ಶನಿವಾರ, ಜುಲೈ 22, 2017

ಭೂಮಿಜೆಯ ಆಂತರ್ಯದಿ..

 ಕರಗದೇ ಈ ದಟ್ಟ ಕಾನನದ ಕಾರಿರುಳು 
ಭಾವಗಳ ಸ್ತಬ್ಧಗೊಳಿಸಿ ನಿರ್ವಾಣವಾಗಿಹ ಕಲ್ಲು ? 
ಅಲ್ಲೆಲ್ಲೋ ಕೇಳುತಿಹ ಜೀರುಂಡೆಯ ಸದ್ದು 
ಮರಗಳಿಂದ ಇಳಿಬಿದ್ದ ಹಲವಾರು ಬಿಳಲು 
ಕಣ್ಣಳತೆಯ ದೂರಕೂ ವಿಪಿನವೇ ದಾರಿ 
ರೋದನವೇ ಈಗ ನೋವ ತಿಳಿಸುವ ವೈಖರಿ?... 
 
ಅದೆಷ್ಟೋ ತುಂಬು ಹರೆಯದ ಹೊಂಗನಸುಗಳು 
ಬಾಳಪಯಣಕೆ ಎಂದು ಬುತ್ತಿಯಾಗಿಸಿದ ಬಯಕೆಗಳು 
ಉದ್ಯಾನದಿ ಸಖಿಯೊಡನೆ ತೀರದ ತುಂಟಾಟ 
ಅರೆಕ್ಷಣದಿ ಮರೆಯಾಗೋ ಮೆಚ್ಚುಗೆಯ ಕುಡಿನೋಟ 
ಮೊಗೆದಷ್ಟೂ ಉಕ್ಕುವ ಆ ಮಮತಾಮಯಿ ಪ್ರೇಮ 
ತನು - ಮನವ ತಣಿಸುವಾ ವಿಹಂಗಮ ವಿದೇಹ.... 

ಹೆಜ್ಜೆಯ ಗೆಜ್ಜೆಗೆ ದನಿಯಾದ ಶ್ರೀರಾಮ 
ಮನದಂಗಳದಿ ಅನುಕ್ಷಣವೂ ಅವನದೇ ನಾಮ 
ತೊಡುವ ಕಾಲುಂಗುರ, ಸಿಂಧೂರಕೆ ಆತನೇ ಒಡೆಯ 
ಒಲವ ಪ್ರತಿದನಿಗೂ ಪ್ರತಿಧ್ವನಿಯಾಗೋ ಇನಿಯ 
ಜೀವಕೆ ಜೀವ ಬೆಸೆಯಲು ರಾಘವನಿದ್ದಾಗ 
ಭಯ ಹುಟ್ಟಿಸಲೇ ಇಲ್ಲ ಆ ದಂಡಕಾರಣ್ಯ...
 
ಕಣ್ಣಂಚಿನಲೇ ಸಾವಿರ ಸಂದೇಶಗಳ ರವಾನೆ 
ಬೇಕಿಲ್ಲ ಪ್ರತಿ ಚಲನೆಗೂ ಯಾರ ಅನುಮೋದನೆ 
ತನು ಹೂವಾಗುತ್ತಿತ್ತು ಅವನಪ್ಪುಗೆಯಲಿ 
ತೇಲಾಡುವ ಅನುಭವ ಆನಂದದ ಅಲೆಯಲಿ 
ಕನಸುಗಳ ಗಿಡದಲಿ ನೂರಾರು ನವಪಲ್ಲವ 
ಸಂತೃಪ್ತಿಯ ಮಳೆಯಲಿ ತೊಯ್ದಿತ್ತು ಈ ಜೀವ.... 

ಬದುಕ ಪುಟದಲಿ ಸವಿನೆನಪ ರಂಗೋಲಿ 
ಪ್ರಸವಿಸೋ ಭಾವಗಳೋ ಜೀಕೋ ಜೋಕಾಲಿ 
ಸಿಗಬಹುದೇ ಮತ್ತೆ ಗತಿಸಿದ ಆ ದಿನಗಳು? 
ಶ್ರೀರಾಮನ ಸನಿಹದಿ ಎಲ್ಲ ಮರೆವ ಕ್ಷಣಗಳು ? 
 
ವಾಯುವೇಗದಲಿ ಯೋಚನಾಲಹರಿಯ ವಿಹಾರ 
ಲಭಿಸುವುದೇ ನನ್ನ ಈ ಪರಿಸ್ಥಿತಿಗೆ ಪರಿಹಾರ ? 
ನಿರ್ಮಾನುಷ ಅರಣ್ಯದಲಿ ವಿಚಿತ್ರ ಏಕಾಂತ 
ಒಬ್ಬಳೆ ಎನ್ನಲು ಬಿಡದ ಒಡಲಲಿಹ ಕಂದಮ್ಮ 
 ಏನೂ ತೋಚದಾ ವೈದೇಹಿಯ ಆಂತರ್ಯದ ಪ್ರಶ್ನೆ 
ಮುಂದೆ ಹಾದಿ ಯಾವುದೋ
 ಪಯಣ ಎಲ್ಲಿಗೋ ?...
 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...