತಿದ್ದ ರಾಯರಿಂದ ಬಂದ ಒಂದೇ ಉತ್ತರ ಬ್ಯಾಂಕಿಗೆ!!


- R. R. B.

ಶುಕ್ರವಾರ, ಜುಲೈ 20, 2018

A Goodbye !

                            A sunny morning. I woke up with a smile, thinking that it will be a memorable day in my life. I started dreaming about the beautiful future… “Caring parents, lovely husband, passion as a profession, well settled family...What else I need to be HAPPY? Probably a child in next 2-3 years.. hahaha…” I laughed loudly. 


                Suddenly mom entered to the room and put a break to my thinking process. She was in a rush and very tensed mood. “Elisha, get ready and come down quickly” she told and immediately went out with eyes full of tears. I was shocked. Brain stopped working for a minute. I wore a dress and rushed to hall. Dad and Mom were sitting on floor and crying. Slowly I walked towards them and Mom noticed it. She gave a signal to her husband. Dad stopped crying and told me to sit down. I sat next to him. He hold my hand gently and said “Elisha, Life is not so sweet all the time. Make your heart strong. I have a bad news for you dear. But we are with you. Don't think that it's the end…” I stopped him in between and asked anxiously, “What happened Dad? Tell me directly.” He said in a low voice “Your Daniel is no more…” I was about to become unconscious and asked “How? Are you telling the truth?” Dad explained in a serious tone. Daniel met with an accident and he became spot out on the road. It was a terrible truth. I was unable to digest it. All my dreams shattered. All the sweet memories with my Daniel were coming in front of eyes…
             

               Those days were really awesome.. He was a good friend, a kind teacher, a well wisher, a naughty boyfriend, a caring soul, and an inspiration to my life… He was going to become my life partner in two days… Did I lost my Husband? a good friend? an inspiration? a bunch of dreams? or a part of my life?..... Various thoughts were going in my mind. But outside I was so normal. I didn't even cry. I sat silently for sometime and stood up by saying “Dad, Get up. It’s getting late. Let's go to Daniel’s burial…”

- R.R.B.

ಶನಿವಾರ, ಜುಲೈ 22, 2017

ಅಂತ್ಯ

                    ಮುಸ್ಸಂಜೆಯ ಕೆಂಪಡರಿದ ಬಾನಲಿ ಮುಳುಗಲಾರಂಭಿಸಿದ ರವಿತೇಜ, ಗೂಡು ಸೇರಲು ಕಾತರಿಸಿರುವ ಹಕ್ಕಿಗಳ ಗುಂಪು, ವೇಗವಾಗಿ ಚಲಿಸುತಿರುವಂತೆ ಕಾಣುವ ಹೊಲ - ಗದ್ದೆಗಳು, ಗಿಡ - ಮರಗಳ ಸಾಲು, ಏಕತಾನತೆ ಕಾಯ್ದುಕೊಳ್ಳುವ ರೈಲಿನ ಚುಕುಬುಕು ಸದ್ದು...ಎಲ್ಲ ಬೆರೆತು ಒಂದು ಹೊಸ ತೆರನಾದ ವಾತಾವರಣ ಸೃಷ್ಟಿಯಾಗಿತ್ತು. ಆ ಬೋಗಿಯಲ್ಲಿದ್ದವರೆಲ್ಲ ತಮ್ಮದೇ ಆದ ಆಲೋಚನಾ ಸಾಗರದಲ್ಲಿ ಈಜಾಡುತ್ತಿದ್ದರು. ಹಲವರ ಮೊಗದಲ್ಲಿ ಸಂತಸದ ಕಳೆ ಮನೆ ಮಾಡಿತ್ತು. ರೈಲು ಮಾತ್ರ ಅದಾವದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ವೇಗವಾಗಿ ಚಲಿಸುತ್ತಲೇ ಇತ್ತು. ಅದರೊಂದಿಗೆ ಕುಳಿತವರ ಯೋಚನಾಲಹರಿಯೂ ಕೂಡಾ..... 

                   " ಹಲೋ " ಎಂದು ಸನಿಹದಲ್ಲೇ ತೇಲಿಬಂದ ಇಂಪಾದ ಸ್ವರ ಮೌನದ ಅಭೇದ್ಯ ಕೋಟೆಯನ್ನು ಸೀಳುವಲ್ಲಿ ಯಶಸ್ವಿಯಾಯಿತು. ಸುಮಾರು ಇಪ್ಪತ್ತೈದು ವರ್ಷದ ಸುಂದರ ಯುವತಿಯೊಬ್ಬಳು ತನ್ನ ಪಕ್ಕದಲ್ಲಿ ಕುಳಿತಿದ್ದವಳನ್ನು ಮಾತಿಗೆ ಕರೆದಳು. ಮೊಬೈಲ್ ನಲ್ಲೇ ಮುಳುಗಿಹೋಗಿದ್ದ ಯುವತಿ ನಿಧಾನವಾಗಿ ಕತ್ತೆತ್ತಿ " ಹಾಯ್.. " ಎಂದುತ್ತರಿಸಿದಳು. ನಿಧಾನವಾಗಿ ಮಾತುಕತೆ ಆರಂಭವಾಯಿತು. ಬಾನಂಚಿನಿಂದ ಸೂರ್ಯ ಅದಾಗಲೇ ಮರೆಯಾಗಿ ಹೋಗಿದ್ದ. ಗಮ್ಯದತ್ತ ಪಯಣ ಸಾಗುತ್ತಲಿತ್ತು. ವಿಚಾರ ವಿನಿಮಯಗಳು ಇದೀಗ ತಾನೇ ಆರಂಭವಾಗಿತ್ತು. ಇಪ್ಪತ್ತೈದರ ಸುಂದರ ತರುಣಿಯ ಮುದ್ದಾದ ಹೆಸರು ಸ್ಪಂದನಾ. ಇನ್ನೊಬ್ಬಳ ಹೆಸರು ಪ್ರಕೃತಿ. ಮಾತು ಆರಂಭಿಸಿದ್ದು ಸ್ಪಂದನಾ ಆದರೂ ಹೆಚ್ಚು ಮಾತನಾಡತೊಡಗಿದ್ದು ಮಾತ್ರ ಪ್ರಕೃತಿ. ಪ್ರಕೃತಿಗೆ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದ್ದರಿಂದ ಆಕೆ ಪಾಟ್ನಾಕ್ಕೆ ಹೊರಟಿದ್ದಳು. ಆಕೆಯೇ ಮೊದಲು ತನ್ನ ಕತೆಯನ್ನು ಪಟಪಟನೆ ಹೇಳಲಾರಂಭಿಸಿದಳು. 

                       " ಅಪ್ಪ - ಅಮ್ಮನ ಮುದ್ದು ಮಗಳು ನಾನು. ಮನೆಯಲ್ಲಿ ಬಡತನವಿದ್ದರೂ ಮನಸಲ್ಲಿ ಪ್ರೀತಿಗೆ ಎಂದೂ ಬಡತನವಿರಲಿಲ್ಲ. ಅತಿಯಾದ ಅಕ್ಕರೆಯಲ್ಲಿ ಬೆಳೆದ ನನಗೆ ಕಷ್ಟಗಳೆಂದರೆ ಏನೆಂದು ಅಷ್ಟಾಗಿ ಅರ್ಥವಾಗಿರಲಿಲ್ಲ. ಸರ್ಕಾರಿ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಮುಗಿಸಿದೆ. ಅಪ್ಪನ ಆರೋಗ್ಯ ಸರಿಯಿರಲಿಲ್ಲ. ಕೆಲಸ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿ. ಹಾಗಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದೆ. ಅಲ್ಲಿ ಕೆಲಸ ಹುಡುಕಲಾರಂಭಿಸಿದೆ. ಕಷ್ಟ ಎಂದರೇನು ಅಂತ ಆಗ ಅರಿವಿಗೆ ಬಂತು. ಎಷ್ಟೋ ಬಾರಿ ಇಂಟರ್ ವ್ಯೂಗಳಲ್ಲಿ ಕೊನೆಯ ರೌಂಡ್ ನಲ್ಲಿ ಹೊರಬಂದೆ. ಉಳಿದುಕೊಂಡ ಪಿ.ಜಿ.ಯ ಬಾಡಿಗೆ ಕಟ್ಟಲು ಮನೆಯಲ್ಲಿ ಹಣ ಕೇಳುವಂತಿರಲಿಲ್ಲ. ಹೇಗೋ ಪಾರ್ಟ್ ಟೈಮ್ ಕೆಲಸ ಮಾಡಿ ಸಂಪಾದಿಸಿ ದಿನದೂಡುತ್ತಿದ್ದೆ. ಅಂತೂ ಐದು ತಿಂಗಳ ನಂತರ ಈಗ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಮೂವತ್ತೈದು ಸಾವಿರ ಸಂಬಳ. ನಾಡಿದ್ದಿನಿಂದ ಕೆಲಸ ಶುರು. ಕೊನೆಗೂ ನನ್ನ ಕಾಲ ಮೇಲೆ ನಾನು ನಿಂತ ನೆಮ್ಮದಿ. ಜೊತೆಗೆ ಮನೆಗೂ ಹಣ ಕಳಿಸಿ ಅವರನ್ನು ನೋಡಿಕೊಳ್ಳುವ ಅವಕಾಶ. ತುಂಬಾ ಖುಷಿಯಾಗುತ್ತದೆ. ನಂಬಿದ ದೇವರು ಎಂದೂ ಕೈಬಿಡಲಾರ ಅನಿಸ್ತಿದೆ. ರೈಲು ಮುಂದಿನ ನಿಲ್ದಾಣಕ್ಕೆ ಸಾಗಿದಂತೆ ನನ್ನ ಬದುಕೂ ಮುಂದೆ ಸಾಗುತ್ತಿದೆ ಎಂಬ ಭಾವನೆಯೇ ನನ್ನ ಖುಷಿಯನ್ನು ದುಪ್ಪಟ್ಟು ಮಾಡುತ್ತಿದೆ ಸ್ಪಂದನಾ... ಅಯ್ಯೋ ಉತ್ಸಾಹದಲ್ಲಿ ನಿನಗೆ ಮಾತಾಡಲೂ ಅವಕಾಶ ಕೊಡದೇ ನನ್ನ ಕತೆಯೆಲ್ಲಾ ಹೇಳಿಬಿಟ್ಟೆ. ನಿಜವಾಗಿ ಹೇಳಬೇಕೆಂದರೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ನನಗೆ ಒಬ್ಬ ವ್ಯಕ್ತಿ ಬೇಕಿತ್ತು. ಅದು ಯಾರಾದರೂ ಸರಿ ಎಂದು ಮನ ಹೇಳುತ್ತಿತ್ತು. ಅದಕ್ಕೆ ಏನೋ ಒಂದರ್ಧ ಗಂಟೆಯಲ್ಲೇ ನೀನು ನನಗೆ ಹತ್ತಿರದವಳು ಎನಿಸಲಾರಂಭಿಸಿದ್ದು. ಥಾಂಕ್ಯೂ ಸ್ಪಂದನಾ ನನ್ನ ಮಾತುಗಳನ್ನ ಕೇಳಿದ್ದಕ್ಕೆ. ಈಗ ನಿನ್ನ ಬಗ್ಗೆ ಹೇಳು. ಇಷ್ಟ ಇದ್ರೆ ಮಾತ್ರ.... " ಎಂದು ಪ್ರಕೃತಿ ಮಾತು ಮುಗಿಸಿದಳು. ಸ್ಪಂದನಾಗೆ ಪ್ರಕೃತಿಯ ಮಾತುಗಳಿಂದಲೇ ಅವಳ ವ್ಯಕ್ತಿತ್ವದ ಬಗ್ಗೆ ಒಂದು ಕಲ್ಪನೆ ಮೂಡಿತ್ತು. ಪ್ರಕೃತಿ ಭಾವಜೀವಿ. ತನ್ನನ್ನು ತಾನು ಬೇಗನೆ ತೆರೆದುಕೊಳ್ಳುತ್ತಾಳೆ. ಮಾತು ಸ್ಪಷ್ಟ ಹಾಗೂ ನಿರರ್ಗಳ. ಆಕೆಯ ಮಾತೇ ಒಂದು ಕಾವ್ಯ... ಸ್ಪಂದನಾ ತನ್ನ ಬಳಿ ಕುಳಿತವಳನ್ನು ಹೆಮ್ಮೆಯಿಂದ ನೋಡಿ, ಮುಗಳ್ನಕ್ಕಳು. 

                   ಮುಖದಲ್ಲಿ ಸ್ವಲ್ಪ ನಾಚಿಕೆಯ ಭಾವ ತೋರುತ್ತಾ, " ಮುಂದಿನ ವಾರ ನನ್ಮ ಮದುವೆ ಇದೆ. ಅದಕ್ಕೇ ಊರಿಗೆ ಹೊರಟಿದ್ದೇನೆ. ಅಷ್ಟೇ. " ಎಂದು ಸುಮ್ಮನಾಗಿಬಿಟ್ಟಳು. ಪ್ರಕೃತಿ ಮತ್ತೇನೂ ಕೇಳಲಿಲ್ಲ. ಓ ಮನದಿನಿಯನ ಕನಸು ಕಾಣುತ್ತಿರಬೇಕು ಎಂದು ಮೌನವಾದಳು. ಅದೇ ಬೋಗಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅತ್ತಿತ್ತ ಓಡಾಡುತ್ತ ಆಟವಾಡುತ್ತಿದ್ದಳು. ಆಕೆ ಪ್ರಕೃತಿಯ ಬಳಿ ಬಂದಳು. ಪ್ರಕೃತಿ ಆ ಹುಡುಗಿಯನ್ನು ಎತ್ತಿ ತನ್ನ ಕಾಲಮೇಲೆ ಕುಳ್ಳಿರಿಸಿಕೊಂಡಳು. " ಹಾಯ್ ಪುಟ್ಟಾ.. ತುಂಬಾ ಖುಷಿಲಿರೋ ಹಾಗಿದೆ. ನನ್ನತ್ರ ಚಾಕೊಲೇಟ್ ಇದೆ ಬೇಕಾ? " ಎಂದು ಕೇಳಿದಳು. " ಆಂಟೀ ನಾನು ಅಪ್ಪನ ಹತ್ರ ಹೋಗ್ತಿದೀನಿ. ತುಂಬಾ ದಿನ ಆಗಿತ್ತು ಡ್ಯಾಡಿ ಜೊತೆ ಮಾತಾಡಿ..." ಎಂದು ಮುದ್ದಾಗಿ ಹೇಳಿ ಚಾಕೊಲೇಟ್ ತೆಗೆದುಕೊಂಡು ಓಡಿದಳು. ಆ ಎಳೆಯ ಕಂಗಳಲಿ ಸಂತಸದ ಹೊನಲಿತ್ತು. ಸ್ಪಂದನಾ ತನ್ನದೇ ಆದ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು. ಪ್ರಕೃತಿ ಕಿಟಕಿಯ ಬಳಿ ಹೋಗಿ ಕುಳಿತು ಹೊರನೋಡತೊಡಗಿದಳು. ಕತ್ತಲಾಗಿದ್ದರಿಂದ ಏನೂ ಕಾಣಿಸಲಿಲ್ಲ. ಸುಮ್ಮನೆ ಅತ್ತಿತ್ತ ನೋಡುತ್ತ ಕುಳಿತಳು. ಅದಾಗಲೇ ರಾತ್ರಿ ಒಂಭತ್ತು ದಾಟಿತ್ತು. ಪ್ರಯಾಣಿಕರೆಲ್ಲ ತಮ್ಮ ಪಾಡಿಗೆ ತಾವು ಊಟ ಮುಗಿಸಿ ಮಲಗಿದರು. ಕೆಲವರಲ್ಲಿ ಹೊಸ ಜೀವನದ ಕನಸಿತ್ತು, ಕೆಲವರಲ್ಲಿ ಕನಸು ನನಸಾದ ಸಂತೃಪ್ತಿಯಿತ್ತು, ಕೆಲವರಲ್ಲಿ ಕುಟುಂಬವನ್ನು ಸೇರುವ ತವಕವಿತ್ತು, ಇನ್ನು ಕೆಲವರಲ್ಲಿ ಜೀವನದ ತಿರುವುಗಳನ್ನು ನೋಡುವ ಹಂಬಲವಿತ್ತು. ಇನ್ನೂ ಏನೇನೋ..... ಭಾವಗಳು ಅಪರಿಮಿತ, ಅಲೋಚನೆಗಳೋ ಎಂದೂ ಅನಂತ... ಯಾಕಂದ್ರೆ ಹಾಕೋದು ಬಿತ್ತೋದು ನಮ್ಮಿಷ್ಟ..... 

                  ಮಧ್ಯರಾತ್ರಿಯ ವೇಳೆ. ಹನ್ನೆರಡು ದಾಟಿರಬಹುದು. ವೇಗವಾಗಿ ಚಲಿಸುತ್ತಿದ್ದ ರೈಲು ಒಮ್ಮೆಲೇ ಹಳಿ ತಪ್ಪಿತ್ತು. ದುರಂತ ಸಂಭವಿಸಿತ್ತು. ಹಳಿ ತಪ್ಪಿದ ಬೋಗಿಗಳಲ್ಲಿನ ಪ್ರಯಾಣಿಕರು ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ನೂರಾರು ಕಣ್ಣಲ್ಲಿ ಕಟ್ಟಿದ್ದ ಕನಸಿನ ಗೋಪುರ ಧರೆಗುರುಳಿತ್ತು. ಊಹಿಸಲಾರದಂತದ ಘಟನೆಯೊಂದು ಜರುಗಿ ಹೋಗಿತ್ತು. ಸಿಹಿನಿದ್ರೆಯಲ್ಲಿದ್ದ ಕೆಲ ಪ್ರಯಾಣಿಕರು ಈಗ ಚಿರನಿದ್ರೆಗೆ ಜಾರಿದ್ದರು. ಯಮದೂತನ ಸೇವಕರು ಸದ್ದಿಲ್ಲದಂತೆ ತಮ್ಮ ಕೆಲಸ ಮುಗಿಸಿದ್ದರು. ವಿಧಿಲಿಖಿತಕ್ಕೆ ಹೊಣೆ ಯಾರು?..... ಹೊಸ ಕೆಲಸ ಸಿಕ್ಕ ಖುಷಿಯಲ್ಲಿ ಹಾರಾಡುತ್ತಿದ್ದ ಪ್ರಕೃತಿ ಶವವಾಗಿ ಪ್ರಕೃತಿಯ ಮಡಿಲಲ್ಲಿ ಮಲಗಿದ್ದಳು. ಮದುವೆಯ ಕನಸು ಕಂಡ ಸ್ಪಂದನಾ ಕೈ - ಕಾಲುಗಳೆರಡನ್ನೂ ಕಳೆದುಕೊಂಡು ಜೀವ ಹೋಗುವ ಸ್ಥಿತಿಯಲ್ಲಿದ್ದಳು. ಅಪ್ಪನ ಕಾಣಲು ಹೊರಟ ಪುಟ್ಟ ಹುಡುಗಿ ದೇವರ ಪಾದ ಸೇರಿದ್ದಳು.... ಏನೂ ತಪ್ಪೇ ಮಾಡದ ಅದೆಷ್ಟೋ ಜೀವಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಅವರೆಲ್ಲರ ಬದುಕಿಗೆ ಮುಂದಿನ ನಿಲ್ದಾಣ ಬರಲೇ ಇಲ್ಲ...! ಪಯಣ ಪೂರ್ಣಗೊಳ್ಳಲೂ ಇಲ್ಲ...! ರೈತ ಕಷ್ಟಪಟ್ಟು ಹೊಲವನ್ನು ಉತ್ತಿ, ಬೀಜ ಬಿತ್ತಬಹುದು. ಕ್ರಿಮಿ ಕೀಟಗಳು ಬರದಂತೆ ಔಷಧಿ ಸಿಂಪಡಿಸಬಹುದು. ಆದರೆ ಮಳೆಯೇ ಬಾರದಿದ್ದರೆ ಅಥವಾ ಅಕಾಲಿಕ ಮಳೆ ಬಂದರೆ ಬೆಳೆ ಬರಲು ಸಾಧ್ಯವೇ? ಹಾಗೆಯೇ ಜೀವನದ ಬಗ್ಗೆ ಕನಸು ಕಾಣುವುದು, ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸುವುದು ಮಾತ್ರ ನಮ್ಮ ಕೈಯಲ್ಲಿದೆ. ಉಳಿದಿದ್ದೆಲ್ಲ ದೈವೇಚ್ಛೆ... ಅದಕ್ಕೇ ಬಹುಶಃ ದೊಡ್ಡವರ ಮಾತು ನಿಜ - ಹಾಕೋದು ಬಿತ್ತೋದು ನನ್ನಿಚ್ಛೆ. ಆಗೋದು ಹೋಗೋದು ಅವನಿಚ್ಛೆ....! 

( ನಮ್ಮ ಕನ್ನಡ ತಂಡದವರು ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಕತೆ) 

 - R. R. B.

ಗಮ್ಯ

        " ಮಗಳೇ, ಊಟ ಮಾಡೋಣ ಬಾ." ಕೃಷ್ಣರಾಯರ ಅಕ್ಕರೆಯ ಕರೆ. " ಅಪ್ಪಾ ನಂಗೆ ಹಸಿವಿಲ್ಲ. ನೀವು ಊಟ ಮಾಡಿ." ಬೆಳಿಗ್ಗೆಯಿಂದ ಏನೂ ತಿಂದಿಲ್ಲ. ಹಸಿವಾಗ್ತಿಲ್ಲ ಅಂದ್ರೆ ನಂಬಬೇಕಾ? ಎಂದ ತಂದೆಯ ಪ್ರಶ್ನೆಗೆ ಅವಳಲ್ಲಿ ಉತ್ತರವಿರಲಿಲ್ಲ. ಉತ್ತರ ಕೊಡಲು ಸಾಧ್ಯವೂ ಇಲ್ಲ! " ನೀವು ಊಟ ಶುರು ಮಾಡಿ. ಬಂದೆ " ಎಂದು ಕಳಿಸಿದಳು. ರೂಮಿನಲ್ಲೀಗ ಆಕೆ ಮತ್ತೆ ಏಕಾಂಗಿ. ಒಮ್ಮೊಮ್ಮೆ ಶಿಕ್ಷೆ ಅನಿಸೋ ಒಬ್ಬಂಟಿತನ ಕೆಲವೊಮ್ಮೆ ಬೇಕೆನಿಸುತ್ತದೆ. ಯೋಚನಾಕೋಟೆಯೊಳಗೆ ಅವಳೀಗ ಬಂಧಿ. ಹೊರಬರಲಾಗುತ್ತಿಲ್ಲ. ಆದರೆ ಹೊರಬರಲೇಬೇಕಿದೆ. ಗೊಂದಲಗಳಲ್ಲಿ ತಲೆ ಕೆಟ್ಟಂತಾಗಿದೆ. ಜೀವನದಲ್ಲಿ ಅತಿಮುಖ್ಯ ಆಯ್ಕೆಯೊಂದನ್ನು ಆಕೆ ಈಗ ಮಾಡಬೇಕಿದೆ. ಆದರೆ ತನ್ನ ಗೊಂದಲಗಳಿಂದ ತಂದೆ ತಾಯಿಯ ಮನ ನೋಯಿಸುವುದು ಕೂಡ ಆಕೆಗೆ ಇಷ್ಟವಿಲ್ಲ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಬಂದಳು. ಕೃಷ್ಣರಾಯರು ಊಟ ಆರಂಭಿಸಿದ್ದರು. ಮೌನವಾಗಿ ಊಟ ಮುಗಿಸಿ ಮತ್ತೆ ತನ್ನ ರೂಮಿಗೆ ಬಂದು ಹಾಸಿಗೆಯ ಮೇಲೆ ಒರಗಿದಳು. ಜೀವನವು ಎಷ್ಟೊಂದು ತಿರುವುಗಳನ್ನು ಪಡೆಯುತ್ತದಲ್ಲವೆ? ಎಂದೆನಿಸಿತವಳಿಗೆ. 

                 ಅಪ್ಪ, ಅಮ್ಮ, ಅಣ್ಣನ ಪ್ರೀತಿಯ ಮಳೆಯಲ್ಲಿ ನೆನೆದರೂ ನಾನೇಕೆ ಒದ್ದೆಯಾಗಲಿಲ್ಲ? ಒದ್ದೆಯಾಗಲು ಜಡಿಮಳೆಯೇ ಬರಬರಬೇಕೆ? ' ಇರುವುದೆಲ್ಲವ ಬಿಟ್ಟು ಇರದುದರ ನೆನೆವುದೇ ಜೀವನ......' ಎಂಬುದು ನನ್ನ ಬದುಕಿಗೆ ಸರಿಯಾಗಿ ಹೊಂದುತ್ತದೆ. ಚಿಕ್ಕಂದಿನಿಂದಲೂ ಉಜ್ಜೀವನದ ಕನಸು ಕಂಡವಳು ನಾನು. ಪ್ರತಿ ಕ್ಲಾಸಿನಲ್ಲೂ ಉತ್ತಮ ಅಂಕಗಳೊಡನೆ ಪಾಸಾಗುತ್ತಿದ್ದೆ. ಹಿಂದುಸ್ಥಾನಿ ಸಂಗೀತದಲ್ಲಿ ಸೀನಿಯರ್ ಎಕ್ಸಾಂ ಕೂಡ ಮುಗಿದಿದೆ. ಜನರ ಮುಂದೆ ಧೈರ್ಯವಾಗಿ ಮಾತನಾಡಿ, ಮನಗೆಲ್ಲುವ ಕಲೆ ನನಗೊಲಿದಿದೆ. ಇದನ್ನೆಲ್ಲ ಸಾಧಿಸುವಾಗ ನನ್ನ ಮನ ಕಲ್ಲಾಗಿತ್ತು. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿತ್ತು. ಅಗಾಧ ಪ್ರೀತಿಯಿತ್ತು..... ಈಗ? ಯಾವುದರಲ್ಲೂ ಮನಸಿಲ್ಲ. ಮನಸ್ಸು ಇರುವುದಾದರೂ ಹೇಗೆ? ಅದನ್ನೇ ಇನ್ನೊಬ್ಬರಿಗೆ ಕೊಟ್ಟರೆ.... ಇದು ನನ್ನ ಜೀವನದ ಪ್ರಶ್ನೆ. ಅಲ್ಲ, ನನ್ನ ಕನಸಿನ, ಭವಿಷ್ಯದ ಪ್ರಶ್ನೆ. ನಿಧಾ೯ರ ನಿಧಾನವಾದರೂ ಪಕ್ವವಾಗಿರಬೇಕು. ನಂತರ ಪಶ್ಚಾತ್ತಾಪ ಪಡಬಾರದು. ಅಷ್ಟಕ್ಕೂ ಒಂದು ಆಯಾಮದಲ್ಲಿ ನೋಡಿದರೆ ನಾನೇನೂ ಯಾರೂ ಮಾಡಿರದ ಘೋರ ಅಪರಾಧವನ್ನೇನೂ ಮಾಡಿಲ್ಲ. ವಯೋಸಹಜ ಕಾಮನೆಗಳನ್ನು ಹತ್ತಿಕ್ಕಲು ಸಾಧ್ಯವಾಗದ ಸಮಯದಲ್ಲೇ ನನಗೆ ಚೇತನ್ ಪರಿಚಯವಾಗಿದ್ದು. ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಮರೆಯಲಾದರೂ ಹೇಗೆ ಸಾಧ್ಯ? 

                  " ರೀ ಮೇಡಂ, ಸ್ವಲ್ಪ ಪೆನ್ ಕೊಡ್ತೀರಾ? " ಯುವಕನ ಕೋರಿಕೆಯ ದನಿ. ಯೋಚನಾಕೋಟೆಯಿಂದ ಹೊರಬಂದ ನಾನು ಒಮ್ಮೆ ಧ್ವನಿ ಬಂದತ್ತ ತಿರುಗಿದೆ. ಸುಂದರ ಹುಡುಗನೊಬ್ಬ ಪಕ್ಕದಲ್ಲೇ ನಿಂತಿದ್ದಾನೆ. ಮುಖದಲ್ಲಿ ಬೇಡಿಕೆಯ ಚಹರೆಯಿದೆ. ಅವನನ್ನು ಒಮ್ಮೆ ವಿಚಿತ್ರವಾಗಿ ನೋಡಿದೆ. " ಒಂದು ಸಣ್ಣ ಪೆನ್ ತರಲಾಗದವರು ಕಾಲೇಜಿಗೆ ಯಾಕೆ ಬರ್ತೀರಾ? " ಬಾಯಿಂದ ಹೊರಬರಬೇಕೆಂದಿದ್ದ ಮಾತು ಯಾಕೋ ಮೌನದ ಮೊರೆ ಹೊಕ್ಕಿತ್ತು. ಅವಸರದಲ್ಲಿ ಬ್ಯಾಗಿಂದ ಒಂದು ಪೆನ್ ತೆಗೆದು, ಅವನ ಕೈಗಿತ್ತೆ. ಬಳಿಕ ಕ್ಲಾಸಿನಲ್ಲಿ ಬಂದು ಕುಳಿತೆ. ನೆಚ್ಚಿನ ಗೆಳತಿ ಸುರಭಿಯ ಬಳಿ ಮಾತುಕತೆ ಶುರುವಾಯಿತು. ಮಧ್ಯೆ " ಸುರು, ಅಣ್ಣ ಕಳಿಸಿದ ಪೆನ್ ತೋರಿಸ್ತೀನಿರು. " ಎನ್ನುತ್ತಾ ಬ್ಯಾಗಿನಲ್ಲಿ ತಡಕಾಡಿದೆ. ಆದರೆ ಆ ಪೆನ್ ಸಿಗಲಿಲ್ಲ. ಏನೋ ನೆನಪಾದಂತೆ ಥಟ್ಟನೆ ಹಿಂತಿರುಗಿ ನೋಡಿದೆ. ಪ್ರೀತಿಯ ಅಣ್ಣ ತಂಗಿಗಾಗಿ ಇಂಗ್ಲೆಂಡಿಂದ ಕಳಿಸಿದ ಪೆನ್ ಆ ಹುಡುಗನ ಕೈಯಲ್ಲಿ ! ಛೇ... ಅವಸರದಲ್ಲಿ ಆ ಪೆನ್ ಕೊಟ್ಟುಬಿಟ್ಟೆ. ಹೋಗುವಾಗ ವಾಪಸ್ ಕೊಡ್ಲಿ ದೇವರೇ.. ಎಂದು ಪ್ರಾಥಿ೯ಸಿದ್ದೆ. ಕ್ಲಾಸ್ ಮುಗಿಯುವುದನ್ನೇ ಕಾಯುತ್ತಿದ್ದೆ ಎನ್ನಬಹುದು. ಕ್ಲಾಸ್ ಮುಗಿಯಿತು. ದೇವರು ನನ್ನ ಮೊರೆಯನ್ನಾಲಿಸಿದ್ದ. ಆತ ನೇರವಾಗಿ ನನ್ನ ಬಳಿ ಬಂದು " ಥ್ಯಾಂಕ್ಯೂ ಮೇಡಂ ನಿಮ್ಮ ಹೆಸರು? " ಎಂದು ಪೆನ್ ಕೊಟ್ಟ. " ಅನಘಾ " ಎಂದೆ. " ಅಥ೯ಪೂಣ೯ ಹೆಸರು. ನಾನು ಚೇತನ್ " ಎಂದು ಹೊರನಡೆದಿದ್ದ. ನಾನು ಸುಮ್ಮನೆ ಆತ ಹೋಗುವುದನ್ನೇ ನೋಡುತ್ತ ನಿಂತೆ. ಆತನ ಕಣ್ಣುಗಳಲ್ಲಿ ಏನೋ ಒಂದು ಬಗೆಯ ಸೆಳೆತವಿತ್ತು. ನನಗೇ ತಿಳಿಯದೇ ಪ್ರತಿದಿನ ಕ್ಲಾಸಿನಲ್ಲಿ ಆತನ ಚಟುವಟಿಕೆ ಗಮನಿಸಲಾರಂಭಿಸಿದ್ದೆ. ಆತ ಬಡವ. ಓದುವುದರಲ್ಲಿ ಆಸಕ್ತಿಯಂತೂ ಇರಲಿಲ್ಲ. ತಂದೆ ತಾಯಿಗಳ ಒತ್ತಾಯಕ್ಕೆ ಕಾಲೇಜಿಗೆ ಬರುತ್ತಿದ್ದ. ಬಡವನಾದರೂ ಚೇತನ್ ಗೆ ದುಡ್ಡಿನ ಬೆಲೆ ತಿಳಿದಿರಲಿಲ್ಲ. ದುಂದುವೆಚ್ಚ ಮಾಡುತ್ತಿದ್ದ. ಹೀಗಿದ್ರೂ ನನಗೆ ಆತನ ಸ್ನೇಹ ಯಾಕೋ ಇಷ್ಟವಾಗತೊಡಗಿತ್ತು. ಸಲುಗೆ ಅತಿಯಾಗಿ ಸ್ನೇಹ ಪ್ರೇಮವಾಯಿತು. ಚೇತನ್ ಇದೀಗ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ನಾನೂ ಅಷ್ಟೇ. ಅವನೊಂದಿಗೆ ಕೈ ಹಿಡಿದುಕೊಂಡು ಪಾಕ್೯ನಲ್ಲಿ ಓಡಾಡುತ್ತಿದ್ದೆ. ಅವನ ಜೊತೆ ಒಂದೇ ಪ್ಲೇಟಿನಲ್ಲಿ ತಿಂಡಿ ತಿಂದಿದ್ದೆ. ಪ್ರೇಮದ ಅಬ್ಬರದಲ್ಲಿ ಜೀವನಪೂತಿ೯ ನಿನ್ನ ಮುದ್ದಿನ ಮಡದಿಯಾಗಿರುತ್ತೇನೆಂದು ಮಾತು ಕೊಟ್ಟೂ ಆಗಿತ್ತು. ಇಷ್ಟೆಲ್ಲಾ ಮಾಡುವಾಗ ನನ್ನ ಬುದ್ಧಿ ಎಲ್ಲಿ ಹೋಗಿತ್ತೋ? ಆದರೆ ಈಗ ಅಪ್ಪ - ಅಮ್ಮನನ್ನು ಕಂಡಾಗಲೆಲ್ಲ ನಾನು ಅವರಿಗೆ ಮೋಸ ಮಾಡುತ್ತಿದ್ದೇನೆ ಅನಿಸುತ್ತಿದೆ. ನನ್ನ ಮೇಲೆ ಬೆಟ್ಟದಷ್ಟು ಕನಸುಗಳನ್ನು ಕಂಡಿದ್ದಾರೆ ಅಪ್ಪ. ಮಗಳು ವಿದೇಶದಲ್ಲಿ ಎಂ.ಎಸ್ ಮಾಡಬೇಕು, ಸಂಗೀತವನ್ನು ಮುಂದುವರಿಸಬೇಕು, ಮನೆತನದ ಕೀತಿ೯ ಹೆಚ್ಚಿಸಬೇಕು..... ಇನ್ನೂ ಏನೇನೋ... ಅವರಿಗೆ ಚೇತನ್ ವಿಷಯ ಹೇಳಿದರೆ ಆಘಾತವಾಗುವುದಂತೂ ನಿಜ. ಇಷ್ಟು ದಿನ ಕಾಪಾಡಿಕೊಂಡು ಬಂದ ನಂಬಿಕೆಯೆಲ್ಲ ಬಿರುಗಾಳಿಗೆ ತೂರಿ ಹೋಗುತ್ತದಷ್ಟೆ ! 

                     ಇಲ್ಲಾ..... ಹಾಗಾಗಬಾರದು. ಅದಕ್ಕಾಗಿ ಚೇತನ್ ಗೆ ವಿಷಯ ತಿಳಿಸಿ, ನನ್ನನ್ನು ಮರೆತುಬಿಡು ಎನ್ನಲಾಗುತ್ತದೆಯೇ? ನೋ..ಅದೂ ಕಷ್ಟ. "ಇಷ್ಟು ದಿನ ನನ್ನೊಂದಿಗೆ ಸುತ್ತಿದ್ದು, ಮದುವೆಯಾಗುತ್ತೇನೆಂದಿದ್ದು ಎಲ್ಲಾ ಬರೀ ನಾಟಕನಾ? ನಿಮ್ಮಂಥ ಶ್ರೀಮಂತ ಹುಡುಗಿಯರಿಗೆ ನಾವೇನು ಆಟದ ಗೊಂಬೆಗಳಾ? ಬೇಕು ಅಂದಾಗ ಪ್ರೀತಿಸೋಕೆ ಬೇಡ ಅಂದಾಗ ಮರೆಯೋಕೆ. ಈಗ ಅಪ್ಪ ಅಮ್ಮನ ಬಗ್ಗೆ ಮಾತನಾಡುವವಳಿಗೆ ಮಾತು ಕೊಡುವಾಗ ನೆನಪಿರಲಿಲ್ವಾ? " ಎಂದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಯಾವುದಕ್ಕೂ ಸ್ವಲ್ಪ ಯೋಚಿಸೋಣವೆಂದರೆ ಅದಕ್ಕೂ ಸಮಯವಿಲ್ಲ. ಇನ್ನೊಂದು ವಾರದಲ್ಲಿ ಕ್ಲಾಸ್ ಮುಗಿಯುತ್ತದೆ. ಅದಾದ ಮೇಲೆ ಪರೀಕ್ಷೆ. ಅಲ್ಲಿಗೆ ಈ ಕಾಲೇಜಿನ ಋಣ ತೀರುತ್ತದೆ. ಏನು ಮಾಡಲಿ???? ಇದು ಭಾವನೆಗಳ ತಾಕಲಾಟದ ಪ್ರಶ್ನೆ . ಉತ್ತರ ಹುಡುಕಲೇ ಬೇಕು. ಕೇವಲ ನನ್ನ ಒಳಿತನ್ನು ಪರಿಗಣಿಸುವುದರ ಜೊತೆ ಚೇತನ್ ಅಭಿಪ್ರಾಯ, ಅವನ ಒಳಿತು ಕೂಡಾ ಅಷ್ಟೇ ಮುಖ್ಯ. ಚೇತನ್ ನಾನು ಹೇಳಿದರೆ ಏನು ಮಾಡಲೂ ಬೇಸರಿಸಿಕೊಳ್ಳುವುದಿಲ್ಲ. ಹೇಗೋ ಕಳೆದ ಎಲ್ಲಾ ಸೆಮಿಸ್ಟರ್ ನಲ್ಲಿ ಪಾಸಾಗಿದ್ದಾನೆ. ಅವನಿಗೆ ದುಡ್ಡಿನ ಮಹತ್ವ, ಬದುಕಿನ ರೀತಿ ನೀತಿಗಳು ತಿಳಿದಿಲ್ಲವಷ್ಟೆ. ಒಂದು ರೀತಿಯ ಜವಾಬ್ದಾರಿ ಇಲ್ಲದ ಹುಡುಗ. ಆದರೆ ಪರಿವರ್ತನೆ ಜಗದ ನಿಯಮ. ಇಂದು ಹೀಗಿರುವ ಚೇತನ್ ಮುಂದೆಯೂ ಹೀಗೇ ಇರುತ್ತಾನೆ ಎನ್ನಲಾಗದು. ಆ ಬದಲಾವಣೆ ತರುವ ಹೆಣ್ಣು ನಾನಾದರೆ? ಹೌದು ಆ ಹೆಣ್ಣು ನಾನಾಗಬೇಕು. ಈಗ ಇರುವ ಚೇತನ್ ನ ನಡತೆಯನ್ನು ಬದಲಾಯಿಸಬೇಕು. ಒಳ್ಳೆಯ ಮಾತುಗಾರಿಕೆ ಕಲಿತ ನಾನು ಅವನೆಲ್ಲ ಮೌನಗಳಿಗೆ , ಅವನೆಲ್ಲ ಕನಸುಗಳಿಗೆ ನುಡಿಯಾಗಬೇಕು, ಮುನ್ನುಡಿಯಾಗಬೇಕು. ಸಂಗೀತ ಕಲಿತ ನಾನು ಅವನ ಬದುಕಿನ ಸಾಲುಗಳಿಗೆ ರಾಗ ತುಂಬಬೇಕು. ಹಾಡಾಗಬೇಕು. ವಿದೇಶಕ್ಕೆ ಹೋಗಿ ಸಾಧಿಸುವ ಬದಲು ಸ್ವದೇಶದಲ್ಲೇ ಅದನ್ನು ಮಾಡಬಹುದಲ್ಲವೇ? ನಿಜಕ್ಕೂ ನನ್ನ ಆಲೋಚನೆಗಳು ಶ್ಲಾಘನೀಯವೇ... ಯೋಚನೆಗಳು ಆಲೋಚನೆಗಳಾಗುವುದು ಸುಲಭ. ಆದರೆ ಆ ಆಲೋಚನೆಗಳು ಯೋಜನೆಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಕಷ್ಟ. ನಾನೇನೋ ಕೇವಲ ಚೇತನ್ ಬಗ್ಗೆ ಯೋಚಿಸುತ್ತೇನೆ. ಆದರೆ ಕೊನೆಯ ಕ್ಷಣದಲ್ಲಿ ಅವನ ಮನೆಯಲ್ಲಿ ಅಪ್ಪ ಅಮ್ಮ ನಮ್ಮ ಮದುವೆಗೆ ಒಪ್ಪದಿದ್ದರೆ? ಇಲ್ಲಾ ಮದುವೆಗೆ ಒಪ್ಪಿಗೆ ನೀಡಬಹುದು. ನಂತರ ವರದಕ್ಷಿಣೆ ಎಂದರೆ? ಕೊಡುವುದು ಕಷ್ಟವೇ ಅಲ್ಲ. ಆದರೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬಹುದಾದ ಹುಡುಗಿ ನಾನು ಅಂತ ಎಲ್ಲರೂ ಹೇಳುತ್ತಿದ್ದುದು ಸುಳ್ಳಾಗುತ್ತದೆ. ಅಷ್ಟೇ ಅಲ್ಲ, ಅಕಸ್ಮಾತ್ ಅತ್ತೆ ಮಾವ ಎಲ್ಲರೂ ನನ್ನಲ್ಲಿ ತಪ್ಪುಗಳನ್ನೇ ಹುಡುಕಲಾರಂಭಿಸಿದರೆ? ಶ್ರೀಮಂತ ಮನೆತನದ ಹುಡುಗಿ ಎಂದು ಪದೇ ಪದೇ ಮನೆಯಿಂದ ಹಣ ತರಲು ಹೇಳಿದರೆ? ಮದುವೆಯಾದ ಹೆಣ್ಣು ಅಲ್ಲಿ ಇಲ್ಲಿ ಒಬ್ಬಳೇ ಸ್ಪರ್ಧೆಗಳಿಗೆ ಹೋಗೋದು ಬೇಡ ಎಂದರೆ? ಹೌದು. ಚೇತನ್ ಗೂ ಸಂಗೀತದಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಇದ್ದಿದ್ದರೆ ನಾನು ಸ್ಟೇಜ್ ನಲ್ಲಿ ಹಾಡುವಾಗ ಎದ್ದು ಹೋಗುತ್ತಿದ್ದನೇ? ಓ ದೇವರೇ...... ನನ್ನ ಮನದಲ್ಲಿ ಯಾಕಿಷ್ಟು ದ್ವಂದ್ವ? ಈ ಅನಂತ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು? ಅನಘಾಳ ಯೋಚನಾಲಹರಿ ಗತಿ ಬದಲಿಸಿತ್ತು. ದೈವಬಲ ಅವಳ ಜೀವನದ ಗುರಿಯನ್ನು ಬದಲಾಯಿಸಿತ್ತು. 

                           ಹದಿನೈದು ವಷ೯ಗಳ ನಂತರ..... ಅನಘಾ ತವರುಮನೆಗೆ ಬಂದಿದ್ದಾಳೆ. ಅವಳೊಂದಿಗೆ ಪುಟ್ಟ ಅನಘಾ ಶಾರಿ ಕೂಡಾ ಬಂದಿದ್ದಾಳೆ. ಆಕೆಗೀಗ ಹತ್ತು ವಷ೯. ಮುದ್ದು ಮುದ್ದಾಗಿರುವ ಆಕೆ ಅಜ್ಜ - ಅಜ್ಜಿಯರ ನೆಚ್ಚಿನ ಕೂಸು. " ಅಳಿಯಂದಿರು ಯಾವಾಗ ಬರ್ತಾರೆ? " ಕೃಷ್ಣರಾಯರು ಕೇಳಿದರು. " ಅಪ್ಪಾ, ಅವರಿಗೀಗ ಕೆಲಸದ ಒತ್ತಡ ಜಾಸ್ತಿ ಇದೆ. ಇನ್ನೊಂದು ತಿಂಗಳಲ್ಲಿ ಬರುತ್ತಾರೆ. " ಅನಘಾ ಉತ್ತರಿಸಿದಳು. " ಅಪ್ಪಾ, ನಿಮ್ಮ ಮುದ್ದಿನ ಮೊಮ್ಮಗಳಿಗೆ ಮಂತ್ರಿ ಸ್ಕ್ವೇರ್ ನೋಡಬೇಕಂತೆ. ಸಂಜೆ ನಿಮ್ಮ ಕಾರು ಫ್ರೀ ಇದೆಯಲ್ವಾ ? ಇದ್ರೆ ನಾವು ಹೋಗಿ ಬರ್ತೀವಿ. " ಕೃಷ್ಣರಾಯರು ಆಗಲಿ ಎಂದರು. ಅನಘಾ ವೀಡಿಯೋ ಕಾಲ್ ಮಾಡಿ ಕ್ಯಾಲಿಫೋರ್ನಿಯಾದಲ್ಲಿರುವ ಗಂಡನಿಗೆ ತಾವು ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದರ ಬಗ್ಗೆ ಹೇಳಿದಳು. ಆತ ಇನ್ನೆರಡು ವಾರದಲ್ಲಿ ನಾನೂ ಬರುತ್ತೇನೆಂಬ ಸುದ್ದಿ ಅತ್ತೆ ಮಾವನಿಗೆ ತಿಳಿಸಿದ. ಪ್ರದೀಪ್ ಜೊತೆ ಮಾತಾಡಿ ಎಲ್ಲರಿಗೂ ಸಂತೋಷವಾಯಿತು. ಸಂಜೆ ಅನಘಾ ಮಗಳನ್ನು ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದಳು. ಅಲ್ಲೆಲ್ಲ ಸುತ್ತಾಡಿ, ಹಲವು ವಸ್ತುಗಳನ್ನು ಖರೀದಿಸಿದರು. ಪುಟ್ಟ ಹುಡುಗಿ ಅಮ್ಮನ ಕೈ ತಪ್ಪಿಸಿಕೊಂಡು ಓಡತೊಡಗಿದಳು. ಅವಳನ್ನು ಹಿಡಿಯುವ ಭರದಲ್ಲಿ ಅನಘಾ ಯಾರಿಗೋ ಢಿಕ್ಕಿ ಹೊಡೆದಳು. " ಅಯಾಂ ಸಾರಿ " ಎನ್ನುತ್ತಾ ಆ ವ್ಯಕ್ತಿಯನ್ನು ನೋಡಿದಳು. ಸೂಟು ಬೂಟು ಧರಿಸಿದ್ದ, ನೀಟಾಗಿ ಶೇವ್ ಮಾಡಿದ್ದ ಗಂಭೀರ ವದನ. " ನೀನು... ನೀನು...." ಅನಘಾಗೆ ಆಶ್ಚರ್ಯದಿಂದ ಮಾತು ಮುಂದುವರಿಸಲಾಗಲಿಲ್ಲ. " ನಾನೇ ಚೇತನ್. ಒಂದು ಕಾಲದಲ್ಲಿ ನಿನ್ನ ಪ್ರೀತಿಯ ಗೆಳೆಯನಾಗಿದ್ದವ. ಈಗ ನಿನ್ನ ಜೀವನದಲ್ಲಿ ಅನಾಮಿಕ..ಅದಿರಲಿ ಹೇಗಿದೀಯಾ? " ಎಂದು ಅನಘಾಳನ್ನು ನೋಡಿದ. ಅದೇ ಸ್ನಿಗ್ಧ ಸೌಂದರ್ಯ ಅವಳದು. ಮದುವೆಯಾಗಿದೆಯೆಂದು ಗೊತ್ತೇ ಆಗುವಂತಿರಲಿಲ್ಲ. " ಒನ್ ಸೆಕೆಂಡ್ " ಎಂದು ಅನಘಾ ಶಾರಿ..ಎಂದು ಕರೆದಳು. ಅಮ್ಮ ಯಾರದೋ ಬಳಿ ಮಾತನಾಡುತ್ತಿದ್ದಾರೆಂದು ಶಾರಿ ಕರೆದ ತಕ್ಷಣ ಬಂದು ನಿಂತಳು. " ಚೇತನ್ ಫ್ರೀ ಇದೀಯಾ? " ಅನಘಾ ಗಂಭೀರವಾಗಿ ಕೇಳಿದಳು. " ಹಾ. ಇಲ್ಲೇ ಎಲ್ಲಾದರೂ ಕುಳಿತು ಮಾತನಾಡೋಣ. ನಿನ್ನ ನೋಡದೇ ಹದಿನೈದು ವಷ೯ಗಳೇ ಆಯ್ತು. " ಎಂದ. ಮೂವರೂ ಒಂದು ಟೇಬಲ್ ಮುಂದೆ ಕುಳಿತರು. ಎರಡು ನಿಮಿಷ ನೀರವ ಮೌನ. ಅನಘಾಳೇ ಮಾತಿಗಾರಂಭಿಸಿದಳು. " ಚೇತನ್ ನನ್ನ ಜೀವನದ ಕಥೆ ಆಮೇಲೆ ಹೇಳುತ್ತೇನೆ. ಈಗ ನೀನು ಹದಿನೈದು ವಷ೯ ಕಳೆದ ವಿಷಯ ತಿಳಿಸು. " ಎಂದಳು. ಚೇತನ್ ಮೆಲುವಾಗಿ ನಿಟ್ಟುಸಿರು ಬಿಟ್ಟು ಹೇಳಲಾರಂಭಿಸಿದ... 

                   ನಿನ್ನನ್ನು ಎಕ್ಸಾಂ ದಿನ ನೋಡಿದ್ದಷ್ಟೆ. ಆಮೇಲೆ ಪತ್ತೆಯೇ ಇಲ್ಲ. ಕಾಲ್ ಮಾಡಿದರೆ ಹೋಗ್ತಾ ಇರಲಿಲ್ಲ. ನಿನ್ನ ಫ್ರೆಂಡ್ಸ್ ಹತ್ರ ಕೇಳ್ದೆ. ಅವರು ಗೊತ್ತಿಲ್ಲ, ಆದರೆ ಅವಳು ಅಮೇರಿಕಾಗೆ ಹೋಗ್ತಿದಾಳೆ. ಇನ್ನು ನಿನಗೆ ಸಿಗೋದು ಕನಸಿನ ಮಾತು. ಅವಳನ್ನು ಮರೆತುಬಿಡೋದು ಒಳ್ಳೆಯದು ಅಂದ್ರು. ಒಂದು ಸಲ ಎದೆಬಡಿತ ನಿಂತಂತಾಯ್ತು. ಭಾರವಾದ ಹೆಜ್ಜೆ ಹಾಕುತ್ತಾ ಮರಳಿ ಮನೆಗೆ ಬಂದೆ. ಎದೆಗೂಡಿನಲ್ಲಿ ಜ್ವಾಲಾಮುಖಿಯೊಂದು ಸಿಡಿದಂತಾಗಿತ್ತು. ಒಂದೆರಡು ದಿನ ಕುಳಿತು ಯೋಚಿಸಿದೆ. ಸುಮ್ಮನೆ ನೆನಪುಗಳ ಸುಳಿಯಲ್ಲಿ ಬೇಯುತ್ತಾ ಬೇಸರದ ಜೀವನ ನಡೆಸುವುದರ ಬದಲು ಏನಾದರೊಂದು ಸಾಧಿಸಬೇಕೆಂಬ ಬಯಕೆ ಮೊಟ್ಟಮೊದಲ ಬಾರಿ ಮೂಡಿದ್ದು ಆಗಲೇ ಅನಘಾ.... ಕಷ್ಟಪಟ್ಟು ಒಂದು ಕಂಪನಿಯಲ್ಲಿ ಕೆಲಸ ಪಡೆದೆ. ದುಡ್ಡಿನ ಬೆಲೆ ಏನೆಂದು ಅರಿವಾಯಿತು. ಒಂದೊಂದು ರೂಪಾಯನ್ನೂ ಉಳಿಸಿ, ಕೆಲವು ಶೇರ್ ಗಳನ್ನು ಖರೀದಿಸಿದೆ. ಹೆಚ್ಚು ಬೆಲೆಗೆ ಮಾರಿದೆ. ಸ್ಟಾಕ್ ಎಕ್ಸಛೇಂಜ್ ನ ವಹಿವಾಟುಗಳ ಬಗ್ಗೆ ಅರಿತೆ. ಒಳ್ಳೆಯ ಲಾಭ ಬರಲಾರಂಭಿಸಿತು. ಜೊತೆಗೆ ಕಷ್ಟಪಟ್ಟು ದುಡಿದು ಪ್ರಮೋಷನ್ ಗಿಟ್ಟಿಸಿಕೊಂಡೆ. ಬಂದ ಹಣವನ್ನೆಲ್ಲ ಜೋಪಾನವಾಗಿ ಹೆಚ್ಚಾಗಿಸುತ್ತ ನಡೆದೆ. ಹತ್ತು ವಷ೯ದಲ್ಲಿ ಆ ಹಣ ಸುಮಾರಾಗಿತ್ತು. ಬ್ಯಾಂಕಿನಿಂದ ಲೋನ್ ಪಡೆದು ನನ್ನದೇ ಆದ ಒಂದು ಕಂಪನಿ ಆರಂಭಿಸಿದೆ. ಐದು ವಷ೯ಗಳಲ್ಲಿ ಲಾಭ ಹೆಚ್ಚಾಗುತ್ತಿದೆ. ತಂದೆ ತಾಯಿಗೂ ಇದರಿಂದ ಸಂತೋಷವಾಗಿದೆ ಎಂದು ಚೇತನ್ ಮಾತು ಮುಗಿಸಿದ. 

                   " ಚೇತನ್ ಮದುವೆ? " ಅನಘಾ ಪ್ರಶ್ನಿಸಿದಳು. "ಅನಘಾ ನಾನು ಜೀವನದಲ್ಲಿ ಪ್ರೀತಿಸಿದ ಮೊದಲ ಹುಡುಗಿ ನೀನು. ಕೊನೆಯವಳೂ ನೀನೆ. ಮದುವೆಯಾದರೆ ನಿನ್ನೊಂದಿಗೇ ಎಂದು ಕನಸು ಕಂಡವನು ನಾನು. ಕಳೆದ ಹದಿನೈದು ವಷ೯ಗಳಲ್ಲಿ ಯಾವ ಹುಡುಗಿಯನ್ನೂ ಇಷ್ಟಪಟ್ಟಿಲ್ಲ. ಹಾಗಾಗಿ ಮದುವೆಯಾಗಿಲ್ಲ."ಚೇತನ್ ನ ಕೊನೆಯ ಮಾತು ಅನಘಾಳ ಹೃದಯಕ್ಕೆ ನಾಟಿತು. ಅದರ ಫಲವಾಗಿ ಕಣ್ಣಿಂದ ಎರಡು ಹನಿಗಳು ತನಗರಿವಿಲ್ಲದಂತೆಯೇ ಜಾರಿತು. ಅದು ಚೇತನ್ ನ ಅರಿವಿಗೆ ಬರುವ ಮುನ್ನ ಕಣ್ಣೊರೆಸಿಕೊಂಡು ಮುಗುಳ್ನಕ್ಕಳು. ಆತನೇ ಕೇಳುವ ಮುನ್ನ ಹೇಳುವುದು ಒಳಿತು ಎಂದು ಮಾತಿಗಾರಂಭಿಸಿದಳು. 

                  ಎಕ್ಸಾಂ ಮುಗಿದ ಮೇಲೆ ನಿನ್ನ ಭೇಟಿಯಾಗೋಣವೆಂದಿದ್ದೆ. ಆದರೆ ಊರಿನಲ್ಲಿ ತಾತ ತೀರಿಕೊಂಡ ವಿಷಯ ತಿಳಿಯಿತು. ಅಲ್ಲಿಗೆ ಹೋದೆವು. ಅದು ಸಂಪೂಣ೯ ಹಳ್ಳಿ. ಮೊಬೈಲ್ ಗೆ ಸಿಗ್ನಲ್ ಕೂಡ ಸಿಗುವುದಿಲ್ಲ ಅಲ್ಲಿ. ಬೆಂಗಳೂರಿಗೆ ಮರಳಿ ಬಂದ ಮರುದಿನವೇ ನನಗೆ ಅಮೇರಿಕಾಗೆ ಟಿಕೆಟ್ ಬುಕ್ ಆಗಿತ್ತು. ನಾನು ಹೊರಡಲೇಬೇಕಿತ್ತು. ಗಡಿಬಿಡಿಯಲ್ಲಿ ನನ್ನ ಮೊಬೈಲ್ ಇಲ್ಲೇ ಬಿಟ್ಟುಹೋಗಿತ್ತು. ಅಲ್ಲಿಗೆ ಹೋದ ಆರಂಭದಲ್ಲಿ ಒಂದು ವಾರ ನಿನ್ನದೇ ನೆನಪಾಗುತ್ತಿತ್ತು. ನಿನಗೆ ಮೋಸ ಮಾಡಿದೆ ಎಂಬ ಅಪರಾಧೀಭಾವ ಕಾಡುತ್ತಿತ್ತು. ರಾತ್ರಿಯಿಡೀ ಕುಳಿತು ಅಳುತ್ತಿದ್ದೆ ಚೇತನ್. ಇದು ಸುಳ್ಳಲ್ಲ.... ಅನಘಾಳ ಕಣ್ಣಲ್ಲಿ ನೀರು ತುಂಬಿತ್ತು. ಆದರೂ ಅನುಕಂಪ ಗಿಟ್ಟಿಸಿಕೊಳ್ಳುವುದು ಅವಳಿಗೆ ಬೇಕಿರಲಿಲ್ಲ. ಅದಕ್ಕಾಗಿ ಗಂಭೀರವಾಗಿ ಮಾತು ಮುಂದುವರಿಸಿದಳು. ಆಮೇಲೆ ನಾನು ನನ್ನ ಓದಿನಲ್ಲಿ ಬ್ಯುಸಿಯಾದೆ. ಜೊತೆಗೆ ನನ್ನಿಷ್ಟದ ಸಂಗೀತವನ್ನು ಅಲ್ಲಿರುವ ಹೊಸ ಗೆಳೆಯ ಗೆಳತಿಯರಿಗೆ ಕಲಿಸಲು ಯತ್ನಿಸಿದೆ. ಚೆನ್ನಾಗಿ ಮಾತನಾಡುತ್ತೀಯ ಅಂತ ಎಲ್ಲರೂ ಕಾರ್ಯಕ್ರಮದ ನಿರೂಪಣೆಗೆ ಕರೆಯುತ್ತಿದ್ದರು. ಚಿಕ್ಕದರಿಂದ ಆರಂಭವಾಗಿ ಈಗ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೂ ನಾನೊಬ್ಬಳು ನಿರೂಪಕಿ. ಅಷ್ಟರಲ್ಲಿಯೇ ಅಪ್ಪ ಅಮ್ಮ ಒಂದು ಹುಡುಗನನ್ನು ನೋಡಿ ಮದುವೆಗೆ ಗೊತ್ತು ಮಾಡಿದರು. ನನಗೂ ಪ್ರದೀಪ್ ನನ್ನು ನೋಡಿದ ಮೇಲೆ ಇಲ್ಲವೆನ್ನಲಾಗಲಿಲ್ಲ. ಮದುವೆಯಾದೆ. ನಮ್ಮಿಬ್ಬರ ದಾಂಪತ್ಯದ ಕುರುಹೇ ಈ ಶಾರಿ ಎಂದು ಅನಘಾ ಮಗಳಿಗೆ ಮುತ್ತಿಟ್ಟಳು.

                    ಚೇತನ್ ಗೆ ಮಾತಾಡಲು ಇನ್ನೇನೂ ಉಳಿದಿರಲಿಲ್ಲ. ಅನಘಾ ಅವನಿಗೀಗ ಗಗನಕುಸುಮವಾಗಿದ್ದಳು. ಅನಘಾಳೇ ಮಾತು ಮುಂದುವರಿಸಿದಳು. ಚೇತನ್ ಈಗ ನಿನ್ನ ಜೀವನದ ಗಮ್ಯ ಬೇರೆ. ನನ್ನ ಜೀವನದ ಗಮ್ಯ ಬೇರೆ. ಆದರೂ ಜೀವನವೆಂಬ ಪುಸ್ತಕದಲ್ಲಿ ನಿನ್ನೊಂದಿಗೆ ಕಳೆದ ಪುಟಗಳು ನೆನಪಿನ ಪೆಟ್ಟಿಗೆಯಲ್ಲಿ ಜೋಪಾನವಾಗಿರುತ್ತವೆ. ಪುಣ್ಯವಿದ್ದರೆ ಮುಂದೊಂದು ದಿನ ಮತ್ತೆ ಸಿಗೋಣ. ಈಗ ಲೇಟಾಯ್ತು. ಬಾಯ್. ಎಂದಳು. ಶಾರಿ ಅಂಕಲ್ ಗೆ ಬಾಯ್ ಮಾಡು ಎಂದಳು. ಶಾರಿ ಮುದ್ದಾಗಿ ಬಾಯ್ ಅಂಕಲ್ ಎಂದಳು. ಚೇತನ್ ಶಾರಿಯ ಹಣೆಗೆ ಮುತ್ತನಿಟ್ಟು ‘ ಬಾಯ್ ‘ ಎಂದ. ಅನಘಾ ಮಗಳೊಂದಿಗೆ ಹೊರಟಳು. ಚೇತನ್ ಆಕೆ ಹೋದ ದಾರಿಯನ್ನೇ ನೋಡುತ್ತ ನಿಂತ. 

 - R.R.B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...