ಭಾನುವಾರ, ಮೇ 2, 2021

ಸಾವು


ತಿಳಿದಿರಬಹುದು ನಿನಗೆ ಸಾವಿನ ರಹಸ್ಯ
ಆದರೆ ಬದುಕಿನ ಹೃದಯದೊಳಗಿಳಿಯದೇ‌ ಅದು  ಕಾಣುವುದಾದರೂ ಹೇಗೆ?
ರಾತ್ರಿಪೂರ ಕಾಣುವ ಗೂಬೆಗೆ ಬೆಳಕಿನ ಸತ್ಯ ಗೋಚರಿಸದಂತಹ ಕುರುಡು.
ವಾಸ್ತವದಲ್ಲಿ ನೀನು ಸಾವಿನ ಶಕ್ತಿ ನೋಡಬೇಕೆಂದರೆ 
ಹೃದಯ ತೆರೆದು ಬದುಕಿನ ಶರೀರವನೊಮ್ಮೆ ನೋಡು.
ಬದುಕು - ಸಾವುಗಳೆರಡೂ ಒಂದೇ, ನದಿ - ಸಮುದ್ರಗಳು ಒಂದೇ ಆದ ಹಾಗೆ.

ಭರವಸೆ ಮತ್ತು ಬಯಕೆಗಳ ಆಳದಲ್ಲಿಹುದು 
- ಅದರಾಚೆಗಿನ ಜಗದ ಮೌನ ಅರಿವು.
ಮಂಜಿನಡಿಯ ಬೀಜ ವಸಂತದ ಕನಸು ಕಾಣುವಂತೆ, ನಿನ್ನ ಹೃದಯದ ತುಂಬೆಲ್ಲ ಶಾಶ್ವತತೆಯ ಸ್ವಪ್ನ.
ನಂಬಿಕೆಯಿಡು ಕನಸುಗಳಲಿ, ಅವೇ ಅಮರತೆಯ ಕಡೆಗಿನ ಗುಪ್ತದ್ವಾರ.
ಸಾವಿನೆಡೆಗೆ ನಿನ್ನ ಭಯ - ಅರಸನ ಮುಂದೆ ಕಂಪಿಸುವ ಕುರುಬನ ಕೈಯಂತೆ.
ಆ ನಡುಗುವಿಕೆಯ ಜೊತೆಗೆ ರಾಜನ ಕಂಡ ಖುಷಿಯಿಲ್ಲವೇ?
ಆ ಸಂತಸದಲ್ಲಿ ಕಂಪನದ ಕಡೆ ಗಮನ ಹರಿಸಲಿಲ್ಲವೇ?

ಸಾವೆಂದರೇನು, ಗಾಳಿಯಲಿ ಬೆತ್ತಲಾಗಿ ಸೂರ್ಯನಲಿ ಕರಗಿಹೋಗುವುದೇ?
ಉಸಿರಾಟ ನಿಲ್ಲುವುದೆಂದರೇನು, ಅವಿಶ್ರಾಂತ ಉಸಿರ ಅಲೆಗಳ ನಿಲ್ಲಿಸಿ, ಅದನು ಹೆಚ್ಚಿಸಿ, ವಿಸ್ತರಿಸಿ ಅಡಚಣೆಯಿಲ್ಲದೇ ದೇವರ ಸೇರುವ ಬಗೆಯೇ?

ಮೌನದ ನದಿಯಿಂದ ನೀರು ಕುಡಿದಾಗ ಮಾತ್ರ, ನಿಜವಾಗಿ ಹಾಡಬಹುದು ನೀನು
ಪರ್ವತದ ತುತ್ತತುದಿ ತಲುಪಿದಾಗ ಮಾತ್ರ, ಹತ್ತಲು ಶುರು ಮಾಡಬಹುದು ನೀನು
ಮತ್ತು ನಿನ್ನ ಕಾಲು ಭೂಮಿಯ ಸಂಪರ್ಕ ಸೇರಿದಾಗ ಮಾತ್ರ ನಿಜವಾಗಿ ನರ್ತಿಸಬಹುದು ನೀನು !

Note: ಖಲೀಲ್ ಗಿಬ್ರಾನ್ ಅವರ "On Death" ಕವಿತೆಯನ್ನು ಅನುವಾದಿಸುವ ಸಣ್ಣ ಪ್ರಯತ್ನ. ತಪ್ಪಿದ್ದಲ್ಲಿ ಕ್ಷಮಿಸಿ. ಉತ್ತಮ ಸಲಹೆಗಾಗಿ ನಿರೀಕ್ಷೆಯಲ್ಲಿ
- R. R. B.

ಮಂಗಳವಾರ, ಏಪ್ರಿಲ್ 6, 2021

ಕತ್ತಲೆಯೊಂದು ಜಿನುಗಬೇಕು...

ಕತ್ತಲೆಯೊಂದು ಜಿನುಗಬೇಕು 
ಹೊತ್ತಲ್ಲದ ಹೊತ್ತಿನ ಚಡಪಡಿಕೆ, 
ಖಾಸಗೀ ಕನಸುಗಳ ಹಂಬಲಿಕೆ 
ಮುತ್ತಿನ ಮತ್ತಿನ ರಾತ್ರಿಗಳ ಮರುಕಳಿಸಿ
ಇದ್ದೂ ಇಲ್ಲದ ವಿಚಿತ್ರ ಭಾವಗಳನೆಲ್ಲ 
ಒಟ್ಟುಪೇರಿಸಿ ಒಂದೆಡೆ ಚಪ್ಪರ ಹಾಕಲು ಕಡುಗತ್ತಲೆಯೊಂದು ಜಿನುಗಬೇಕು !!

ಗುಲ್ಮೋಹರ್ ಮರದ ಕೆಳಗಿನ ನೆನಪ ರಾಶಿ 
ಕೊಳೆತೆಲೆಯ ಜೊತೆಸೇರಿ ಕಳೆಯುವಾ ಮುನ್ನ 
ಸರಿವ ಸಮಯಕೆ ತಿರುಗೋ ಬಾನ ಬಣ್ಣ 
ಪೂರ್ತಿ ಮುಪ್ಪಾಗುವ ಮುನ್ನ 
ಒಂಟಿಬಾನಲಿ ಚಂದ್ರ - ತಾರೆಗಳ ಜಂಟಿಯಾಗುವಾಗ 
ವಸಂತದ ಕಡುಗತ್ತಲೆಯೊಂದು ಜಿನುಗಬೇಕು !! 

ಕನಸಕೋಣೆಗೆ ನಿನ್ನ ನೆನಪುಗಳದೇ ಬೀಗ
ಲಯ ತಪ್ಪಿದೆಯೇಕೋ ನನ್ನ ಬದುಕಿನಾ ಓಘ 
ಧೂಳು ಹಿಡಿದ ಮನದ ಮನೆಯ ಚಾವಡಿಯೀಗ 
ಮತ್ತೆ ಹೊಳಪಾಗುವಂತೆ, ಚಿತ್ತ ನವಿರಾಗುವಂತೆ 
ತಂಬೆಲರ ಬೀಸಿ, ಕಡುಗತ್ತಲೆಯೊಂದು ಜಿನುಗಬೇಕು !! 

 ಸರಿತಪ್ಪಿನ ಸಮಬೆಸದ ಲೆಕ್ಕದ ಪಟ್ಟಿ ಪಕ್ಕಕಿಟ್ಟು 
ಕೊರಗಿ ಕಳೆದ ನೂರು ನೋವ - ಮರೆವಿನಾ ಮಡಿಲಲಿಟ್ಟು 
ಅನುರಾಗದ ಅನುಭಾವಕೆ ಹೊಸ ಭಾಷ್ಯವನಿತ್ತು 
ಸಮಾಗಮದ ಸರಿಗಮಕೆ ಚಾಲ್ತಿ ನೀಡುವಂಥ 
ಕಡುಗತ್ತಲೆಯೊಂದು ಜಿನುಗಬೇಕು !! 

- R. R. B.

ಭಾನುವಾರ, ಆಗಸ್ಟ್ 23, 2020

ಕಾಮರ್ಸ್_ಕವಿತೆಗಳು_36

ಹಬ್ಬ ಹರಿದಿನಕ್ಕೂ ಸರಿಯಾಗಿ ರಜೆ ಸಿಗದೇ
ಕೆಲ ರವಿವಾರವೂ ಕೆಲಸ ಮಾಡುತ್ತಿದ್ದವನಿಗೆ
ಪ್ರತೀ ದೀಪಾವಳಿಯ ಸ್ವೀಟಿನ ಖರ್ಚು 
ಟ್ಯಾಲಿಗಿಳಿಸುವಾಗ 'ಇಷ್ಟೆಲ್ಲವಾ?' ಎಂಬ ಸಂದೇಹ !

- R. R. B.

ಶುಕ್ರವಾರ, ಆಗಸ್ಟ್ 21, 2020

ಮಳೆ ಕವಿತೆ


ಕೆಂಪು ಮಣ್ಣು ಹಸಿರು ತೋಟ
ಮನವ ಸೆಳೆವ ಅವಳ ನೋಟ
ಧರೆಯ ಕೊರಳ ಸೊಬಗ ಮಾಟ
ಆಕಾಶಕೆ ಸಿಹಿ‌ ಹಬ್ಬದೂಟ !

ಕುಣಿವ ಮಳೆ ನಗುವ ಇಳೆ
ಹರಿವ ಹೊಳೆ ತೊಳೆವ ಕೊಳೆ
ಅವನಿ'ಗೆ ಶೃಂಗಾರದ ಬಳೆ
ಹೊಚ್ಚ ಹೊಸ ಗರತಿ ಕಳೆ !

ಸೂರ್ಯ ಚಂದ್ರ ಜಂಟಿ ಹಕ್ಕಿ
ಮನದಿ ಒಲವ ಧಾರೆ ಉಕ್ಕಿ
ಸೇರಬಹುದೇ ಬಾನ ಚುಕ್ಕಿ
ಭುವಿಯ ಭಾವ ಹೆಕ್ಕಿ ಹೆಕ್ಕಿ !

ನೀಲ ಗಗನ ದಿವ್ಯ ಭವನ
ಸ್ಪರ್ಷ ಸ್ಮರಣ ಭಾವ ಸ್ಫುರಣ
ಬಾನು ಭೂಮಿ ನೋಡುತ ಕುಳಿತು
ಬಂತು ಕವನ ಸಮಯ ಮರೆತು !!

- R. R. B.


ಸೋಮವಾರ, ಆಗಸ್ಟ್ 17, 2020

ನಾನು ಸತ್ತರೆ?

ನಾನು ಸತ್ತರೆ ಏನಾಗಬಹುದು?
ಹೆಚ್ಚೆಂದರೆ ಒಂದು ತಿಂಗಳು 
ಮನೆಯಲಿ ಮಸಣದ ಮೌನ
ಭಾವುಕರಾಗಬಹುದು ಕೆಲವರು...
ಅಕಾಲಿಕ ಸಾವಿನ ಗಾಢಭಾವ
ಸ್ಮಶಾನದಿ ಸುಟ್ಟ ಹೆಣದ ಘಾಟು
ಅನಾಥವಾಗಿ ಬೀಳುವ ಬಟ್ಟೆಬರೆ
ಒಡೆದ ಮಡಕೆ, ಸಿಡಿದ ಮೂಳೆ
ಮನೆಮಂದಿಗೆಲ್ಲ ಸೂತಕದ ಛಾಯೆ...

ಸಾಲುಗಳು ಹೆಚ್ಚೇನಿಲ್ಲ ಬದುಕಿದರೂ?
ಒಟ್ಟಿಗೆ ಕಳೆದ ಖುಷಿಯ ಕ್ಷಣ
ತುಂಬ ಉತ್ಸಾಹದಿ ಕುಣಿವ ಮನ
ಸಾಗಿದ ಕಾಲುದಾರಿಯ ಹೆಜ್ಜೆ
ಕಪಾಟಲಿ ಅನಾಥವಾದ ಗೆಜ್ಜೆ
ಆಗಾಗ್ಗೆ ತಮ್ಮನೊಟ್ಟಿಗೆ ಪುಟ್ಟ ಕದನ
ಕಡೆಗೆ ಸದ್ದಿಲದ ಒಬ್ಬಂಟಿ ಪಯಣ
ಎಲ್ಲ ನೆನಪಿರಬಹುದೇ ಯಾರಿಗಾದರೂ?...

ಅರ್ಧಕ್ಕೆನಿಂತ ಓದುತ್ತಿದ್ದ ಪುಸ್ತಕದ ಹಾಳೆ
ಮುಗಿಯದೇ ಉಳಿದ ತರಲೆ, ಮಾತುಕತೆ
ಬರೆಯಬೇಕೆಂದಿದ್ದ ಕವನದ ಸಾಲು
ಸಂಜೆ ಮಾಡಬೇಕಿದ್ದ ಕುರುಕಲು ತಿಂಡಿ
ಎಲ್ಲವೂ ಮುಂದೆ ಏನಾಗಬಹುದು? 
ಅಯ್ಯೋ ನನಗೇಕೆ ಇದೆಲ್ಲ ತಲೆಬಿಸಿ...
ಇವೆಲ್ಲದರ ಗೊಡವೆ ಬದುಕಿದ್ದವರಿಗೇ ಸರಿ
ನಾನಾಗಲೇ ಸತ್ತು ಅರ್ಧ ಗಂಟೆ ಈಗ !!

- R. R. B.


ಭಾನುವಾರ, ಆಗಸ್ಟ್ 16, 2020

ಪಿಕಾಸಿ

        ಅತಿ ಆಸೆಯು ಮನುಷ್ಯನನ್ನು ಹೇಗೆಲ್ಲಾ ವರ್ತಿಸುವಂತೆ ಮಾಡುತ್ತದೆಯೆಂದು ಮನಮುಟ್ಟುವಂತೆ ಚಿತ್ರಿಸಿದ ಕಿರುಚಿತ್ರ - 'ಪಿಕಾಸಿ'. ಹಳ್ಳಿಯ ವಾತಾವರಣದ ಸೊಬಗಿನ ಅನಾವರಣದ ಜೊತೆ ಜೊತೆಗೆ ದುರಾಸೆಯಿಂದ ಒಬ್ಬ ವ್ಯಕ್ತಿ ತನ್ನ ಬದುಕನ್ನು ಹೇಗೆ ನಾಶಮಾಡಿಕೊಳ್ಳುತ್ತಾನೆ ಎಂಬ ಸಂದೇಶ ನೀಡುವ ಚಿತ್ರ. 

          ಚಿತ್ರದ ಸನ್ನಿವೇಶವನ್ನು ನೋಡುತ್ತಾ ಸಾಗಿದಂತೆ ನನಗೆ ಅನಿಸಿದ ಕೆಲವು ಭಾವನೆಗಳನ್ನು ನಿಮ್ಮ ಮುಂದಿಡುತ್ತೇನೆ... ಜೀವನದ ಬಿರುಸಿನ ಓಟದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸುತ್ತಲೇ ಬಂದಿದ್ದೇವೆ. ಎಷ್ಟು ದುಡಿದರೂ, ಎಷ್ಟು ಗಳಿಸಿದರೂ ನೆಮ್ಮದಿ ಎಂಬುದೇ ಇಲ್ಲ. "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ  ತುಡಿವುದೇ ಜೀವನ" ಎಂದು ಅಡಿಗರು ಸುಮ್ಮನೇ ಹೇಳಿದ್ದಾರೆಯೇ?... ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡದೇ ಬೇರೆ ದಾರಿಯೇ ಇಲ್ಲವೇನೋ ಎನಿಸಿಬಿಟ್ಟಿದೆ. ಓಡದೇ ಹಿಂದುಳಿದುಬಿಟ್ಟರೆ ನಾವು ಸುಮ್ಮನಿದ್ದರೂ ನಮ್ಮ 'ಈಗೋ' ಸುಮ್ಮನಿರುತ್ತದೆಯೇ? ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಭಯದಿಂದ ಓಡುತ್ತಲೇ ಇದ್ದೇವೆ - ಯಾಕಾಗಿ ಓಡುತ್ತಿದ್ದೇವೆಂಬ ಸ್ಪಷ್ಟತೆ ಕೂಡ ಇಲ್ಲದೆಯೇ !!

        90% , 95% ಗಳು ಕಡಿಮೆ ಎನ್ನಿಸುವ ಕಾಲವಿದು. ಹಿಂದೊಂದು ಕಾಲವಿತ್ತು - ಪಾಸಾದರೆ ಖುಷಿಯಿಂದ ಸಿಹಿ ಹಂಚುತ್ತಿದ್ದ ಕಾಲ. ದುಡ್ಡಿಲ್ಲದಿದ್ದರೂ ಪ್ರೀತಿ, ನೆಮ್ಮದಿಯಿದ್ದ ಕಾಲ. ಕಷ್ಟಗಳ ಮಳೆಗೆ ಸಹನೆಯೆಂಬ ಕೊಡೆ ಹಿಡಿದಿದ್ದ ಕಾಲ. ಆಧುನಿಕತೆಯ ಗಂಧವಿಲ್ಲದಿದ್ದರೂ "ಡಿಪ್ರೆಷನ್" ಎಂಬ ಪದದ ಅರಿವಿಲ್ಲದ ಕಾಲ. ದೇಶ - ಸಂಸ್ಕೃತಿಯನ್ನು ಪ್ರೀತಿಸಿದ ಕಾಲ. ಹಬ್ಬ-ಹರಿದಿನಗಳನ್ನು ಮನೆಯವರೆಲ್ಲ ಸೇರಿ ಖುಷಿಯಿಂದ ಆಚರಿಸುತ್ತಿದ್ದ ಕಾಲ. ಎರಡು ಹೊತ್ತು ಊಟ ಸಿಕ್ಕರೆ ತೃಪ್ತಿ ಪಡುತ್ತಿದ್ದ ಕಾಲ... ಆ ಕಾಲದಲ್ಲಿ ಅತ್ಯಾಸೆ ಪಡುವವರ ಸಂಖ್ಯೆ ಕಡಿಮೆಯಿತ್ತು. ಈಗ ಹೆಚ್ಚಾಗಿದೆ ಅಷ್ಟೇ... 

    ಚಿತ್ರದಲ್ಲಿ ಎಲ್ಲೆಡೆ ಕೆಂಪು ಬಾವುಟ ನೆಡುವ ರಾಜಣ್ಣನ ಕ್ರಿಯೆ ನಂಗಂತೂ ಬಹಳ ಆಪ್ತವಾಯ್ತು. ನಾವು ಕೂಡ ನಮಗೇ ತಿಳಿಯದಂತೆ ಬದುಕಲ್ಲಿ ಎಲ್ಲಕಡೆ 'ಕೆಂಪು ಬಾವುಟ' ನೆಡಲು ಪ್ರಯತ್ನಿಸುತ್ತಿರುತ್ತೇವೆ. ಅದು ಮಕ್ಕಳಿಗೆ 'ನೂರಕ್ಕೆ ನೂರು ಬರಲಿ' ಎಂದು ಒತ್ತಡ ಹೇರುವುದಿರಬಹುದು, ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದೇವೆಂದು ಸುಳ್ಳೇ ನಂಬಿಸುವುದಾಗಿರಬಹುದು, ಎಲ್ಲವೂ ಇದ್ದೂ ಸರ್ಕಾರದಿಂದ ಏನೆಲ್ಲ ಫ್ರೀಯಾಗಿ ಸಿಗುತ್ತದೋ ಅದನ್ನೆಲ್ಲ ಪಡೆಯುವ ಹವಣಿಕೆ ಇರಬಹುದು... ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಸಹಜವೇ ಎನ್ನಿಸಿದರೂ ಯಾವುದೂ ಅತಿಯಾಗಬಾರದು ಅಷ್ಟೇ ! ಒಂದು ನಿಮಿಷವೂ ವಿಶ್ರಾಂತಿ ತೆಗೆದುಕೊಳ್ಳದ ರಾಜಣ್ಣನಂತಾದರೆ, ಇಳಿವಯಸ್ಸಿನಲ್ಲಿ ಸವಿಯಲು ನೆನಪುಗಳ ಬುತ್ತಿಯೇ ಇರುವುದಿಲ್ಲ ! ಒಟ್ಟಿನಲ್ಲಿ "ವರ್ಕ್ ಲೈಫ್" ಮತ್ತು "ಪರ್ಸನಲ್ ಲೈಫ್" ಗಳೆರಡನ್ನೂ ಸಮರ್ಪಕವಾಗಿ ನಿಭಾಯಿಸುವ ಛಾತಿಯಿದ್ದರೆ ಬದುಕು ಸುಂದರ...

     ಇನ್ನು 'ಪಿಕಾಸಿ'ಯ ಬಗ್ಗೆ ಹೇಳುವುದಾದರೆ ವಿನೋದ್ ಕುಲಶೇಖರನ್ ನಿರ್ದೇಶನದ, 26 ನಿಮಿಷದ ಈ ಕಿರುಚಿತ್ರ BISFF  - 2020 (ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರ ಪ್ರದರ್ಶನ)ಗೆ ಆಯ್ಕೆಯಾದ ಚಿತ್ರ. ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಯಾಮೆರಾವರ್ಕ್, ಎಡಿಟಿಂಗ್ ಎಲ್ಲವೂ ಚಂದ. ಹಿನ್ನೆಲೆ ಸಂಗೀತ ತುಂಬ ಇಷ್ಟವಾಯ್ತು... ಸಾಧ್ಯವಾದರೆ ಒಮ್ಮೆ ಕಣ್ತುಂಬಿಕೊಳ್ಳಿ.

ಒಂಟಿ ಟೊಂಗೆಯ ಲಾಂದ್ರ


            ಶ್ರೀಧರ್ ಭಟ್ ತಲಗೇರಿಯವರ ಚೊಚ್ಚಲ ಇ - ಕವನಸಂಕಲನ. ಈ ಕೊರೋನಾ ಗಲಾಟೆ ಇಲ್ಲವಾಗಿದ್ದರೆ "ಹರಿದ ಜೇಬಿನ ಹೂವು" ಇವರ ಮೊದಲ ಕವನಸಂಕಲನವಾಗಿ ನಮ್ಮ ಕೈಸೇರುತ್ತಿತ್ತು. ಇರಲಿ, ಈಗ ಮೊಬೈಲ್ ನಲ್ಲೇ "ಒಂಟಿ ಟೊಂಗೆಯ ಲಾಂದ್ರ"ದ  ಬೆಳಕ ನೋಡುವ ಸಂಭ್ರಮ... 

            ಕವಿತೆಗಳ ಕುರಿತು ಹೇಳುವ ಮೊದಲು ಕವಿಯ ಬಗ್ಗೆ ಒಂದಿಷ್ಟು : 
"ಕಣ್ಣಿನಲ್ಲೇ ಕಣ್ಣ ತೀಡಿ ಕವಿತೆ ಹೆಕ್ಕಿ, ಬಣ್ಣ ಅದ್ದಿದ ಕುಂಚಕಿಲ್ಲಿ ಫ್ರೇಮ್ ಹಾಕಿ, ಎಲ್ಲ ಋತುವಿಗೂ ಇರಬಹುದಾದವ..‌." ಫೇಸ್ಬುಕ್ಕಿನ ಬಯೋ ಓದುವಾಗಲೇ ಇವನ ಪರಿಚಯ ಹಲವರಿಗೆ ಆಗಿರಬಹುದು. ಭಾವನೆಗಳನ್ನು ಪದಗಳಲ್ಲಿ ಹಿಡಿದಿಡುವುದು ಜಾಗರೂಕತೆಯಿಂದ ಕಸೂತಿ ನೇಯ್ದಂತೆಯೇ... ಅದರಲ್ಲಿ ಈತ ಪರಿಣಿತ. ಅದ್ಭುತ ಮಾತುಗಾರ. ಕುಂಚ ಹಿಡಿದರೆ ಸುಂದರ ಚಿತ್ರಗಳ‌ ಸುರಿಮಳೆ ಸುರಿಸುವವ. ಇನ್ನು ಈತನ ಫೋಟೋಗ್ರಫಿಯ ಬಗ್ಗೆ ನಾನು ವಿವರಿಸುವುದಕ್ಕಿಂತ ಒಮ್ಮೆ ನೀವೇ "Stories in a Frame" ಪುಟಕ್ಕೆ ಭೇಟಿ ಕೊಟ್ಟರೆ ಒಳಿತು. 
                   
            "ಹೊಂಬಣ್ಣ"ದ ಕನಸ ನನಸಾಗಿಸಲು ಹೊರಟಿರುವ "ಯಾತ್ರಿಕ"ನೀತ... ಭಾವಗಳ ಉಸಿರ ಬಣ್ಣದ ಬಲೂನುಗಳಲ್ಲಿ ತುಂಬಿ ಓದುಗರತ್ತ ಅಕ್ಕರೆಯಿಂದ ಹಾರಿಬಿಡುವವ... ಯಾವಾಗಲೂ ಲವಲವಿಕೆಯಿಂದ ಹೊಸದೇನಾದರೂ ಓದುತ್ತ, ಬರೆಯುತ್ತ, ಒಳ್ಳೆಯ ಚಲನಚಿತ್ರಗಳ ಕಣ್ತುಂಬಿಸಿಕೊಳ್ಳುತ್ತ, ಹಳ್ಳಿಯ ಹಳೆಯ ನೆನಪುಗಳ ಜೊತೆಗೆ  ಬೆಂಗಳೂರಿನ ಪ್ರತೀ ಮಳೆಯನ್ನು, ಬಿಸಿಲನ್ನು, ಮತ್ತೆ ಮತ್ತೆ ಕಾಡುವ ಸಂಜೆಗಳನ್ನು ಆಪ್ತವಾಗಿ ಅನುಭವಿಸುತ್ತ ಖುಷಿಯಿಂದ ಬದುಕುವವ... 

      'ಒಂಟಿ ಟೊಂಗೆಯ ಲಾಂದ್ರ'ದಲ್ಲಿ :
ಒಟ್ಟೂ ಮೂವತ್ತನಾಲ್ಕು ಕವನಗಳಿವೆ. ಒಂದಕ್ಕಿಂತ ಒಂದು ಚೆನ್ನ. ಒಮ್ಮೆ ಹಳ್ಳಿಯ ಸೊಬಗು ಕಣ್ಮುಂದೆ ಬಂದರೆ ಮುಂದಿನ ಕವಿತೆಯಲ್ಲಿ ನಗರದ ಬೃಹತ್ ಕಟ್ಟಡಗಳಲ್ಲಿ ಕಾಣೆಯಾಗುವ ಮನಸ್ಸುಗಳ ಹುಡುಕಾಟವಿದೆ. "ನಿನ್ನ ಬಗ್ಗೆಯೇ ಬರೆದೆ 
ನನ್ನ ಒಳಗೆಲ್ಲೂ ಇಳಿಯದೇ..." ಎಂದು ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ, ಭಾವುಕರಾಗಿ 'ಕವಿಯಾಗಬಾರದಿತ್ತು ನಾನು' ಎನ್ನುತ್ತಾರೆ ಕವಿ. ನಾಗರಿಕ ಬದುಕಿನ ಸೂಕ್ಷ್ಮಗಳ ನಡುವಿನ ಗೆರೆಯ ಬಗ್ಗೆ ಸೂಚ್ಯವಾಗಿ ಹೇಳುತ್ತ "ರಾವಣ ಮಾರುವೇಷದಲ್ಲಿದ್ದಾನೆ" ಎಂದು ಇಂದಿನ ವಾಸ್ತವದ ಚಿತ್ರಣ ನೀಡುತ್ತಾರೆ. ಮಹಾನಗರದಲ್ಲಿ ಸಿಕ್ಕ ಸಿಕ್ಕಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತುವಾಗ "ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ" ಎಂದು ಖುಷಿ(?) ಪಡುತ್ತಾರೆ. ಯಾಂತ್ರಿಕ ಬದುಕಿಗೆ ಬೇಸತ್ತು "ಮತ್ತೆ ಎಲ್ಲರೂ ಒಮ್ಮೆ ಬಾಲ್ಯಕ್ಕೆ ಮಗುಚಿಕೊಳ್ಳುವಂಥ ಒಂದು ಮಳೆ ಬರಬೇಕು" ಎನ್ನುತ್ತಾರೆ. ಓದುತ್ತ ಓದುತ್ತ ನಿಜಕ್ಕೂ ಅಂಥಾ ಮಳೆಯೊಂದು ಬಂದಿದ್ದರೆ ಎಷ್ಟು ಒಳ್ಳೆಯದಿತ್ತು ಎನಿಸಿಬಿಡುತ್ತದೆ !  "ಅದು ನನ್ನದೇ ತಿಥಿ ಯಾಕೆಂದರೆ ನಾನು ಮಾತ್ರ ಸತ್ತಿದ್ದು ಅವನ ಪಾಲಿಗೆ..." ಎಂಬ ಸಾಲುಗಳಲ್ಲಿ ಅದೆಷ್ಟು ಭಾವ ತೀವ್ರತೆಯಿದೆಯೋ... ನನಗಂತೂ ಅಚಾನಕ್ಕಾಗಿ ಹುಟ್ಟಿ ವಿಚಿತ್ರವಾಗಿ ಕೊನೆಗೊಂಡ ಕೆಲವು ಸ್ನೇಹಗಳ, ಸ್ನೇಹಿತರ/ತೆಯರ ನೆನಪಾಯಿತು... 

          "ನಾಗರಿಕತೆ ಬೆಳೆಯುತ್ತದೆ ಅವಳ ಬೆವರಿನಲಿ, ಎದೆಯ ಬಿಸಿಯಲಿ, ಮೃದು ಉಸಿರಲಿ, ಅವಳೇ ಕೊಂದ ಕನಸಿನಲಿ" ಎಂಬ ಸಾಲುಗಳ ಓದುವಾಗ ವಿಷಾದವೊಂದು ಮೂಡುತ್ತದೆ. ಜೊತೆಗೆ ಎದೆಯಲ್ಲಿ ಬೆಳೆಯುವ ಕವಿತೆಗೆ ಇಂಥದ್ದೇ ವಿಷಯವಾಗಬೇಕೆಂಬ ಹಂಗಿಲ್ಲ ಎನಿಸುತ್ತದೆ... "ಮತ್ತೆ ಅಪರಿಚಿತರಾದೆವು ಅದೇ ರಸ್ತೆಯಲ್ಲಿ... ಒಂದು ಸಣ್ಣ ವಿದಾಯದ ಮಾತೂ ಇಲ್ಲದಂತೆ..." ಎಂಬ ಕವಿಯ ಸಾಲುಗಳು ಜೀವನದ ಪಯಣದಲ್ಲಿ ಸಿಕ್ಕೂ ಸಿಕ್ಕದಂತಿರುವವರ, ಅತಿ ಕಡಿಮೆ ಅವಧಿಯಲ್ಲಿ ಮಾತಿಲ್ಲದೇ ಹತ್ತಿರವಾದವರ ನೆನಪು ಮಾಡಿಸುತ್ತದೆ. 
ಇವರ ಎಲ್ಲ ಕವಿತೆಯಲ್ಲಿ ಪದಗಳ ಬಳಕೆ ಬಲು ಚಂದ... ಸಂದೇಶವೊಂದನ್ನು ಸೂಕ್ಷ್ಮವಾಗಿ ಹೇಳುತ್ತ, ಏನೂ ಹೇಳೇ ಇಲ್ಲವೇನೋ ಎನ್ನಿಸುವಂತೆ ಹೇಳಿ ಮುಗಿಸುವ ಛಾತಿ ಅದ್ಭುತ...‌ ಒಮ್ಮೆ ಓದಿದ ಕವಿತೆ ಇನ್ನೊಮ್ಮೆ ಓದುವಾಗ ಹೊಸ ಆಯಾಮ ಪಡೆಯುವ ರೀತಿ ಅಚ್ಚರಿ ತರಿಸುವಂತಿದೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ ಇವರ ಕೆಲವು ಕವನಗಳು ನನಗೆ ಕೈಗೆಟುಕದ ನಕ್ಷತ್ರ. ಎರಡು ಬಾರಿ ಓದಿದರೂ ಪಕ್ಕನೆ ಭಾವಾರ್ಥ ತಲೆಗೆ ಹೋಗುವುದಿಲ್ಲ... ಅಥವಾ ಅರ್ಥವಾಗದ ಇನ್ನೂ ಏನೋ ಇದೆಯೆಂಬ ಭಾವ ನನ್ನಲ್ಲಿ ಉಳಿದುಬಿಟ್ಟಿರುತ್ತದೆ‌. ಅಷ್ಟಕ್ಕೂ  2+2=4 ಎಂದು ಓದಿ ಮುಗಿಸಲು ಕವಿತೆ ಗಣಿತವಲ್ಲ !! ಅದನ್ನು ಆಸ್ವಾದಿಸುವ ರೀತಿಯೇ ಬೇರೆ... !

           ಇನ್ನು ಈಗಾಗಲೇ ಹಲವರು ಫೇಸ್ಬುಕ್ ನಲ್ಲಿ ಇವರ ಕವಿತೆಗಳನ್ನು ಓದಿಯೇ ಇರುತ್ತೀರಾ.. ಅವರಿಗೆಲ್ಲ ನಾನು ಹೇಳುವುದೇನೆಂದರೆ 'ಒಂಟಿ ಟೊಂಗೆಯ ಲಾಂದ್ರ'ದಲ್ಲಿನ ಕವಿತೆಗಳು ಅವೆಲ್ಲಕ್ಕಿಂತ ಬಹಳ ವಿಭಿನ್ನ. ಸಂಜೆ ಐದರ ಮಳೆಯ ವಿಳಾಸದಲ್ಲಿ ಕವಿತೆಗಳು ನಿಮಗಾಗಿ ಕಾದು ಕುಳಿತಿದೆ. ಒಮ್ಮೆ MyLang ಗೆ ಹೋಗಿ ಓದಿಬಿಡಿ 😍😍

(ಇವಳೇನು ಒಮ್ಮೆ ಏಕವಚನದಲ್ಲಿ, ಒಮ್ಮೆ ಬಹುವಚನದಲ್ಲಿ ಬರೆದಿದ್ದಾಳೆ ಎಂದು ಯಾರೂ ತಲೆಕೆರೆದುಕೊಳ್ಳಬೇಡಿ... ಕವಿಯ ಬಗ್ಗೆ ಹೇಳುವಾಗ ಸ್ನೇಹಿತನೆಂಬ ಸಲುಗೆಯಿಂದ ಏಕವಚನ ಬಳಸಿ, ಕವಿತೆಗಳ ಬಗ್ಗೆ ಹೇಳುವಾಗ ಕವಿ/ಸಾಹಿತಿಯೆಂದು ಗೌರವಸೂಚಕವಾಗಿ ಬಹುವಚನ ಬಳಸಿದ್ದೇನೆ... 😀)

ಹಾಸ್ಟೆಲ್ ಕತೆಗಳು

ರೂಮಿನ ಎಲ್ಲ ಹುಡುಗರು ಸೇರಿ ರಾತ್ರಿ ಹನ್ನೆರಡು ಗಂಟೆಗೆ ಬರ್ತಡೇ ಪಾರ್ಟಿ ಮಾಡುತ್ತಿದ್ದರು. ಖುಷಿಯಲ್ಲಿ ಗದ್ದಲ ಹೆಚ್ಚಿದ್ದು ಅವರ ಅರಿವಿಗೆ ಬರುವಷ್ಟರಲ್ಲಿ ಬಂದ ಸಿಡುಕು ಮೂತಿಯ ವಾರ್ಡನ್ ಚೆನ್ನಾಗಿ ಬೈದು, "ಅಪಾಲಜಿ ಲೆಟರ್ ಬರೆಯದಿದ್ದರೆ ಹಾಸ್ಟೆಲ್ನಿಂದ ಹೊರಹಾಕ್ತೇನೆ" ಎಂದು ರೂಮಿಂದ ಹೋಗುವಾಗ ಹುಡುಗರ ಖುಷಿಯೂ, ಉತ್ಸಾಹವೂ ವಾರ್ಡನ್ ಹಿಂದೆಯೇ ಹೋಗಿಬಿಟ್ಟಿತ್ತು !
*****************************

ರಾತ್ರಿ ಹತ್ತುಗಂಟೆ. ಹಾಸ್ಟೆಲ್ನಲ್ಲಿ ಅಚಾನಕ್ಕಾಗಿ ಕರೆಂಟ್ ಹೋಯಿತು. ಇದಕ್ಕಾಗೇ ಕಾದಿದ್ದರೇನೋ ಎಂಬಂತೆ ವಾರ್ಡನ್ ನಿಂದ ತುಂಬಾ ಸಲ ಬೈಸಿಕೊಂಡಿದ್ದ ಹುಡುಗರು ವಾರ್ಡನ್ ಮುಖಕ್ಕೆ ಬೆಡ್ಶೀಟ್ ಮುಚ್ಚಿ ಯರ್ರಾಬಿರ್ರಿ ಹೊಡೆದರು. ಕರೆಂಟ್ ಬರುವಷ್ಟರಲ್ಲಿ ಕತ್ತಲೆಯ ಜೊತೆಗೆ ಹುಡುಗರೂ ಮಾಯ !
*****************************

ಊರಿಗೆ ಮೊಟ್ಟ ಮೊದಲು ವಾಷಿಂಗ್ ಮಷೀನ್ ಅಂತ ಬಂದಿದ್ದು ಅವಳ ಮನೆಗೆ. ಅದನ್ನೇ ಖುಷಿಯಿಂದ ರೂಮ್ ಮೇಟ್ಸಿಗೆಲ್ಲಾ ಹೇಳುವ ಅವಳು ಹಾಸ್ಟೆಲ್ ನಲ್ಲಿ ಕೈಯ್ಯಾರೆ ಬಟ್ಟೆ ಒಗೆಯುವ ಕೆಲಸಕ್ಕೆ ಒಗ್ಗಿಹೋಗಿದ್ದಳು !
*****************************

"ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ.." ಎಂದು ಪಾಠ ಮಾಡುತ್ತಿದ್ದ ಟೀಚರ್ ನ ಮಗಳು ಹಾಸ್ಟೆಲ್ ನ ಸಪ್ಪೆ ಊಟ ತಿನ್ನಲಾಗದೇ  ಗೆಳತಿಯರೊಡನೆ ಮೆಸ್ ನಲ್ಲಿ ಹಸಿಮೆಣಸಿನ ಕಾಯಿ ಕದ್ದಿದ್ದಳು !
*****************************
- R. R. B.

ಬುಧವಾರ, ಆಗಸ್ಟ್ 12, 2020

ಕಾಮರ್ಸ್_ಕವಿತೆಗಳು_35

ಕ್ಲೈಂಟುಗಳ ಅಕೌಂಟ್ಸಿನ ಗೋಲ್ಮಾಲ್ ಗಳ
ಸುಲಭವಾಗಿ ಕಂಡುಹಿಡಿಯವ ಆಡಿಟರ್ ಗೆ
ಬೇರೆಯವರು ತನ್ನ ತಪ್ಪು ಎತ್ತಿಹಿಡಿದಾಗ
ಒಪ್ಪಿಕೊಳ್ಳಲು ಬಲು ಇರಿಸುಮುರುಸಾಗಿತ್ತು !

- R. R. B.

ಮಂಗಳವಾರ, ಆಗಸ್ಟ್ 11, 2020

ಕಾಮರ್ಸ್_ಕವಿತೆಗಳು_34

ನೈಪುಣ್ಯತೆಯಿಂದ ಜಿಎಸ್ಟಿ ಅನಾಲಿಸಿಸ್,
2A - 3B ಯ ಪ್ರತಿ ಬಿಲ್ ಮ್ಯಾಚ್ ಮಾಡುವವ
ಹಬ್ಬ ಹರಿದಿನಗಳಲ್ಲಿ, ಸಮಾರಂಭಗಳಲಿ
ಗುಂಪಿಗೆ ಸೇರದ ಪದ ಎಂದರೆ ನಂಬಲು ಕಷ್ಟ !!

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...