ಭಾನುವಾರ, ಆಗಸ್ಟ್ 16, 2020

ಪಿಕಾಸಿ

        ಅತಿ ಆಸೆಯು ಮನುಷ್ಯನನ್ನು ಹೇಗೆಲ್ಲಾ ವರ್ತಿಸುವಂತೆ ಮಾಡುತ್ತದೆಯೆಂದು ಮನಮುಟ್ಟುವಂತೆ ಚಿತ್ರಿಸಿದ ಕಿರುಚಿತ್ರ - 'ಪಿಕಾಸಿ'. ಹಳ್ಳಿಯ ವಾತಾವರಣದ ಸೊಬಗಿನ ಅನಾವರಣದ ಜೊತೆ ಜೊತೆಗೆ ದುರಾಸೆಯಿಂದ ಒಬ್ಬ ವ್ಯಕ್ತಿ ತನ್ನ ಬದುಕನ್ನು ಹೇಗೆ ನಾಶಮಾಡಿಕೊಳ್ಳುತ್ತಾನೆ ಎಂಬ ಸಂದೇಶ ನೀಡುವ ಚಿತ್ರ. 

          ಚಿತ್ರದ ಸನ್ನಿವೇಶವನ್ನು ನೋಡುತ್ತಾ ಸಾಗಿದಂತೆ ನನಗೆ ಅನಿಸಿದ ಕೆಲವು ಭಾವನೆಗಳನ್ನು ನಿಮ್ಮ ಮುಂದಿಡುತ್ತೇನೆ... ಜೀವನದ ಬಿರುಸಿನ ಓಟದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸುತ್ತಲೇ ಬಂದಿದ್ದೇವೆ. ಎಷ್ಟು ದುಡಿದರೂ, ಎಷ್ಟು ಗಳಿಸಿದರೂ ನೆಮ್ಮದಿ ಎಂಬುದೇ ಇಲ್ಲ. "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ  ತುಡಿವುದೇ ಜೀವನ" ಎಂದು ಅಡಿಗರು ಸುಮ್ಮನೇ ಹೇಳಿದ್ದಾರೆಯೇ?... ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡದೇ ಬೇರೆ ದಾರಿಯೇ ಇಲ್ಲವೇನೋ ಎನಿಸಿಬಿಟ್ಟಿದೆ. ಓಡದೇ ಹಿಂದುಳಿದುಬಿಟ್ಟರೆ ನಾವು ಸುಮ್ಮನಿದ್ದರೂ ನಮ್ಮ 'ಈಗೋ' ಸುಮ್ಮನಿರುತ್ತದೆಯೇ? ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಭಯದಿಂದ ಓಡುತ್ತಲೇ ಇದ್ದೇವೆ - ಯಾಕಾಗಿ ಓಡುತ್ತಿದ್ದೇವೆಂಬ ಸ್ಪಷ್ಟತೆ ಕೂಡ ಇಲ್ಲದೆಯೇ !!

        90% , 95% ಗಳು ಕಡಿಮೆ ಎನ್ನಿಸುವ ಕಾಲವಿದು. ಹಿಂದೊಂದು ಕಾಲವಿತ್ತು - ಪಾಸಾದರೆ ಖುಷಿಯಿಂದ ಸಿಹಿ ಹಂಚುತ್ತಿದ್ದ ಕಾಲ. ದುಡ್ಡಿಲ್ಲದಿದ್ದರೂ ಪ್ರೀತಿ, ನೆಮ್ಮದಿಯಿದ್ದ ಕಾಲ. ಕಷ್ಟಗಳ ಮಳೆಗೆ ಸಹನೆಯೆಂಬ ಕೊಡೆ ಹಿಡಿದಿದ್ದ ಕಾಲ. ಆಧುನಿಕತೆಯ ಗಂಧವಿಲ್ಲದಿದ್ದರೂ "ಡಿಪ್ರೆಷನ್" ಎಂಬ ಪದದ ಅರಿವಿಲ್ಲದ ಕಾಲ. ದೇಶ - ಸಂಸ್ಕೃತಿಯನ್ನು ಪ್ರೀತಿಸಿದ ಕಾಲ. ಹಬ್ಬ-ಹರಿದಿನಗಳನ್ನು ಮನೆಯವರೆಲ್ಲ ಸೇರಿ ಖುಷಿಯಿಂದ ಆಚರಿಸುತ್ತಿದ್ದ ಕಾಲ. ಎರಡು ಹೊತ್ತು ಊಟ ಸಿಕ್ಕರೆ ತೃಪ್ತಿ ಪಡುತ್ತಿದ್ದ ಕಾಲ... ಆ ಕಾಲದಲ್ಲಿ ಅತ್ಯಾಸೆ ಪಡುವವರ ಸಂಖ್ಯೆ ಕಡಿಮೆಯಿತ್ತು. ಈಗ ಹೆಚ್ಚಾಗಿದೆ ಅಷ್ಟೇ... 

    ಚಿತ್ರದಲ್ಲಿ ಎಲ್ಲೆಡೆ ಕೆಂಪು ಬಾವುಟ ನೆಡುವ ರಾಜಣ್ಣನ ಕ್ರಿಯೆ ನಂಗಂತೂ ಬಹಳ ಆಪ್ತವಾಯ್ತು. ನಾವು ಕೂಡ ನಮಗೇ ತಿಳಿಯದಂತೆ ಬದುಕಲ್ಲಿ ಎಲ್ಲಕಡೆ 'ಕೆಂಪು ಬಾವುಟ' ನೆಡಲು ಪ್ರಯತ್ನಿಸುತ್ತಿರುತ್ತೇವೆ. ಅದು ಮಕ್ಕಳಿಗೆ 'ನೂರಕ್ಕೆ ನೂರು ಬರಲಿ' ಎಂದು ಒತ್ತಡ ಹೇರುವುದಿರಬಹುದು, ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದೇವೆಂದು ಸುಳ್ಳೇ ನಂಬಿಸುವುದಾಗಿರಬಹುದು, ಎಲ್ಲವೂ ಇದ್ದೂ ಸರ್ಕಾರದಿಂದ ಏನೆಲ್ಲ ಫ್ರೀಯಾಗಿ ಸಿಗುತ್ತದೋ ಅದನ್ನೆಲ್ಲ ಪಡೆಯುವ ಹವಣಿಕೆ ಇರಬಹುದು... ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಸಹಜವೇ ಎನ್ನಿಸಿದರೂ ಯಾವುದೂ ಅತಿಯಾಗಬಾರದು ಅಷ್ಟೇ ! ಒಂದು ನಿಮಿಷವೂ ವಿಶ್ರಾಂತಿ ತೆಗೆದುಕೊಳ್ಳದ ರಾಜಣ್ಣನಂತಾದರೆ, ಇಳಿವಯಸ್ಸಿನಲ್ಲಿ ಸವಿಯಲು ನೆನಪುಗಳ ಬುತ್ತಿಯೇ ಇರುವುದಿಲ್ಲ ! ಒಟ್ಟಿನಲ್ಲಿ "ವರ್ಕ್ ಲೈಫ್" ಮತ್ತು "ಪರ್ಸನಲ್ ಲೈಫ್" ಗಳೆರಡನ್ನೂ ಸಮರ್ಪಕವಾಗಿ ನಿಭಾಯಿಸುವ ಛಾತಿಯಿದ್ದರೆ ಬದುಕು ಸುಂದರ...

     ಇನ್ನು 'ಪಿಕಾಸಿ'ಯ ಬಗ್ಗೆ ಹೇಳುವುದಾದರೆ ವಿನೋದ್ ಕುಲಶೇಖರನ್ ನಿರ್ದೇಶನದ, 26 ನಿಮಿಷದ ಈ ಕಿರುಚಿತ್ರ BISFF  - 2020 (ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರ ಪ್ರದರ್ಶನ)ಗೆ ಆಯ್ಕೆಯಾದ ಚಿತ್ರ. ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಯಾಮೆರಾವರ್ಕ್, ಎಡಿಟಿಂಗ್ ಎಲ್ಲವೂ ಚಂದ. ಹಿನ್ನೆಲೆ ಸಂಗೀತ ತುಂಬ ಇಷ್ಟವಾಯ್ತು... ಸಾಧ್ಯವಾದರೆ ಒಮ್ಮೆ ಕಣ್ತುಂಬಿಕೊಳ್ಳಿ.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...