ಭಾನುವಾರ, ಮೇ 2, 2021

ಸಾವು


ತಿಳಿದಿರಬಹುದು ನಿನಗೆ ಸಾವಿನ ರಹಸ್ಯ
ಆದರೆ ಬದುಕಿನ ಹೃದಯದೊಳಗಿಳಿಯದೇ‌ ಅದು  ಕಾಣುವುದಾದರೂ ಹೇಗೆ?
ರಾತ್ರಿಪೂರ ಕಾಣುವ ಗೂಬೆಗೆ ಬೆಳಕಿನ ಸತ್ಯ ಗೋಚರಿಸದಂತಹ ಕುರುಡು.
ವಾಸ್ತವದಲ್ಲಿ ನೀನು ಸಾವಿನ ಶಕ್ತಿ ನೋಡಬೇಕೆಂದರೆ 
ಹೃದಯ ತೆರೆದು ಬದುಕಿನ ಶರೀರವನೊಮ್ಮೆ ನೋಡು.
ಬದುಕು - ಸಾವುಗಳೆರಡೂ ಒಂದೇ, ನದಿ - ಸಮುದ್ರಗಳು ಒಂದೇ ಆದ ಹಾಗೆ.

ಭರವಸೆ ಮತ್ತು ಬಯಕೆಗಳ ಆಳದಲ್ಲಿಹುದು 
- ಅದರಾಚೆಗಿನ ಜಗದ ಮೌನ ಅರಿವು.
ಮಂಜಿನಡಿಯ ಬೀಜ ವಸಂತದ ಕನಸು ಕಾಣುವಂತೆ, ನಿನ್ನ ಹೃದಯದ ತುಂಬೆಲ್ಲ ಶಾಶ್ವತತೆಯ ಸ್ವಪ್ನ.
ನಂಬಿಕೆಯಿಡು ಕನಸುಗಳಲಿ, ಅವೇ ಅಮರತೆಯ ಕಡೆಗಿನ ಗುಪ್ತದ್ವಾರ.
ಸಾವಿನೆಡೆಗೆ ನಿನ್ನ ಭಯ - ಅರಸನ ಮುಂದೆ ಕಂಪಿಸುವ ಕುರುಬನ ಕೈಯಂತೆ.
ಆ ನಡುಗುವಿಕೆಯ ಜೊತೆಗೆ ರಾಜನ ಕಂಡ ಖುಷಿಯಿಲ್ಲವೇ?
ಆ ಸಂತಸದಲ್ಲಿ ಕಂಪನದ ಕಡೆ ಗಮನ ಹರಿಸಲಿಲ್ಲವೇ?

ಸಾವೆಂದರೇನು, ಗಾಳಿಯಲಿ ಬೆತ್ತಲಾಗಿ ಸೂರ್ಯನಲಿ ಕರಗಿಹೋಗುವುದೇ?
ಉಸಿರಾಟ ನಿಲ್ಲುವುದೆಂದರೇನು, ಅವಿಶ್ರಾಂತ ಉಸಿರ ಅಲೆಗಳ ನಿಲ್ಲಿಸಿ, ಅದನು ಹೆಚ್ಚಿಸಿ, ವಿಸ್ತರಿಸಿ ಅಡಚಣೆಯಿಲ್ಲದೇ ದೇವರ ಸೇರುವ ಬಗೆಯೇ?

ಮೌನದ ನದಿಯಿಂದ ನೀರು ಕುಡಿದಾಗ ಮಾತ್ರ, ನಿಜವಾಗಿ ಹಾಡಬಹುದು ನೀನು
ಪರ್ವತದ ತುತ್ತತುದಿ ತಲುಪಿದಾಗ ಮಾತ್ರ, ಹತ್ತಲು ಶುರು ಮಾಡಬಹುದು ನೀನು
ಮತ್ತು ನಿನ್ನ ಕಾಲು ಭೂಮಿಯ ಸಂಪರ್ಕ ಸೇರಿದಾಗ ಮಾತ್ರ ನಿಜವಾಗಿ ನರ್ತಿಸಬಹುದು ನೀನು !

Note: ಖಲೀಲ್ ಗಿಬ್ರಾನ್ ಅವರ "On Death" ಕವಿತೆಯನ್ನು ಅನುವಾದಿಸುವ ಸಣ್ಣ ಪ್ರಯತ್ನ. ತಪ್ಪಿದ್ದಲ್ಲಿ ಕ್ಷಮಿಸಿ. ಉತ್ತಮ ಸಲಹೆಗಾಗಿ ನಿರೀಕ್ಷೆಯಲ್ಲಿ
- R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...