ಶನಿವಾರ, ಜುಲೈ 22, 2017

ಸಶೇಷ

ಕಾಡುವ ಯಾಂತ್ರಿಕತೆಯ ಮಡಿಲ ಸೇರಿದ ಮಗು 
ಅಲ್ಲೆಲ್ಲೋ ಕಾಣೆಯಾದ ನಿಷ್ಕಲ್ಮಷ ಮುಗ್ಧ ನಗು 
ಎಷ್ಟು ಕಟ್ಟಿದರೂ ಮುಗಿಯದಾ ವಾಯಿದೆ 
ಅನುಸಂಧಾನವನೂ ಮುಚ್ಚಿದ ಸ್ವಾರ್ಥದಾ ಪರದೆ.... 

ಮನವ ಸೆಳೆದರೂ ಗಾರುಡಿಗನಾ ಹೊದಿಕೆ 
ಅಂತರ್ಮುಖಿಯೀಗ ಹೃದಯದಾ ತಡಿಕೆ 
ಆಂತರ್ಯದಲೋ ವಿರೋಧಾಭಾಸಗಳ ಹಾವಳಿ 
ಬಾಹ್ಯದಿ ಮಾತ್ರ ಹೊಳೆವ ಚಿತ್ತಾರದಾ ರಂಗೋಲಿ.... 

ಸ್ತಬ್ಧವಾಗಿರೆ ಅನುರಾಗವೀಣೆಯ ನಾದ 
ಮೇಘವನಗಲಿದ ನೀಲಾಕಾಶವೂ ವಿಶದ 
ಅಮೂರ್ತದಲೇ ಅಂತರ್ಧಾನವಾದ ಲಹರಿ 
ನುಚ್ಚುನೂರಾದ ಬಣ್ಣ ಬಣ್ಣದ ಕಲಾಕುಸುರಿ.... 

 ಅದಾಗಲೇ ಬತ್ತಿಹೋದ ಭಾವಗಳಿಗೆ 
ಅಳಿದುಳಿದ ನೆನಪುಗಳ ಸವಿ ಆಶ್ಲೇಷ 
ಪ್ರಸವಿತ ಭಾವನೆಗಳಾಗಲೇ ಪರಿಣೀತ 
ಕಲ್ಪನೆಯ ಹರಿವಿಗೆ ತಾತ್ಪರ್ಯದ ಸೇತುಬಂಧ.... 

 ಸುರಿವ ಜಡಿಮಳೆಗೆ ಪಲ್ಲವಿಸಿತೇ ಶಿಲಾಲತೆ? 
ಮಾಸಿಹೋದೀತೆ ಸುಂದರ ಬದುಕ ಬಣ್ಣಗಳು? 
ಕಾಲಚಕ್ರದಿ ಸಿಲುಕಿ ನಲುಗಿಹೋದರೂ 
ಉದಯಿಸುವ ಆಲೋಚನೆಗಳೆಂದೂ ಸಶೇಷ.... 
 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...