ಶನಿವಾರ, ಜುಲೈ 22, 2017

ಭಿನ್ನ

ಕಾಡುಮಲ್ಲಿಗೆಯು ಪಸರಿಸುವ ಘಮಕೂ 
ಕಾಡುವಾ ಕಲ್ಪನೆಗಳ ಕೌತುಕದ ಲೇಪ 
 ಶ್ವೇತವರ್ಣೆಯ ಕೋಮಲ ದಳಗಳೂ 
ಶೇಖರಿಸಿರಬಹುದು ಸಾವಿರ ಸಂತಾಪ.... 

ಹೋಳಿಯ ಬಣ್ಣಗಳ ಸರಿಗಮದ ಹಿಂದೆ 
ಇದೆಯೇ ಅವ್ಯಕ್ತಭಯದ ಚರಮಗೀತೆ?... 
ಮನಕೆ ಹತ್ತಿದ ಬಣ್ಣ ಮಾಸುವಾ ಮುನ್ನ 
ತೊಳೆದು ಆಗಬೇಕು - ನಿರ್ಭಾವ, ನಿರಾಳ... 

ಸಂತೆಯ ಗೌಜಿ ಗದ್ದಲದ ನಡುವೆಯೂ 
ಕೂಡಿರುವ ಏಕಾಂಗಿಯ ತೀರದ ರೋದನ 
ದೂರದಿ ನಿಂತ ಆಕೆಯಲಿ ಅಸೂಯೆಯ ಛಾಯೆ ! 
ಎಂಥಹ ವಿಲಾಸೀ ಬದುಕು ಇವರದೆಂದು... 

ಜೀವನ ವಿಲಾಸಿಯದೋ ? ಇಲ್ಲಾ ವಿರಾಗಿಯದೋ? 
ತಿಳಿವೆಂದರೆ ತಿಳಿಯದ ಮನಕೂ ತಿಳಿವ ಹಂಬಲ 
ಇಳೆಯಲಿ ಆದಿ - ಅಂತ್ಯಗಳ ನಡುವಣ ದೂರ... 

ಆಸೆ - ಕನಸುಗಳ ನಿರಂತರ ಘರ್ಷಣೆಯಲಿ 
ಅಪಾರ ಗೊಂದಲವೆಂಬ ಶಾಖದಾ ಉತ್ಪತ್ತಿ ! 
ನೋಡಿದಾತ ನಗುತ್ತಿದ್ದಾನೆ - ಗಹಗಹಿಸಿ 
ಹುಚ್ಚುತನದ ಪರಮಾವಧಿ ಅಂದರೆ ಇದೇ‌.. ಎಂದು 
ಅವರಿವರ ಹಲುಬಾಟ - ಬಾಯಿಗೆ ಬಂದಂತೆ 
ತಾವಂದುಕೊಂಡಿದ್ದೇ ಅಪ್ಪಟ ಸತ್ಯದಂತೆ 
ನುಣ್ಣಗೇ ಅಲ್ಲವೇ ದೂರದ ಆ ಬೆಟ್ಟಗಳು ?... 

ಜೊತೆಯಿರಲು ನಡುಗಿತಿದೆ ನೆರಳೂ ಸಹ 
ಕೊಡುವ ಕಠಿಣ ತೀರ್ಮಾನಕೆ ಬೆಚ್ಚಿರಬಹುದೇ ? 
ಅಥವಾ ಒಂಟಿತನವ ಅತಿಯಾಗಿ ನೆಚ್ಚಿರಬಹುದೇ ? 

ನಗಣ್ಯವಾದ ' ನ ' ಕಾರಗಳ ಬದಿಗೆ ಸರಿಸಿ 
ಸಾಗಬೇಕೆ ಸಂಕಲಿತ ಸಂಪದದ ಕಡೆಗೆ? 
ಕ್ಷಣ ಕ್ಷಣಕೂ ಯೋಚನೆಯ ಸ್ವರೂಪ 
ವಿಚ್ಛಿನ್ನ ಮನದಿ ಮೂಡುವ ಭಾವಗಳೆಂದೂ ವಿ'ಭಿನ್ನ'... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...